ಸ್ಮಾರಕ ಜತೆಗಿನ ಬದುಕಿಗೆ ಮುಕ್ತಿ ಎಂದು?
Team Udayavani, Feb 24, 2020, 12:26 PM IST
ಬಾಗಲಕೋಟೆ: ಬಿದ್ದ ಮನೆಯ ಗೋಡೆ ಕಟ್ಟಲೂ ಅವಕಾಶವಿಲ್ಲ. ಕನಿಷ್ಠ ಶೌಚಾಲಯ ಕಟ್ಟಿಕೊಳ್ಳೋಣವೆಂದರೂ ಅಧಿಕಾರಿಗಳು ಬಿಡಲ್ಲ. ಹೀಗಾಗಿ ಜಿಲ್ಲೆಯ ಬಾದಾಮಿ, ಪಟ್ಟದಕಲ್ಲ ಹಾಗೂ ಐಹೊಳೆಯಲ್ಲಿರುವ ರಾಷ್ಟ್ರ, ಅಂತಾರಾಷ್ಟ್ರೀಯ ಸ್ಮಾರಕಗಳ ಮಧ್ಯೆಯೇ ನಿತ್ಯ ಬದುಕುವ ಜನರ ಸಮಸ್ಯೆಗೆ ಮುಕ್ತಿ ಯಾವಾಗ? ಎಂಬ ಪ್ರಶ್ನೆ ಎದುರಾಗಿದೆ.
ಹೌದು, ಪ್ರವಾಸಿ ತಾಣಗಳ ಸಂರಕ್ಷಣೆ, ಅಭಿವೃದ್ಧಿಗೆ ಸ್ಥಳಾಂತರ ಎಂಬುದು ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ವರ್ಷ ಕಳೆದಂತೆ ಮನೆಗಳು (ದಾಖಲೆಗಳಲ್ಲಿಲ್ಲದೇ) ಹೆಚ್ಚುತ್ತಲೇ ಇವೆ. ಕಳೆದ 20 ವರ್ಷಗಳಿಂದಲೂ ಐತಿಹಾಸಿಕ ಸ್ಮಾರಕಗಳ ಸುತ್ತಲಿನ ಜನ ವಸತಿ ಸ್ಥಳಾಂತರದ ವಿಷಯದಲ್ಲಿ ರಾಜಕೀಯ ನಾಯಕರು ಘೋಷಣೆ ಮಾಡುತ್ತಲೇ ಇದ್ದಾರೆ ಹೊರತು, ಅದಕ್ಕೊಂದು ಸ್ಪಷ್ಟ ರೂಪ ನೀಡಿ, ಕ್ರಮ ಕೈಗೊಂಡಿಲ್ಲ.
ಇನ್ನು ದೇಶದ ಸಂಸತ್ ಭವನ ನಿರ್ಮಾಣಕ್ಕೆ ಪ್ರೇರಣೆ ಎನ್ನಲಾದ ದುರ್ಗಾದೇವಾಲಯ ಇರುವ ಐಹೊಳೆ ಗ್ರಾಮವನ್ನು ಸಂಪೂರ್ಣ ಸ್ಥಳಾಂತರಕ್ಕೆ 2012ರ ಬಜೆಟ್ನಲ್ಲಿ ಘೋಷಣೆ ಮಾಡಿ, 2013ರಲ್ಲಿ ಆಗಿನ ಸಿಎಂ ಜಗದೀಶ ಶೆಟ್ಟರ ಭೂಮಿಪೂಜೆ ಮಾಡಿದರೂ, ಈ ವರೆಗೆ ಸ್ಥಳಾಂತರಗೊಂಡಿಲ್ಲ. ಹೀಗಾಗಿ ಇಲ್ಲಿನ ಜನರು, ಸ್ಥಳಾಂತರ ಮಾಡುತ್ತೇವೆ ಎಂದು ಯಾವುದೇ ಅಧಿಕಾರಿ-ಜನಪ್ರತಿನಿಧಿಗಳು ಹೇಳಿದರೂ ನಂಬುವ ಸ್ಥಿತಿಯಲ್ಲಿಲ್ಲ.
