ಎಂಎಲ್ಎ ಅಲ್ಲ, ಎಂಪಿ ಟಿಕೆಟ್ ಆಕಾಂಕ್ಷಿ: ವೀಣಾ ಕಾಶಪ್ಪನವರ
Team Udayavani, Apr 2, 2018, 6:30 AM IST
ಇಳಕಲ್ಲ: ವಿಧಾನಸಭೆಗೆ ಸ್ಪರ್ಧಿಸುವಂತೆ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಸಾಕಷ್ಟು ಒತ್ತಡ ಹೇರುತ್ತಿದ್ದಾರೆ. ನಾನು ಯಾವತ್ತೂ ವಿಧಾನಸಭಾ ಆಕಾಂಕ್ಷಿಯಲ್ಲ, ಅದಕ್ಕೆ ನನ್ನ ಪತಿ ಇದ್ದಾರೆ. ಆದರೆ ಮುಂಬರುವ ಲೋಕಸಭಾ ಚುನಾವಣೆಗೆ ಬಾಗಲಕೋಟೆಯಿಂದ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದೇನೆಂದು ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಸ್ಪಷ್ಟಪಡಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಸದೆಯಾಗಿ ಮೊದಲು ಈ ಭಾಗದ ಬಹುದಿನಗಳ ಕನಸಾದ ರೈಲು ಮಾರ್ಗ ತರುವುದು. ಉದ್ಯೋಗಾವಕಾಶಕ್ಕಾಗಿ ಉದ್ದಿಮೆಗಳನ್ನು ಪ್ರಾರಂಭಿಸುವುದು. ಕೂಡಲಸಂಗಮದಲ್ಲಿ ವಿಮಾನ ನಿಲ್ದಾಣ ಪ್ರಾರಂಭಿಸುವ ಮಹದಾಸೆ ನನ್ನದು. ಅದಕ್ಕಾಗಿ ಲೋಕಸಭೆ ಚುನಾವಣೆಗೆ ಸ್ಪ ರ್ಧಿಸುವ ಇಚ್ಛೆ ಹೊಂದಿದ್ದೇನೆ. ಅಲ್ಲಿವರೆಗೂ ಜಿಪಂ ಅಧ್ಯಕ್ಷೆಯಾಗಿ ಇನ್ನೂ ಅನೇಕ ಅಭಿವೃದ್ಧಿ ಕಾರ್ಯ ಮಾಡಬೇಕಾಗಿದೆ. ಈ ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿರುವ ನನ್ನ ಪತಿ ವಿಜಯಾನಂದ ಕಾಶಪ್ಪ ಅವರನ್ನು ಮತ್ತೂಮ್ಮೆ ಶಾಸಕರನ್ನಾಗಿ ಆಯ್ಕೆಮಾಡಲು ಶ್ರಮಿಸುವುದಾಗಿ ಹೇಳಿದರು.