ಅಂಕಪಟ್ಟಿ ಹೆಸರಲ್ಲಿ ಹಣ ವಸೂಲಿ-ಪ್ರತಿಭಟನೆ
Team Udayavani, Nov 9, 2019, 11:22 AM IST
ಬಾಗಲಕೋಟೆ: ರಾಜ್ಯದ ವಿಶ್ವ ವಿದ್ಯಾಲಯಗಳಲ್ಲಿ ಇಲೆಕ್ಟ್ರಾನಿಕ್ ಡಾಕ್ಯೂಮೆಂಟ್ ಜನರೇಶನ್ ಸಿಸ್ಟಮ್ (ಇಡಿಜಿಎಸ್) ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡಲು ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆ ಮೆರವಣಿಗೆ ಮೂಲಕ ಬಸವೇಶ್ವರ ವೃತ್ತಕ್ಕೆ ಆಗಮಿಸಿ, ಸರ್ಕಾರದ ಈ ನಿರ್ಧಾರ ತೀವ್ರವಾಗಿ ಖಂಡಿಸಿದರು. ಎಬಿವಿಪಿ ಕಾರ್ಯದರ್ಶಿ ಪ್ರಕಾಶ ಚವ್ಹಾಣ ಮಾತನಾಡಿ, ಶಿಕ್ಷಣ ಮಾರಾಟದ ವಸ್ತುವಲ್ಲ. ಎಲ್ಲ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ದೊರೆಯಬೇಕು. ಆದರೆ, ವಿವಿಗಳಲ್ಲಿ ಹೊಸ ತಂತ್ರಜ್ಞಾನ ವ್ಯವಸ್ಥೆ ಜಾರಿಗೊಳಿಸಿದ್ದಾಗಿ ತಿಳಿಸಿ, ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ 156 ರೂ. ವಸೂಲಿ ಮಾಡಲಾಗುತ್ತಿದೆ. ಇದು ಬಡ ವಿದ್ಯಾರ್ಥಿಗಳಿಗೆ ಹೊರೆಯಾಗಲಿದೆ.
ಮುಖ್ಯವಾಗಿ ಸರ್ಕಾರದ ನಿಯಮಾವಳಿ ಪ್ರಕಾರ ಶುಲ್ಕ ಪಾವತಿಸಿದ್ದರೂ, ಅಂಕಪಟ್ಟಿ ಹೆಸರಿನಲ್ಲಿ ದುಡ್ಡು ಮಾಡಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ವಿಶ್ವವಿದ್ಯಾಲಯಗಳಲ್ಲಿ ತಂತ್ರಜ್ಞಾನದ ಬಳಕೆಗೆ ಎಬಿವಿಪಿ ಸ್ವಾಗತಿಸುತ್ತದೆ. ಆದರೆ ಇದರ ಹೆಸರಿನಲ್ಲಿ ಪ್ರತಿ ಅಂಕಪಟ್ಟಿಗೆ 156 ರೂ. ವಸೂಲಿ ಮಾಡಲು ಹೊರಟಿರುವುದು ಸರಿಯಲ್ಲ. ಕೂಡಲೇ ಈ ಕ್ರಮ ಕೈಬಿಡಬೇಕು ಎಂದು ಒತ್ತಾಯಿಸಿದರು. ಎಬಿವಿಪಿ ಪ್ರಮುಖರು ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.