ಬಾದಾಮಿಯ ತಟಕೋಟೆ: ಬಾದಾಮಿಯ ಐತಿಹಾಸಿಕ ಗುಹಾಂತರ ದೇವಾಲಯಕ್ಕೆ ತೆರಳುವ ರಸ್ತೆ ಮಾರ್ಗ ಹಾಗೂ ಇಲ್ಲಿನ ತಟಕೋಟೆ ಗ್ರಾಮದಲ್ಲಿ ಅತಿಕ್ರಮಣದ ಪರಿಣಾಮ, ಪ್ರವಾಸಿಗರು ಸ್ಮಾರಕಗಳ ವೀಕ್ಷಣೆಗೆ ತೆರಳಲು, ದೊಡ್ಡ ಸಾಹಸ ಮಾಡಬೇಕಾದ ಪರಿಸ್ಥಿತಿ ಇದೆ. ಒಂದು ಸಣ್ಣ ಟಂಟಂ ಕೂಡ ಈ ಮಾರ್ಗದಲ್ಲಿ ಸಂಚರಿಸುವ ಪರಿಸ್ಥಿತಿಯಲ್ಲಿಲ್ಲ. ಹೀಗಾಗಿ ತಟಕೋಟೆ ಹಾಗೂ ರಸ್ತೆ ಅತಿಕ್ರಮಣ ತೆರವು ಮಾಡಲು ಇಲಾಖೆ ಯೋಜನೆ ರೂಪಿಸಿದರೂ, ಅದಕ್ಕೆ ಗಟ್ಟಿಯಾದ ಬೆಂಬಲ ಸಿಗುತ್ತಿಲ್ಲ. ಇನ್ನು ಬಡ ಜನರು, ಜೀವನೋಪಾಯಕ್ಕಾಗಿ ಸ್ಮಾರಕಗಳ ಮಧ್ಯೆ ಬದುಕುತ್ತಿದ್ದು, ಅವರಿಗೆ ಶಾಶ್ವತ ಪರಿಹಾರ ಕಲ್ಪಿಸಿ, ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ, ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ಈ ವರೆಗೆ ಸಾಧ್ಯವಾಗಿಲ್ಲ. ಅಗಸ್ತ್ಯ ತೀರ್ಥ ಹೊಂಡದ ಸುತ್ತಲಿನ ಪ್ರದೇಶ ಅತಿಕ್ರಮಣಗೊಂಡಿದ್ದು, ಪ್ರವಾಸಿಗರು ಪ್ರಾಚ್ಯವಸ್ತು ಸಂಗ್ರಹಾಲಯ, ಭೂತನಾಥ ದೇವಾಲಯ ಸಹಿತಿ ಇತರ ಸ್ಮಾರಕಗಳಿಗೆ ಹೋಗಲು ಆಗಲ್ಲ. ತಟಕೋಟೆಯ ಅಗಸ್ತ್ಯ ತೀರ್ಥ ಹೊಂಡದ ಸುತ್ತಲಿನ ಪ್ರದೇಶ, ವಾಸಸ್ಥಾನವಾಗಿ ಪರಿವರ್ತನೆಗೊಂಡು ಹಲವು ದಶಕಗಳೇ ಕಳೆದಿವೆ. ಕಪ್ಪೆ ಅರಭಟ್ಟನ ಶಾಸನದ ಮಾರ್ಗ ಪಾದಚಾರಿ ಮಾರ್ಗವೂ ಇಕ್ಕಟ್ಟಿನಿಂದ ಕೂಡಿದ್ದು, ಪ್ರವಾಸಿಗರಿಗೆ ನಡೆದಾಡಲು ಸುಗಮ ಮಾರ್ಗವಿಲ್ಲ ಎಂಬುದನ್ನು ಪ್ರವಾಸೋದ್ಯಮ ಇಲಾಖೆಯೇ ಒಪ್ಪಿಕೊಳ್ಳುತ್ತದೆ. ಇದಕ್ಕಾಗಿ ಇಲಾಖೆಯಿಂದ ಪರಿಹಾರ ಮಾರ್ಗ ಕಂಡು ಹಿಡಿದಿದೆಯಾದರೆ, ಅನುಷ್ಠಾನಗೊಂಡಿಲ್ಲ.
