ನವನಗರದಲ್ಲಿ ಹೆಸರಿಗಿವೆ ಗ್ರಂಥಾಲಯಗಳು
Team Udayavani, Nov 8, 2019, 11:45 AM IST
ಬಾಗಲಕೋಟೆ: ಇಲ್ಲಿ ಗ್ರಂಥಾಲಯ ಇದೆ, ಸ್ವಂತ ಕಟ್ಟಡವೂ ಇದೆ ಆದರೆ ಹುದ್ದೆಗಳೆಲ್ಲ ಖಾಲಿ ಇವೆ.. ಇಲ್ಲಿ ಸಾವಿರಾರು ಗ್ರಂಥಗಳೂ ಇವೆ ಆದರೆ ಎಲ್ಲವೂ ಕೊಠಡಿಯಲ್ಲಿ ಭದ್ರವಾಗಿವೆ..ನಾಲ್ಕಾರು ಪತ್ರಿಕೆಗಳು ಬಿಟ್ಟರೆ ಬೇರ್ಯಾವ ಪತ್ರಿಕೆಗಳು ಬರಲ್ಲ..
ಇದು ನವನಗರದ ಸೆಕ್ಟರ್ ನಂ.58ರಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಒಂದು ಶಾಖೆ ಸ್ಥಿತಿ. ಸೆಕ್ಟರ್ ನಂ.58ರ ಲಕ್ಷ್ಮೀದೇವಿ ದೇವಸ್ಥಾನ ಹಾಗೂ ಉದ್ಯಾನವನ ಆವರಣದಲ್ಲಿ ಇಲಾಖೆಯ ಎಸ್ಎಫ್ ಸಿಯಡಿ 2008-09ರಲ್ಲಿ 5.95 ಲಕ್ಷ ಖರ್ಚು ಮಾಡಿ ಗ್ರಂಥಾಲಯಕ್ಕೆ ಸ್ವಂತ ಕಟ್ಟಡವನ್ನೂ ನಿರ್ಮಿಸಲಾಗಿದೆ. 4 ಕೊಠಡಿಗಳೂ ಇವೆ ಆದರೆ ಪತ್ರಿಕೆ ಓದಲು ಮಾತ್ರ ಬಳಕೆಯಾಗುತ್ತಿದೆ. ಮುಖ್ಯವಾಗಿ ಇಲಾಖೆಯಿಂದ ನೇಮಕಗೊಂಡ ಗ್ರಂಥಾಲಯ ಸಹವರ್ತಿ ಬೆಳಗ್ಗೆ ಬಂದು ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿ ಹೋದರೆ ಮತ್ತೆ ಬರುವುದು ಸಹಿ ಹಾಕಲು ಮಾತ್ರ ಎಂದು ಇಲ್ಲಿನ ಓದುಗರು ದೂರುತ್ತಾರೆ. ಇಲ್ಲಿ ಗ್ರಂಥಾಲಯ ಸಹಾಯಕ, ಗ್ರಂಥಪಾಲಕ ಹಾಗೂ ಗ್ರಂಥಾಲಯ ಸಹವರ್ತಿ ಜತೆಗೆ ಒಬ್ಬ ಅಟೆಂಡರ್ (ಸಿಪಾಯಿ) ಕಾರ್ಯನಿರ್ವಹಿಸ ಬೇಕು. ಆದರೆ, ಆ ಹುದ್ದೆಗಳೆಲ್ಲ ಖಾಲಿ ಇವೆ. ಹೀಗಾಗಿ ಗ್ರಂಥಾಲಯ ಸಹವರ್ತಿಯೇ ಇಲ್ಲಿ ಎಲ್ಲವನ್ನೂ ನೋಡಿಕೊಳ್ಳಲು ಜವಾಬ್ದಾರಿ ವಹಿಸಲಾಗಿದೆ.
ಕೊಠಡಿ ಸೇರಿವೆ ಗ್ರಂಥಗಳು: ಈ ಶಾಖಾ ಗ್ರಂಥಾಲಯಕ್ಕೆ ಸಾವಿರಾರು ಗ್ರಂಥಗಳು ಬಂದಿವೆ. ಅವುಗಳೆಲ್ಲ ಕೊಠಡಿ ಸೇರಿವೆ. ಓದುಗರಿಗೆ ಅವುಗಳನ್ನು ಒದಗಿಸುವ ಕಾರ್ಯವಾಗಿಲ್ಲ. ಆ ಗ್ರಂಥಗಳು ಇಡಲೆಂದೇ ಲಕ್ಷಾಂತರ ಖರ್ಚು ಮಾಡಿ ರ್ಯಾಕ್ ತರಿಸಲಾಗಿದೆ. ಖುರ್ಚಿ, ಟೇಬಲ್ ಎಲ್ಲವೂ ಇವೆ. ಆದರೆ ಪುಸ್ತಕಗಳೇ ಇಲ್ಲದ ಕಾರಣ ಓದುಗರ ಸಂಖ್ಯೆಯೂ ಕಡಿಮೆಯಾಗಿದೆ. ಹಿರಿಯ ನಾಗರಿಕರು ಕೇವಲ ಪತ್ರಿಕೆ ಓದಲು ಮಾತ್ರ ಇಲ್ಲಿಗೆ ಬರುತ್ತಾರೆ. ರಾಜ್ಯಮಟ್ಟದ ನಾಲ್ಕು ಪತ್ರಿಕೆ ಬಿಟ್ಟರೆ ಇಲ್ಲಿ ಬೇರ್ಯಾವ ಪತ್ರಿಕೆಗಳು, ಗ್ರಂಥಗಳು ಇಲ್ಲ. ಇಲಾಖೆಯ ನಿಮಯಮಾನುಸಾರ ಕನ್ನಡ ಸಾಹಿತ್ಯ, ಇತಿಹಾಸ, ಕವನ ಸಂಕಲನ, ಸ್ಮರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗುವ ಪುಸ್ತಕಗಳಿರಬೇಕು.
