ದೊಡ್ಡಲಾಲಸಾಬವಲಿ ದರ್ಗಾದಲ್ಲಿ ಅಜ್ಜನವರ ಮೊಹರಂ: ನೀರಿನಿಂದ ದೀಪ ಹಚ್ಚುವುದು ಇಲ್ಲಿನ ವಿಶೇಷ
Team Udayavani, Aug 9, 2022, 5:15 PM IST
ಕುಳಗೇರಿ ಕ್ರಾಸ್: ಪ್ರಸಿದ್ಧ ಕ್ಷೇತ್ರ ಚಿಮ್ಮನಕಟ್ಟಿ ಗ್ರಾಮದ ದೊಡ್ಡ ಲಾಲಸಾಬವಲಿ ದರ್ಗಾದಲ್ಲಿ ಮೂರು ದಿನಗಳ ಕಾಲ ಹಿಂದು-ಮುಸ್ಲಿಂ ಭಾವೈಕ್ಯದ ಮೊಹರಂ ಆಚರಣೆ ಸಂಭ್ರಮ ಸಡಗರದಿಂದ ನಡೆಯಿತು.
ನೀರಿನಿಂದ ಪ್ರಜ್ವಲಿಸುವ ದೀಪ: ಗ್ರಾಮದ ಸಂಗಮೇಶ್ವರ ದೇವಸ್ಥಾನದ ಬಾವಿಯಲ್ಲಿನ ನೀರು ಬಿಂದಿಗೆಯಲ್ಲಿ ತಂದು ದರ್ಗಾದಲ್ಲಿನ ದೀಪಗಳಿಗೆ ನೀರು ಹಾಕಿ ದೀಪ ಬೆಳಗಿಸುತ್ತಾರೆ. ದೇಸಾಯಿಯವರ ಮನೆಯಿಂದ ಗಂಧ ತಂದು ದೇವರಿಗೆ ಅರ್ಪಣೆ ಮಾಡಿ ಪ್ರಾರಂಭವಾಗುವ ಈ ಹಬ್ಬದಲ್ಲಿ ಸಾಕಷ್ಟು ವಿಶೇಷ ಆಚರಣೆಗಳು ನಡೆಯುತ್ತವೆ.
ಅಗ್ನಿ ಹಾಯುವುದು: ಸುಮಾರು 10ಕ್ಕೂ ಹೆಚ್ಚು ಟ್ರ್ಯಾಕ್ಟರ್ ಕಟ್ಟಿಗೆ ಸಂಗ್ರಹಿಸಿ ಅಗ್ನಿ ಕುಂಡ ತಯಾರಿಸುವ ಭಕ್ತರು, ಇಡೀ ರಾತ್ರಿ ಕಟ್ಟಿಗೆ ಸುಟ್ಟು ಕೆಂಡ ಮಾಡುತ್ತಾರೆ. ಬೆಳಿಗ್ಗೆ ದರ್ಗಾಕ್ಕೆ ಆಗಮಿಸುವ ಲಾಲಸಾಬ ಅಜ್ಜ ಅಗ್ನಿ ಕುಂಡದಲ್ಲಿ ಎರೆಡು ಬಾರಿ ಹಾದು ಚಾಲನೆ ನೀಡುತ್ತಾರೆ. ನಂತರ ಡೋಲಿ ಹೊತ್ತವರು ಸೇರಿದಂತೆ ಬೇಡಿಕೊಂಡವರೆಲ್ಲ ಅಗ್ನಿಯಲ್ಲಿ ಹಾಯುತ್ತಾರೆ. ನಂತರ ಹೇಳಿಕೆ ಹೇಳುವ ಅಜ್ಜನವರು ಮುಂಬರುವ ರಾಜ್ಯ ಹಾಗೂ ದೇಶದ ರಾಜಕೀಯ ವಿಷಯಗಳನ್ನು ನುಡಿಯುವರು.
