ನಿರ್ಲಕ್ಷ್ಯದ ಬಸ್ ಚಾಲನೆ; ಚಾಲಕನಿಗೆ 4 ತಿಂಗಳು ಜೈಲು
Team Udayavani, Jul 13, 2019, 1:28 PM IST
ಬಾಗಲಕೋಟೆ: ಖಾಸಗಿ ಬಸ್ ಚಾಲಕನೊಬ್ಬ ನಿರ್ಲಕ್ಷ್ಯದಿಂದ ಬಸ್ ಚಲಿಸಿ, ಓರ್ವ ವ್ಯಕ್ತಿಯ ಸಾವಿಗೆ ಕಾರಣನಾದ ಹಿನ್ನೆಲೆಯಲ್ಲಿ ಬಸ್ ಚಾಲಕನಿಗೆ ಬಾದಾಮಿಯ ಜೆಎಂಎಫ್ಸಿ ನ್ಯಾಯಾಲಯ 4 ತಿಂಗಳ ಜೈಲು ಶಿಕ್ಷೆ ಹಾಗೂ 400 ರೂ. ದಂಡ ವಿಧಿಸಿ ತೀರ್ಪು ನೀಡಿದೆ. ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದ, ರಾಣಿ ಚೆನ್ನಮ್ಮ ಖಾಸಗಿ ಬಸ್ ಚಾಲಕ ಬಸವರಾಜ ಯಲಗುದರಪ್ಪ ಹಿಟ್ನಳ್ಳಿ ಎಂಬಾತ ಶಿಕ್ಷೆಗೆ ಒಳಗಾದ ಚಾಲಕ. ರಾಣಿ ಚೆನ್ನಮ್ಮ ಬಸ್ ಚಾಲಕನಾಗಿದ್ದ ಬಸವರಾಜ, ಕಳೆದ 2010ರ ಏಪ್ರಿಲ್ 7ರಂದು ಬಾದಾಮಿ ತಾಲೂಕು ಹೂಲಗೇರಿ ಬಳಿ, ರಾಷ್ಟ್ರೀಯ ಹೆದ್ದಾರಿ ನಂ.218ರಲ್ಲಿ ನಿರ್ಲಕ್ಷ್ಯದಿಂದ ಬಸ್ ಚಲಿಸಿ, ಹೂಲಗೇರಿಯ ಲಕ್ಷ್ಮಪ್ಪ ಪಾಂಡಪ್ಪ ಕೋಮಾರ (55) ಎಂಬಾತನ ಮೇಲೆ ಹಾಯಿಸಿ, ಸಾವನ್ನಪ್ಪುವಂತೆ ಮಾಡಿದ್ದ.
ಈ ಕುರಿತು ಕೆರೂರ ಪೊಲೀಸ್ ಠಾಣೆಯ ಪಿಎಸ್ಐ ಎಸ್.ಎಸ್. ಕಮತಗಿ, ಬಾದಾಮಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಬಾದಾಮಿಯ ಜೆಎಂಎಫ್ಸಿ ನ್ಯಾಯಾಧೀಶ ರಾಚೋಟಿ ಶಿರೂರ ಅವರು, ಆರೋಪಿಗೆ 4 ತಿಂಗಳು ಸಾದಾ ಶಿಕ್ಷ, 400 ರೂ. ದಂಡ ವಿಧಿಸಿ, ಶುಕ್ರವಾರ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಬಾದಾಮಿ ಜೆಎಂಎಪ್ಸಿ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕ ಸಂಗನಗೌಡ ಪ.ನಾಯಕ ವಾದ ಮಂಡಿಸಿದ್ದರು.