ಜತೆಗೆ ಅವುಗಳನ್ನು ಕಡ್ಡಾಯವಾಗಿ ವಿಷಯವಾರು ವರ್ಗೀಕರಣ, ಸೂಚಿಕರಣ ಮಾಡಿಟ್ಟಿರಬೇಕು. ವಿಷಯವಾರು ವಿಭಾಗಕ್ಕೆ ಕೈ ಹಾಕಿದರೆ ಅದೇ ವಿಷಯಕ್ಕೆ ಸಂಬಂಧಿಸಿದ ಗ್ರಂಥಗಳು ಓದುಗರ ಕೈ ಸೇರಬೇಕು ಆದರೆ ಇಲ್ಲಿಗೆ ಬಂದ ಸಾವಿರಾರು ಪುಸ್ತಕಗಳು ವರ್ಗೀಕರಣಗೊಳ್ಳದೇ, ರ್ಯಾಕ್ನಲ್ಲಿಡದೇ, ಓದುಗರ ಕೈ ಸೇರದೇ ಭದ್ರವಾಗಿ ಬೀಗ ಹಾಕಿದ ಕೊಠಡಿ ಸೇರಿವೆ. ಬಾಗಿಲು ಹಾಕೇ ಇರುವ ಗ್ರಂಥಾಲಯ: ನವನಗರದ ಸೆಕ್ಟರ್ ನಂ.58ರ ಗ್ರಂಥಾಲಯದ ಕಥೆ ಹೀಗಾದರೆ ಸುಶಿಕ್ಷಿತರೇ ಇರುವ ಬೃಂದಾವನ (63ಎ) ಸೆಕ್ಟರ್ನಲ್ಲೂ ಶಾಖಾ ಗ್ರಂಥಾಲಯವಿದ್ದು, ಇಲ್ಲಿ ಗ್ರಂಥಾಲಯ ಸಹಾಯಕ ಮತ್ತು ಓರ್ವ ಮಹಿಳಾ ಸಿಪಾಯಿ ಇದ್ದಾರೆ.
ಗ್ರಂಥಾಲಯ ಸಹಾಯಕರಿಗೆ 30 ಸಾವಿರ ಮೇಲ್ಪಟ್ಟು ಸಂಬಳವಿದೆ. ಸಿಪಾಯಿಗೆ ಮಾಸಿಕ 2 ಸಾವಿರ ಓಚರ್ ವೇತನ ಕೊಡಲಾಗುತ್ತದೆ. ಆದರೆ, ಇಲ್ಲಿನ ಗ್ರಂಥಾಲಯ ಮಾತ್ರ ಬಾಗಿಲು ತೆರೆಯುವುದನ್ನು ನೋಡಿದ್ದೇ ವಿರಳ ಎನ್ನುತ್ತಾರೆ ಇಲ್ಲಿನ ಜನರು.
ನವನಗರದ ಸೆಕ್ಟರ್ ನಂ.58ರಲ್ಲಿ ಗ್ರಂಥಾಲಯವಿದೆ ಇಲ್ಲಿ ಪತ್ರಿಕೆಗಳು ಮಾತ್ರ ಬರುತ್ತವೆ. ಯಾವುದೇ ಗ್ರಂಥಗಳಿಲ್ಲ. ನಾವು ನಿತ್ಯ ಪತ್ರಿಕೆ ಓದಿ ಮನೆಗೆ ಹೋಗುತ್ತೇವೆ. ಇಲ್ಲಿ ಒಬ್ಬ ಸಿಬ್ಬಂದಿ ಇದ್ದರೂ ಅವರು ನಿತ್ಯ ಬರಲ್ಲ. ನಮ್ಮದೇ ಏರಿಯಾದಲ್ಲಿ ವಾಸಿಸುವ ಒಬ್ಬ ಸಿಪಾಯಿ ಇದ್ದು, ಅವರೇ ಎಲ್ಲವನ್ನೂ ನೋಡಿಕೊಳ್ಳುತ್ತಾರೆ. -ಆರ್.ಎಂ. ಪಾಟೀಲ, ಸೆಕ್ಟರ್ ನಂ.58ರ ಹಿರಿಯ ನಾಗರಿಕರು
–ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
ತಾಕತ್ತಿದ್ದರೆ ಯತ್ನಾಳ್ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್
Bagalkote; ಯತ್ನಾಳ್ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ…: ಶಿವಾನಂದ ಪಾಟೀಲ್ ಸವಾಲು