ಮದ್ಯ ಮಾರಾಟ ಸಂಪೂರ್ಣವಾಗಿ ನಿಲ್ಲಿಸಿ
Team Udayavani, May 8, 2020, 3:41 PM IST
ಹುನಗುಂದ: ಮದ್ಯ ಮಾರಾಟ ನಿಲ್ಲಿಸುವಂತೆ ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕ ಸಂಘದ ಪದಾಧಿಕಾರಿಗಳು ತಹಶೀಲ್ದಾರ್ ಬಸವರಾಜ ನಾಗರಾಳ ಅವರಿಗೆ ಮನವಿ ಸಲ್ಲಿಸಿದರು.
ಹುನಗುಂದ: ರಾಜ್ಯದಲ್ಲಿ ಮದ್ಯ ಮಾರಾಟ ಸಂಪೂರ್ಣವಾಗಿ ನಿಲ್ಲಿಸುವಂತೆ ಒತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕ ಸಂಘ ತಹಶೀಲ್ದಾರ್ ಬಸವರಾಜ ನಾಗರಾಳ ಅವರಿಗೆ ಮನವಿ ಸಲ್ಲಿಸಿತು.
ಗ್ರಾಕೋಸ್ ತಾಲೂಕ ಸಂಚಾಲಕ ಮಹಾಂತೇಶ ಹೊಸಮನಿ ಮಾತನಾಡಿ, ರಾಜ್ಯಾದ್ಯಂತ ಮದ್ಯ ನಿಷೇಧಿಸುವಂತೆ ಹಲವಾರು ವರ್ಷಗಳಿಂದ ರಾಜ್ಯದ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಗಳು ಮತ್ತು ವಿವಿಧ ಮಹಿಳಾ ಸಂಘಟನೆಗಳು ನೇತೃತ್ವದಲ್ಲಿ ಅನೇಕ ಹೋರಾಟ ಮಾಡುತ್ತಿವೆ. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ. ಕೋವಿಡ್-19 ವೈರಸ್ ಭೀತಿಯಿಂದ ಮದ್ಯ ಮಾರಾಟವನ್ನು ಸಂಪೂರ್ಣ ಬಂದ್ ಮಾಡಿದ್ದರಿಂದ ವ್ಯಸನದಿಂದ ಮುಕ್ತವಾಗಿ ಉತ್ತಮ ಜೀವನವನ್ನು ನಡೆಸುತ್ತಿದ್ದರು. ಮತ್ತೇ ಸರ್ಕಾರ ಮದ್ಯ ಮಾರಾಟಕ್ಕೆ ಅನುಮತಿ ನೀಡಿರುವುದು ದೊಡ್ಡ ಪ್ರಮಾದವಾಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಮದ್ಯ ಸೇವನೆ ಕಡಿಮೆ ಮಾಡುವ ನಿಟ್ಟಿನಲ್ಲಿ ಮದ್ಯ ಮುಕ್ತ ಕರ್ನಾಟಕಕ್ಕಾಗಿ ಸರ್ಕಾರ ನೀತಿ ಜಾರಿಗೊಳಿಸಬೇಕು. ಅಲ್ಲಿವರಗೂ ಕರ್ನಾಟಕದಲ್ಲಿ ಮದ್ಯ ಮಾರಾಟ ನಿಲ್ಲಿಸಬೇಕು. ಪ್ರತಿಯೊಂದು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಮದ್ಯವರ್ಜನ ಕೇಂದ್ರ ಸ್ಥಾಪಿಸಬೇಕು. ಅತಿಯಾದ ಕುಡಿತಕ್ಕೆ ಒಳಗಾದ ವ್ಯಕ್ತಿಗಳನ್ನು ಗುರುತಿಸಿ ಮದ್ಯ ವರ್ಜನ ಕೇಂದ್ರಗಳಿಗೆ ಸೇರಿಸಿ ಅವರ ಆರೋಗ್ಯ ಕಾಪಾಡುವ ಕೆಲಸ ಮಾಡಬೇಕು ಎಂದರು. ಗ್ರಾಕೋಸ್ ಸಂಘದ ಸದಸ್ಯರಾದ ಗೀತಾ ಬುರಲಿ, ಸೈರಾಬಾನು ಹಿರೇಮನಿ, ಸೌಮ್ಯಾ ವಟವಟಿ, ಯಮನೂರ ಮಾದರ, ಎಸ್.ಎಂ. ಭದ್ರಶೆಟ್ಟಿ, ಎಸ್.ಪಿ. ಪರಗೌಡ್ರ ಇದ್ದರು.