ಘಟಪ್ರಭಾ ಬಲದಂಡೆ ಕಾಲುವೆ ಸ್ವಚ್ಛತೆಗೆ ಸೂಚನೆ
Team Udayavani, Apr 21, 2019, 2:23 PM IST
ಬಾಗಲಕೋಟೆ: ಜಿಆರ್ಬಿಸಿ ಕಾಲುವೆ ತುಂಬ ಜಾಲಿ, ಗಿಡಕಂಟಿಗಳು ಅಪಾರ ಪ್ರಮಾಣದಲ್ಲಿ ಬೆಳೆದ ನಿಂತು ನೀರು ಸರಾಗವಾಗಿ ಹೋಗದಂತೆ ಅಡ್ಡಿಯಾಗಿದ್ದು, ಇದರ ಸ್ವಚ್ಛತೆಗೆ ಕ್ರಮ ಕೈಗೊಳ್ಳುವಂತೆ ಪ್ರಾದೇಶಿಕ ಆಯುಕ್ತ ತುಷಾರ ಗಿರಿನಾಥ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಬರ ಪರಿಸ್ಥಿತಿ ನಿರ್ವಹಣೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಆರ್ಬಿಸಿ ಕಾಲುವೆಗೆ ನೀರು ಹರಿಸಲಾಗುತ್ತಿದ್ದರೂ ಈವರೆಗೆ ನಿರೀಕ್ಷಿತ ಮಟ್ಟದಲ್ಲಿ ಡಿಸ್ಟಿಬುಟರ್ ಚಾಲನ್ಗಳಲ್ಲಿ ಹರಿಯುತ್ತಿಲ್ಲ. ಇಲ್ಲಿ ಬೆಳೆದು ನಿಂತ ಜಾಲಿಕಂಠಿ, ನೀರು ಸರಾಗವಾಗಿ ಹರಿಯಲು ತಡೆಗಟ್ಟಿದ್ದು, ತಕ್ಷಣವೇ ಜಾಲಿಯನ್ನು ತೆಗೆಯಬೇಕು ಎಂದು ತಿಳಿಸಿದರು.
ಡಿಸಿ ಆರ್.ರಾಮಚಂದ್ರನ್ ಮಾತನಾಡಿ, ಈ ಕುರಿತು ತಾವು ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳಿಗೂ ತಿಳಿಸಲಾಗುವುದು. ಬೇಸಿಗೆಯಲ್ಲಿ ಕೃಷ್ಣಾ ನದಿ ಪಾತ್ರದ ಗ್ರಾಮಗಳಿಗೆ ಯಾವುದೇ ತೊಂದರೆಯಾಗದಂತೆ ಪರ್ಯಾಯ ಕ್ರಮ ಕೈಗೊಳ್ಳಬೇಕು. ಎಲ್ಲ ಕುಡಿಯುವ ನೀರಿನ ಯೋಜನೆಗಳನ್ನು ನಿರಂತರ ಜ್ಯೋತಿ ಯೋಜನೆಯಡಿ ವಿದ್ಯುದ್ದಿಕರಣಗೊಳಿಸಲು ಕ್ರಮ ಕೈಗೊಳ್ಳಲು ತಿಳಿಸಿದರು. ಕೆರೂರ ಪಟ್ಟಣದಲ್ಲಿ ಒಂದು ಟ್ಯಾಂಕರ್ ಹಾಗೂ ಖಾಸಗಿ ಬೋರವೆಲ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದ್ದು, 36 ಬೋರ್ವೆಲ್ಗಳು ಚಾಲ್ತಿಯಲ್ಲಿವೆ ಎಂದು ಸಭೆಗೆ ತಿಳಿಸಿದರು. ಪ್ರತಿ ತಾಲೂಕು ಟಾಸ್ಕ್ಪೋರ್ಸ್ಗಳಿಗೆ ಟಿಟಿಎಪ್ ಅಡಿ 1.5 ಕೋಟಿಯಂತೆ ಈಗಾಗಲೇ ಹಣ ಬಿಡುಗಡೆ ಮಾಡಲಾಗಿದೆ. 122 ಬೋರವೆಲ್ಗಳನ್ನು ಸಹ ಕೊರೆಯಲಾಗಿದೆ. ಟಿಟಿಎಫ್-1, ಟಿಟಿಎಫ್-2, ಟಿಟಿಎಪ್-3 ಹಾಗೂ 4 ನಲ್ಲಿ ಕುಡಿಯುವ ನೀರಿಗೆ ಯಾವುದೇ ಅನುದಾನದ ಕೊರತೆಯಿಲ್ಲ. ಆದರು ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದೇ ಇರುವುದನ್ನು ಜಿಪಂ ಕುಡಿಯು ನೀರಿನ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು. ಸ್ವೀಪ್ ಯೋಜನೆಯಡಿ ಮತದಾನ ಜಾಗೃತಿಗಾಗಿ ಹಮ್ಮಿಕೊಂಡ ಕಾರ್ಯಕ್ರಮಗಳ ಬಗ್ಗೆ ಹಾಗೂ ಮತಗಟ್ಟೆಗಳಲ್ಲಿ ಪಿಡಬ್ಲೂಡಿ ಓಟರ್ಗಳಿಗೆ ಮತಗಟ್ಟೆಗೆ ಬರಲು ವಾಹನ ವ್ಯವಸ್ಥೆ, ರ್ಯಾಂಪ್ ವ್ಯವಸ್ಥೆ, ವ್ಹೀಲ್ ಚೇರ್ ವ್ಯವಸ್ಥೆ ಸೌಲಭ್ಯಗಳ ಬಗ್ಗೆ ಚರ್ಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ಶಶಿಧರ ಕುರೇರ, ಉಪವಿಭಾಗಾಧಿಕಾರಿ ಇಕ್ರಮ, ಬಾಗಲಕೋಟೆ ಉಪವಿಭಾಗಾಧಿಕಾರಿಎಚ್.ಜಯಾ ಉಪಸ್ಥಿತರಿದ್ದರು.