ವಿನಾಯಕ ನಗರ ಬಡಾವಣೆಗಿಲ್ಲ ಸೌಲಭ್ಯ: ಗಮನ ಹರಿಸದ ಪುರಸಭೆ ಸದಸ್ಯರು-ಅಧಿಕಾರಿಗಳು
Team Udayavani, Oct 5, 2020, 2:42 PM IST
ಗುಳೇದಗುಡ್ಡ: ಪಟ್ಟಣದ ಸಾಲೇಶ್ವರ ತೇರಿನ ಮನೆಯ ಹಿಂದುಗಡೆ ವಿನಾಯಕನಗರ ಬಡಾವಣೆ ನಿರ್ಮಾಣವಾಗಿ 30 ವರ್ಷ ಕಳೆದರೂ ಬಡಾವಣೆಗೆ ಸೌಲಭ್ಯಗಳು ಮರೀಚಿಕೆಯಾಗಿವೆ. ಬಡಾವಣೆಗೆ ಸಮರ್ಪಕವಾದ ರಸ್ತೆಯಿಲ್ಲ. ಉದ್ಯಾನವನ ಇದ್ದರೂ ಬಹಿರ್ದೆಸೆಗೆ ತೆರಳುವವರಿಗೆ ಮೀಸಲಾದಂತಾಗಿದ್ದು, ಪುರಸಭೆ ಅಧಿ ಕಾರಿಗಳು, ಸದಸ್ಯರು ಗಮನಹರಿಸುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ದೂರಿದ್ದಾರೆ.
ರಸ್ತೆಯ ಮೇಲೆ ನೀರು ನಿಂತು ನಿವಾಸಿಗಳು ಸಂಚರಿಸಲು ಯಮಯಾತನೆ ಪಡುವಂತಾಗಿದೆ. ಈ ಬಡಾವಣೆಯಲ್ಲಿ ಉದ್ಯಾನವನಕ್ಕೆ ಸಾಕಷ್ಟು ಜಾಗವಿದೆ. ಎಲ್ಲರೂ ಇಲ್ಲಿ ಸಸಿಗಳನ್ನು ಬೆಳೆಸಿದ್ದೇವೆ. ಆದರೆ, ಇಲ್ಲಿ ಸರಿಯಾದ ಸೌಕರ್ಯ ಇಲ್ಲದಿರುವುದರಿಂದ ಕೆಲವರು ಬಹಿರ್ದೆಸೆಗೆ ಹೋಗುತ್ತಿದ್ದಾರೆ. ಸರಿಯಾದ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಶಾಸಕರಿಗೆ, ಪುರಸಭೆ ಅಧಿಕಾರಿಗಳಿಗೆ ಮನವಿ ನೀಡಿದ್ದೇವೆ. ಆದರೆ, ಇದುವರೆಗೂ ಕ್ರಮ ಕೈಗೊಂಡಿಲ್ಲ. ಪುರಸಭೆ ಸದಸ್ಯರು ನಾವು ಅಧಿಕಾರದಲ್ಲಿ ಇಲ್ಲ ಎಂದು ಹಾರಿಕೆ ಉತ್ತರ ನೀಡಿ ಜಾರಿಕೊಳ್ಳುತ್ತಿದ್ದಾರೆ ಎಂದು ನಿವಾಸಿಗಳ ಆರೋಪವಾಗಿದೆ. ಉದ್ಯಾನವನ ಇದ್ದು ಇಲ್ಲದಂತಾಗಿದೆ. ನಿತ್ಯ ಕಸ ಚೆಲ್ಲುವ ತಿಪ್ಪೆಯಂತಾಗಿದೆ. ಬೆಳಕಿನ ವ್ಯವಸ್ಥೆ ಇಲ್ಲದಿರುವುದರಿಂದ ಉದ್ಯಾನವನದಲ್ಲಿ ಬಹಿರ್ದೆಸೆಗೆ ಹೋಗುತ್ತಿದ್ದಾರೆ.
ರಸ್ತೆ-ದೀಪದ ವ್ಯವಸ್ಥೆ ಇಲ್ಲ: ಈ ನಗರವು ಎರಿ ಮಣ್ಣಿನಿಂದ ಕೂಡಿದ್ದು, ಮೆಟಲಿಂಗ್ ಇಲ್ಲದೇ ತಾತ್ಕಾಲಿಕ ಅನುಕೂಲಕ್ಕಾಗಿ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗಿತ್ತು. ಬೇರೆ ಕಡೆ ರಸ್ತೆ ಮಾಡುವಾಗ ಭಾರವಾದ ವಾಹನಗಳು ಸಂಚರಿಸಿದ ಪರಿಣಾಮ ರಸ್ತೆ ಕಿತ್ತು ಹೋಗಿದೆ. ಅಲ್ಲದೇ ಇಲ್ಲಿ ಕೆಲವೇ ವಿದ್ಯುತ್ ಕಂಬಗಳಿದ್ದು, ಉಳಿದ ರಸ್ತೆಗಳಿಗೆ ವಿದ್ಯುತ್ ದೀಪ ಅಳವಡಿಸಿಲ್ಲ.