ಯುನೆಸ್ಕೋ ತಾಣ ಪಟ್ಟದಕಲ್ಲ: 1987ರಲ್ಲೇ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದ ಬಾದಾಮಿ ತಾಲೂಕಿನ ಪಟ್ಟದಕಲ್ಲ, ವಿಶ್ವದ ಗಮನ ಸೆಳೆದ ತಾಣ. ಚಾಲುಕ್ಯ ಅರಸರು, 6 ಮತ್ತು 7ನೇ ಶತಮಾನದಲ್ಲಿ ನಿರ್ಮಿಸಿದ ದೇವಾಲಯಗಳ ಸಮುಚ್ಛಯ, ವಿಶ್ವದ ಪ್ರವಾಸಿಗರ ಆಕರ್ಷನೀಯವಾಗಿವೆ. ಇಲ್ಲಿ 9 ಮುಖ್ಯ ದೇವಾಲಯಗಳಿದ್ದು, ಒಂದೊಂದು ಅದ್ಭುತ ನಿರ್ಮಾಣದ ಮೂಲಕ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಆದರೆ, ಈ ಗ್ರಾಮದ ಜನರು ಮಾತ್ರ, ವಿಶ್ವದ ಗಮನ ಸೆಳೆಯುವ ತಾಣದಲ್ಲಿರುವ ಹೆಮ್ಮೆ ಒಂದೆಡೆಯಾದರ, ಬದುಕು ದುಸ್ಥರ ಎನಿಸುವ ಸೋಚನೀಯ ಸ್ಥಿತಿಯಲ್ಲಿದ್ದಾರೆ.
ಸ್ಮಾರಕಗಳ ಸುತ್ತ 500 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡ, ಮನೆ, ರಸ್ತೆ ನಿರ್ಮಾಣ ಮಾಡ ಬೇಕಿದ್ದರೂ ಅನುಮತಿ ಬೇಕು. ಪಟ್ಟದಕಲ್ಲ ಸ್ಮಾರಕಗಳಿಗೆ ಹೊಂದಿಕೊಂಡೇ ಇರುವ ಈ ಗ್ರಾಮಸ್ಥರು, ಹೊಸ ಮನೆ ಕಟ್ಟುವಂತಿಲ್ಲ. ಬಿದ್ದ ಮನೆಯ ಗೋಡೆ ದುರಸ್ತಿ ಮಾಡುವ ಹಾಗೆಯೂ ಇಲ್ಲ. ನಿಮ್ಮ ಗ್ರಾಮ ಸ್ಥಳಾಂತರ ಮಾಡುತ್ತೇವೆ ಎಂದು ಹಲವು ದಶಕದಿಂದ ಭರವಸೆ ಸಿಕ್ಕಿವೆ ಹೊರತು, ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾಗಿ ಪಟ್ಟದಕಲ್ಲನ ಜನರು, ನಮ್ಮನ್ನು ಸ್ಥಳಾಂತರಿಸಿ, ಇಲ್ಲವೇ ನೆಮ್ಮದಿಯ ಬದುಕಿಗೆ ಅವಕಾಶ ಕೊಡಿ ಎಂದು ಕೇಳಿಕೊಳ್ಳುತ್ತಲೇ ಇದ್ದಾರೆ. ಪಟ್ಟದಕಲ್ಲ ಸ್ಥಳಾಂತರಕ್ಕೆ ಭೂಮಿ ಗುರುತಿಸಲಾಗಿದೆಯಾದರೂ ಆ ಕಾರ್ಯಕ್ಕೆ ದಿಟ್ಟ ನಿರ್ಧಾರ ಕೈಗೊಂಡಿಲ್ಲ. ಕಳೆದ 2009ರ ಪ್ರವಾಹದ ವೇಳೆಯೇ ಇಲ್ಲಿನ ಕೆಲ ಮನೆಗಳನ್ನು ಸ್ಥಳಾಂತರಕ್ಕೆ ಜಿಲ್ಲಾಡಳಿತ ನಿರ್ಧರಿಸಿತ್ತು. ಇಡೀ ಗ್ರಾಮ ಸ್ಥಳಾಂತರಕ್ಕೆ ಪಟ್ಟು ಹಿಡಿದ ಪರಿಣಾಮ, ಅರ್ಧ ಗ್ರಾಮ ಸ್ಥಳಾಂತರವೂ ಆಗಲಿಲ್ಲ.
