ಲೂಟಿಕೋರರ ಜತೆ ಮೋದಿ ಫಾರಿನ್ ಟೂರು
Team Udayavani, Oct 26, 2018, 6:55 AM IST
ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ರೀತಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಡೋಂಗಿ ರಾಜಕಾರಣಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಜಮಖಂಡಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇಶ ಲೂಟಿ ಮಾಡಿ ಓಡಿ ಹೋಗಿರುವ ನೀರವ್ ಮೋದಿಯಂತಹ ವ್ಯಕ್ತಿಗಳು ಪ್ರಧಾನಿ ನರೇಂದ್ರ ಮೋದಿ ಜತೆಗೆ ಪ್ರಯಾಣ ಮಾಡುತ್ತಾರೆ. ಮೋದಿ ವಿದೇಶಕ್ಕೆ ಯಾರ್ಯಾರನ್ನು ಕರೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಕೇಳಲಾಗಿದೆ. ಆದರೆ, ಪ್ರಧಾನಿ ಕಚೇರಿಯಿಂದ ಈವರೆಗೆ ಉತ್ತರ ಬಂದಿಲ್ಲ. ಮೋದಿ ರೀತಿ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಡೋಂಗಿ ಅಲ್ಲ ಎಂದರು.
ಬಿಜೆಪಿ ಸ್ವಾರ್ಥಕ್ಕಾಗಿ ಧರ್ಮ ಒಡೆಯುತ್ತಿದೆ. ದೇವರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ.ರಾಮನ ಹೆಸರಿನಲ್ಲಿ ಮತ ಕೇಳುತ್ತಾರೆ. ರಾಮನ ಹೆಸರಿನಲ್ಲಿ ಮತ ಕೇಳಬೇಕಾದರೆ ರಾಮನಷ್ಟೇ ಪವಿತ್ರವಾಗಿರಬೇಕು. ರಾಮನಷ್ಟೇ ಒಳ್ಳೆಯವರಾಗಿ ರಬೇಕು. ಬಿಜೆಪಿಯವರು ದೇಶದಲ್ಲಿ ಏನೂ ಅಭಿವೃದ್ಧಿ ಮಾಡಿಲ್ಲ. ಮೋದಿ ಪ್ರಧಾನಿಯಾದ ಬಳಿಕ ವಿದೇಶ ಸುತ್ತುವುದು ಬಿಟ್ಟರೆ ಬೇರೆ ಏನು ಮಾಡಿದ್ದಾರೆ.ವಿದೇಶದ ಪ್ರಧಾನಿಗಳನ್ನು ತಬ್ಬಿಕೊಳ್ಳುವುದೇ ಭಾರತದ ಅಭಿವೃದ್ಧಿಯೇ? ಸ್ವಿಸ್ ಬ್ಯಾಂಕ್ನ ಹಣ ತಂದು ಜನರಿಗೆ ಕೊಡುತ್ತೇನೆ ಅಂದವರು ಈವರೆಗೆ ಕೊಟ್ಟಿದ್ದಾರಾ? ಬಿಜೆಪಿಯವರಿಗೆ ನಾಚಿಕೆ-ಮಾನ- ಮರ್ಯಾದೆ ಇದೆಯೇ ಎಂದು ಪ್ರಶ್ನಿಸಿದರು.