ಪ್ರತಿ ವರ್ಷ ಹಿಂದು-ಮುಸ್ಲಿಂ ಸೇರಿ ಭಾವೈಕ್ಯದಿಂದ ಗಂಧರಾತ್ರಿ, ಕತ್ತಲರಾತ್ರಿ, ದೇವರು ಹೊಳೆಗೆ ಹೋಗುವ ಕಾರ್ಯಕ್ರಮ ಸೇರಿದಂತೆ ಸುಮಾರು ಮೂರು ದಿನಗಳ ಕಾಲ ಮೊಹರಂ ಆಚರಣೆ ಮಾಡುತ್ತಾರೆ. ಚಿಮ್ಮನಕಟ್ಟಿ ಮೊಹರಂ ವಿಶಿಷ್ಟ ಆಚರಣೆಯೊಂದಿಗೆ ಈ ಭಾಗದಲ್ಲಿ ಪ್ರಸಿದ್ಧಿ ಪಡೆದ ಹಿಂದು ಮುಸ್ಲಿಂ ಹಬ್ಬವಾಗಿದೆ.
ಈ ಗ್ರಾಮದ ಮೊಹರಂ ಆಚರಣೆ ನೊಡಲು ರಾಜ್ಯ ಹಾಗೂ ಅಂತರಾಜ್ಯಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪ್ರತಿ ವರ್ಷ ಸೇರುತ್ತಾರೆ.
ಇದನ್ನೂ ಓದಿ: ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ ಬಿಹಾರ ಸಿಎಂ ನಿತೀಶ್; ಆರ್ ಜೆಡಿ, ಜೆಡಿಯು ಸರ್ಕಾರ ರಚನೆ
ಆದರೆ ಕಳೆದ ಎರೆಡು ವರ್ಷಗಳಿಂದ ಕೊರೊನಾ ಸೋಂಕು ಹರಡುವ ಭೀತಿಯಲ್ಲಿ ಸರ್ಕಾರದ ನಿಯಮ ಪಾಲನೆ ಮಾಡುವ ಉದ್ದೇಶದಿಂದ ಕಮಿಟಿಯವರು ಮೊಹರಂ ಆಚರಣೆ ರದ್ದು ಮಾಡಿದ್ದರು. ಸರ್ಕಾರದ ಆದೇಶದಂತೆ ಸರಳ ರೀತಿಯಲ್ಲಿ ಮೊಹರಂ ಆಚರಣೆ ಮಾಡಿದ ಭಕ್ತರು, ಈ ಬಾರಿ ಸಂಭ್ರಮದಿಂದ ಹಬ್ಬ ಆಚರಣೆ ಮಾಡಿದರು.
ಕಮಿಟಿಯ ಸಂಚಾಲಕರಾದ ಲಾಲಸಾಬ ಜಾಲಿಹಾಳ ಅಜ್ಜನವರು, ಮೈಬುಸಾಬ ಚಿಕ್ಕೊಪ್ಪ, ರಂಜಾನ್ಸಾಬ ನರಗುಂದ, ಸೈಪುದ್ದಿನ್ ನರಗುಂದ, ಡಿ ಎನ್ ಪಾಟೀಲ, ವಿಠಲಗೌಡ್ರ ಪಾಟೀಲ, ದ್ಯಾಮನಗೌಡ ಪಾಟೀಲ್, ಸಿದ್ದಪ್ಪ ಗಂಜೆಪ್ಪನವರ, ಖಾಜಾಅಮೀನ್ ಬಹದ್ದೂರಖಾನ್, ಲಾಲಸಾಬ ನರಗುಂದ, ತಾಸಿಮ್ಸಾಬ ಚಿಕ್ಕೊಪ್ಪ ಸೇರಿದಂತೆ ಗ್ರಾಮದ ಪ್ರಮುಖರು ಇದ್ದರು. ಗೋವಾ, ಪುಣೆ, ಮಹಾರಾಷ್ಟ ಸೇರಿದಂತೆ ಹೊರ ರಾಜ್ಯದಿಂದಲೂ ಭಕ್ತರು ಆಗಮಿಸಿದ್ದರು.