ಶಿಲ್ಪಕಲೆಯ ತೊಟ್ಟಿಲು ಐಹೊಳೆ: ಚಾಲುಕ್ಯ ಅರಸರ ಪ್ರಥಮ ರಾಜಧಾನಿಯೂ ಆಗಿದ್ದ ಐಹೊಳೆಯಲ್ಲಿ 59 ವಿವಿಧ ಪಾರಂಪರಿಕ ಕಟ್ಟಡಗಳಿವೆ. ಪ್ರತಿಯೊಂದು ಕಟ್ಟಡಗಳ ಸುತ್ತಲೂ ಜನವಸತಿ ಇದೆ. ಈ ಗ್ರಾಮವನ್ನು ಸಂಪೂರ್ಣ ಸ್ಥಳಾಂತರ ಮಾಡಲು, ಭೂಮಿಪೂಜೆ ಕೂಡಾ ಆಗಿದೆ. ಹೊಸ ಮನೆ ನಿರ್ಮಿಸಿಕೊಡಲು ಭೂಮಿಯನ್ನು ಗುರುತಿಸಲಾಗಿದೆ. 2013ರಲ್ಲಿ ಕೇವಲ 52 ಕೋಟಿಯಷ್ಟಿದ್ದು, ಈ ಗ್ರಾಮ ಸ್ಥಳಾಂತರದ ಕ್ರಿಯಾ ಯೋಜನೆ, ಈಗ 400 ಕೋಟಿಗೆ ದಾಟಿದೆ. ಹೀಗಾಗಿ ಸ್ಥಳಾಂತರ ಅಷ್ಟು ಸುಲಭವಾಗಿ ನೆರವೇರುತ್ತಾ ಎಂಬ ಪ್ರಶ್ನೆ ಐತಿಹಾಸಿಕ ಗ್ರಾಮಸ್ಥರಲ್ಲಿ ಕಾಡುತ್ತಿದೆ.
ಒಟ್ಟಾರೆ, ಪ್ರವಾಸಿ ತಾಣಗಳ ಮಧ್ಯೆ ವಾಸಿಸುತ್ತಿರುವ ಜನರ ಬದುಕಿಗೆ ಮುಕ್ತಿ ಸಿಗಬೇಕಿದೆ. ಸ್ಥಳೀಯರಿಗೆ ಮೂಲ ಸೌಲಭ್ಯ ಕಲ್ಪಿಸಿ, ನವ ಗ್ರಾಮ ನಿರ್ಮಾಣಕ್ಕೆ ಜಿಲ್ಲಾಡಳಿತ ಗಟ್ಟಿ ನಿರ್ಧಾರ ಕೈಗೊಳ್ಳಬೇಕಿದೆ. ಚುನಾವಣೆ ಸಂದರ್ಭದಲ್ಲಿ ಹೇಗೆ ಯಾರ ಮುಲಾಜಿಲ್ಲದೇ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತೀರೋ, ಪ್ರವಾಸಿ ತಾಣಗಳ ಸುತ್ತಲಿನ ಅತಿಕ್ರಮಣ ತೆರವು, ಗ್ರಾಮ ಸ್ಥಳಾಂತರಕ್ಕೆ ಗಟ್ಟಿ ನಿರ್ಧಾರದೊಂದಿಗೆ ಕೆಲಸ ಮಾಡಿ ಎಂದು ಸ್ವತಃ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಈಚೆಗೆ ಜಿಲ್ಲೆಗೆ ಬಂದಾಗ, ಜಿಲ್ಲಾಡಳಿತಕ್ಕೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಈ ಸ್ವತಂತ್ರವನ್ನು ಜಿಲ್ಲಾಡಳಿತ ಎಷ್ಟರ ಮಟ್ಟಿಗೆ ಸದ್ಬಳಕೆ ಮಾಡಿಕೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಐಹೊಳೆ, ಪಟ್ಟದಕಲ್ಲ ಹಾಗೂ ಬಾದಾಮಿಯ ಪ್ರವಾಸಿ ತಾಣಗಳ ಸುತ್ತಲಿನ ಜನವಸತಿ ಸ್ಥಳಾಂತರಕ್ಕೆ ಪ್ರವಾಸೋದ್ಯಮ ಸಚಿವರು ಸಂಪೂರ್ಣ ಸ್ವತಂತ್ರ ನೀಡಿದ್ದಾರೆ. ನಾನು ಈ ಜಿಲ್ಲೆಯ ಜಿಲ್ಲಾಧಿಕಾರಿಯಾಗಿರುವಾಗಲೇ ಈ ಕಾರ್ಯ ಮಾಡಬೇಕು ಎಂಬ ಆಶಯ ಹೊಂದಿದ್ದೇನೆ. ಅದಕ್ಕಾಗಿ ಎಲ್ಲ ರೀತಿಯ ತಯಾರಿ ನಡೆದಿದೆ. -ಕ್ಯಾಪ್ಟನ್ ಡಾ| ಕೆ. ರಾಜೇಂದ್ರ, ಜಿಲ್ಲಾಧಿಕಾರಿ
-ಎಸ್.ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