ಕೋವಿಡ್ ಮಾಹಿತಿ ಪಡೆದ ಕುಮಾರಸ್ವಾಮಿ
Team Udayavani, May 31, 2020, 11:38 AM IST
ಗುಳೇದಗುಡ್ಡ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಟ್ಟಣದ ಜೆಡಿಎಸ್ ಮುಖಂಡ, ಜಿಪಂ ಮಾಜಿ ಉಪಾಧ್ಯಕ್ಷ ಹನಮಂತ ಮಾವಿನಮರದ ಜತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬಾಗಲಕೋಟೆ ಜಿಲ್ಲೆಯಲ್ಲಿ ಲಾಕ್ಡೌನ್ ನಿಂದ ಸಂಕಷ್ಟಕ್ಕೊಳಗಾಗಿರುವ ರೈತ, ನೇಕಾರರ ಬಗ್ಗೆ ಮಾಹಿತಿ ಪಡೆದುಕೊಂಡರು.
ಪಟ್ಟಣದ ಜೆಡಿಎಸ್ ಮುಖಂಡ, ಜಿಪಂ ಮಾಜಿ ಉಪಾಧ್ಯಕ್ಷ ಹನಮಂತ ಮಾವಿನಮರದ ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಸಿಗದಿರುವುದು, ಬೆಳೆದ ಬೆಳೆಗಳಿಗೆ ಮಾರುಕಟ್ಟೆ ಸಿಗದಿರುವುದು, ಬೆಳೆಗಳಿಗೆ ನಿರೀಕ್ಷಿತ ಬೆಲೆ ಸಿಗುತ್ತಿಲ್ಲ. ಹೀಗೆ ಕ್ಷೇತ್ರದ ರೈತರ ಕುರಿತು ಸಮಸ್ಯೆಗಳ ಬಗ್ಗೆ ಕುರಿತು ಕುಮಾರಸ್ವಾಮಿ ಅವರಿಗೆ ಮಾಹಿತಿ ನೀಡಿದರು. ಕೋವಿಡ್ ಮಹಾಮಾರಿಯ ವಿರುದ್ಧ ಕೆಲಸ ಮಾಡುತ್ತಿರುವ ತಾಲೂಕು ಹಾಗೂ ಗ್ರಾಮ ಪಂಚಾಯತ್ಗಳಿಗೆ ಸರಕಾರ ಅನುದಾನವನ್ನು ಸರಿಯಾಗಿ ನೀಡುವಂತೆ ಸರಕಾರದ ಗಮನಕ್ಕೆ ತರಬೇಕೆಂದು ಒತ್ತಾಯಿಸಿದರು.
ನೇಕಾರ ಸಮ್ಮಾನ್ ಯೋಜನೆಯಡಿಯಲ್ಲಿ ನೇಕಾರರಿಗೆ ನೀಡುವ 2ಸಾವಿರ ರೂ. ಪ್ರೋತ್ಸಾಹ ಧನ ಐದು ಸಾವಿರ ರೂ.ಗಳಿಗೆ ಏರಿಸಬೇಕು. ಯೋಜನೆಯನ್ನು ನೇಕಾರಿಕೆ ವೃತ್ತಿ ಮಾಡುವ ಎಲ್ಲ ನೇಕಾರರಿಗೂ ಅನ್ವಯಿಸುವಂತೆ ಮಾಡಬೇಕು. ನೇಕಾರಿಕೆಗೆ ಮುಖ್ಯ ಮಾರುಕಟ್ಟೆ ಮಹಾರಾಷ್ಟ್ರ. ಅಲ್ಲಿಯೇ ಸೋಂಕು ಹೆಚ್ಚಿರುವುದರಿಂದ ನೇಕಾರಿಕೆ ವೃತ್ತಿಗೆ ಸಾಕಷ್ಟು ಪೆಟ್ಟು ಬಿದ್ದಿದೆ. ಸದ್ಯ ಮಾರುಕಟ್ಟೆಯೇ ಇಲ್ಲದಂತಾಗಿದ್ದು, ನೇಕಾರರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂದು ಹನಮಂತ ಮಾವಿನಮರದ ಅವರು ಕುಮಾರಸ್ವಾಮಿ ಅವರಿಗೆ ಮಾಹಿತಿ ನೀಡಿದರು.
ಕೋವಿಡ್ ವೈರಸ್ ನಿಯಂತ್ರಣದ ವಿಷಯವಾಗಿ ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ಲಾಕ್ಡೌನ್ ನಿಂದ ಸಂಕಷ್ಟಕ್ಕೊಳಗಾಗಿರುವ ರೈತ, ನೇಕಾರರು, ಎಲ್ಲ ದುಡಿಯುವ ವರ್ಗದ ಪರವಾಗಿ ಸರಕಾರ ಇಲ್ಲಿಯವರೆಗೆ ಅವರಿಗೆ ಪರಿಹಾರ ರೂಪದಲ್ಲಿ ಯಾವ ಕ್ರಮ ಕೈಗೊಂಡಿರುವ ಬಗ್ಗೆ ಮಾಹಿತಿ ನೀಡಿದರು. ಈ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದು, ಆ ವರದಿಯನ್ನಾಧರಿಸಿ, ಸರಕಾರದ ಗಮನ ಸೆಳೆಯಲಾಗುವುದು ಎಂದು ಹೇಳಿದರು.