ಸಮರ್ಪಕ ಮರಳು ದೊರೆಯಲು ಕ್ರಮ
Team Udayavani, Sep 11, 2019, 10:20 AM IST
ಕೂಡಲಸಂಗಮ: ಬಸವಣ್ಣನ ಐಕ್ಯ ಮಂಟಪದ ಬಳಿ ಹರಿಯುತ್ತಿರುವ ತ್ರಿವೇಣಿ ಸಂಗಮವನ್ನು ಸಚಿವ ಸಿ.ಸಿ.ಪಾಟೀಲ ವೀಕ್ಷಿಸಿದರು.
ಕೂಡಲಸಂಗಮ: ರಾಜ್ಯದ ಆದಾಯದ ಜೊತೆಗೆ ಗಣಿಗಾರಿಕೆಯೂ ಬೆಳೆಯಬೇಕು. ಅಕ್ರಮ ಗಣಿಗಾರಿಕೆ, ಮರಳುಗಾರಿಕೆಗೆ ಅವಕಾಶ ಇಲ್ಲ. ಸಾಮಾನ್ಯ ಜನರಿಗೂ ಸಮರ್ಪಕವಾಗಿ ಮರಳು ಸಿಗುವ ವ್ಯವಸ್ಥೆಗೆ ಕ್ರಮ ಕೈಗೊಳ್ಳುವುದಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ ಹೇಳಿದರು.
ಮಂಗಳವಾರ ಕೂಡಲಸಂಗಮದ ಸಂಗಮೇಶ್ವರ ದೇವಾಲಯದ ಆವರಣದಲ್ಲಿ ಸುದ್ದಿಗಾರೊಂದಿಗೆ ಅವರು ಮಾತನಾಡಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಸೇಡಿನ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿರುವುದಕ್ಕೆ ಬದ್ಧರಾಗಿದ್ದೇವೆ. ಸಿಎಂ ಹಾಗೂ ಸಚಿವರ ಪುತ್ರರು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಸಿಎಂ ಯಡಿಯೂರಪ್ಪ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇದರಲ್ಲಿ ನೂರಕ್ಕೆ ನೂರರಷ್ಟು ನಿಜಾಂಶವಿಲ್ಲ ಎಂದರು.
ಪ್ರವಾಹ ಎದುರಿಸುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ. ಮುಖ್ಯಮಂತ್ರಿ ಎಲ್ಲ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಪ್ರವಾಹದ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದರು.
ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ದೊಡ್ಡನಗೌಡ ಪಾಟೀಲ, ಸಂಗಮೇಶ್ವರ ಉಚಿತ ಪ್ರಸಾದ ನಿಲಯದ ಅಧ್ಯಕ್ಷ ಜಿ.ಜಿ.ಪಾಟೀಲ, ಶರಣಪ್ಪ ಗಾಣಗೇರ, ಬಸವರಾಜ ಗೌಡರ ಇದ್ದರು.
ಸಂಗಮೇಶ್ವರ ದೇವಾಲಯಕ್ಕೆ ತೆರಳಿದ ಸಚಿವ ಸಿ.ಸಿ.ಪಾಟೀಲ ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇವಾಲಯ ಮುಂಭಾಗ ಹರಿಯುತ್ತಿರುವ ಕೃಷ್ಣಾ, ಮಲಪ್ರಭಾ ನದಿಯನ್ನು ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ಕೂಡಲಸಂಗಮ ಭಜಂತ್ರಿ ಕಾಲೋನಿಯ ಸಂತ್ರಸ್ತರು ಸಚಿವರಿಗೆ ಮನವಿ ಸಲ್ಲಿಸಿದರು.