ಉದ್ಯೋಗ ಖಾತ್ರಿಯಲ್ಲಿ 100 ದಿನದ ಬದಲಾಗಿ 200 ದಿನ ಕೆಲಸ ಕೊಡಿ
ಇಲ್ಲವಾದಲ್ಲಿ ಕೂಲಿ ಕಾರ್ಮಿಕರಿಗೆ 20 ರೂ.ಗೆ ಹೆಚ್ಚಿಸಿ ಖಾತೆಗೆ ಜಮಾ ಮಾಡಬೇಕು
Team Udayavani, Sep 21, 2022, 5:53 PM IST
ಬಾಗಲಕೋಟೆ: ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ನೀಡುವಲ್ಲಿ ವಿಳಂಬ ಧೋರಣೆ ನಿಲ್ಲಿಸಿ, ಜನರು ಕೆಲಸಕ್ಕೆ ಅರ್ಜಿ ಹಾಕಿದ ತಕ್ಷಣ ಕೆಲಸ ಒದಗಿಸಬೇಕು ಎಂದು ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಮಂಗಳವಾರ ಜಿಲ್ಲಾಡಳಿತ ಭವನದ ಎದುರು ಕೂಲಿ ಕಾರ್ಮಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಮೂಲಕ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಸಂಘಟನೆಯ ಪ್ರಮುಖರು ಮಾತನಾಡಿ, ಸರ್ಕಾರದ ಹೊಸ ತಂತ್ರಜ್ಞಾನ ಹಾಗೂ ನೀತಿಗಳಿಂದ ಕಾರ್ಮಿಕರು ಸಂಕಷ್ಟ ಅನುಭವಿಸುವಂತಾಗಿದೆ. ಆದ್ದರಿಂದ ಕೂಲಿ ಕಾರ್ಮಿಕರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನೀಡುತ್ತಿರುವ 100 ದಿನಗಳ ಕೂಲಿ ಒಂದು ಕುಟುಂಬ ನಡೆಸಲು ಸಾಕಾಗುತ್ತಿಲ್ಲ. ಆದ್ದರಿಂದ ಕೂಲಿ ದಿನಗಳು 200ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಅಧಿಕಾರಿಗಳು ಮಹಾತ್ಮ ಗಾಂಧಿ ರಾಷ್ಟ್ರೀಯ ಕೆಲಸ ನಿರ್ವಹಿಸಲು ಸಾಮಗ್ರಿಗಳ ಬಳಕೆ ಹಾಗೂ ರಿಪೇರಿಗಾಗಿ ಪ್ರತಿ ದಿನ 10ರೂ. ಕೂಲಿ ಹಣದ ಜೊತ ಸೇರಿಸಿ ನೀಡಲಾಗುತ್ತಿತ್ತು. ಅದನ್ನು ಕೇಂದ್ರ ಸರಕಾರ ನಿಲ್ಲಿಸಿದೆ. ನಮಗೆ ಗ್ರಾಮ ಪಂಚಾಯತಿಯಿಂದ ಸಾಮಗ್ರಿಗಳು ಪೂರೈಸಿ, ಇಲ್ಲವಾದಲ್ಲಿ ಕೂಲಿ ಕಾರ್ಮಿಕರಿಗೆ 20 ರೂ.ಗೆ ಹೆಚ್ಚಿಸಿ ಖಾತೆಗೆ ಜಮಾ ಮಾಡಬೇಕು ಎಂದರು.
ಕಾರ್ಮಿಕರಿಗೆ ಕಾನೂನಿನಂತೆ ಕೆಲಸ ಮಾಡಿದ 15 ದಿನಗಳ ಒಳಗಾಗಿ ಕೂಲಿ ಪಾವತಿ ಆಗಬೇಕು. ಹಲವು ಬಾರಿ 2 ತಿಂಗಳು ಕಳೆದರೂ ಕೂಲಿ ಪಾವತಿ ಆಗಿಲ್ಲ. ಅದಕ್ಕೆ ಕಾನೂನಿನಲ್ಲಿ ವಿಳಂಬ ಭತ್ಯೆ ಶೇ.6.5 ನೀಡುವ ಅವಕಾಶ ವಿದ್ದರೂ ಈವರೆಗೆ ಯಾವುದೇ ಕಾರ್ಮಿಕರ ಖಾತೆಗೆ ಜಮಾ ಮಾಡಿಲ್ಲ. ಕಾರ್ಮಿಕರಿಗೆ ಕೂಲಿ ಪಾವತಿ ವಿಳಂಬವಾದರೆ, ಭತ್ಯೆ ನೀಡಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ವೈ.ಆರ್. ಪೂಜಾರ, ಸಾಹಿಬಬಿ ಬೈವಾಡಗಿ, ಆರ್.ಡಿ. ಹೂವಿನಹಳ್ಳಿ, ಕೆ.ಡಿ. ಆನೆಹೊಸುರ, ಆರ್.ಬಿ. ಶಿರೂರ, ರೇಣುಕಾ ಪಾಲ್ಗೊಂಡಿದ್ದರು.