ಅವಕಾಶದ ಹೆಸರಲ್ಲಿ ಮಹಿಳಾ ಕಲಾವಿದರ ಲೈಂಗಿಕ ಬಳಕೆ ಸತ್ಯ
Team Udayavani, Mar 26, 2018, 7:00 AM IST
ಬಾಗಲಕೋಟೆ: ಚಿತ್ರರಂಗದಲ್ಲಿ ಉತ್ತಮ ಅವಕಾಶ ಕಲ್ಪಿಸಲು ಮಹಿಳಾ ಕಲಾವಿದರನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಗಾಸಿಪ್ ಸತ್ಯ. ಇದನ್ನು ನಾನು ಸಂಪೂರ್ಣ ಇಲ್ಲ ಎಂದು ಹೇಳಲಾರೆ. ಇದು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ, ಎಲ್ಲ ಚಿತ್ರರಂಗದಲ್ಲೂ ಇದೆ. ಇದನ್ನು ಯುವ ಕಲಾವಿದರು ಮೆಟ್ಟಿ ನಿಲ್ಲಬೇಕು ಎಂದು ಹಾಸ್ಯ ಕಲಾವಿದ ಮಂಡ್ಯ ರಮೇಶ್ ಹೇಳಿದರು.
ನಗರದಲ್ಲಿ ರವಿವಾರ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಅವಕಾಶಕ್ಕಾಗಿ ಮಹಿಳಾ ಕಲಾವಿದರ ದುರ್ಬಳಕೆಯಾಗುತ್ತಿದೆ ಎಂಬುದನ್ನು ನಾನು ಇಲ್ಲ ಎಂದು ಹೇಳುವುದಿಲ್ಲ. ಹಿಂದೆಯೂ ಇತ್ತು. ಈಗಲೂ ಇದೆ. ಚಿತ್ರರಂಗದಲ್ಲಿ ಅವಕಾಶ ಕಲ್ಪಿಸಲು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುವ ಆರೋಪ ಆಗಾಗ ಕೇಳಿ ಬರುತ್ತಲೇ ಇದೆ. ಇದು ಸತ್ಯ ಕೂಡ. ಇದನ್ನು ಮೆಟ್ಟಿ ನಿಂತಾಗ ಉತ್ತಮ ಕಲಾವಿದರು ಹೊರ ಬರುತ್ತಾರೆ. ಯುವ ಕಲಾವಿದರು ಇದನ್ನು ಮೀರಿ ಬೆಳೆಯಬೇಕು. ಇಂತಹ ವಾತಾವರಣ ಇರುವುದಕ್ಕೆ ನನಗೆ ನೋವಿದೆ ಎಂದರು.
ಪ್ರತಿ ಜಿಲ್ಲೆಯಲ್ಲೂ ರಂಗ ಕಲೆಗೆ ಅವಕಾಶ, ಸೂಕ್ತ ತರಬೇತಿ ಸಿಗಬೇಕು. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ರಂಗಾಯಣದಂತಹ ರಂಗ ತರಬೇತಿ ಶಾಲೆಗಳನ್ನು ಸರಕಾರದ ಅಧೀನದಲ್ಲಿ ಆರಂಭಿಸಬೇಕಿದೆ ಎಂದರು.