ಮುಧೋಳ ನಾಯಿ ನೋಡಿ ದೇಶಭಕ್ತಿ ತಿಳ್ಕೊಳ್ಳಿ
Team Udayavani, May 7, 2018, 6:15 AM IST
ಜಮಖಂಡಿ (ಬನಹಟ್ಟಿ): “ಕಾಂಗ್ರೆಸ್ನವರಿಗೆ ನಮ್ಮ ದೇಶಭಕ್ತಿಯಲ್ಲೂ ಕೆಟ್ಟ ವಾಸನೆ ಬರುತ್ತಿದೆ. ದೇಶದ ಗಡಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಿದರೆ ಸೈನಿಕರ ಕಡೆ ಸಾಕ್ಷಿ ಕೇಳುವ ಹಂತಕ್ಕೆ ಬಂದಿದ್ದಾರೆ. ದೇಶಭಕ್ತಿ ಬಗ್ಗೆ ಕಾಂಗ್ರೆಸ್ಸಿಗರು ಮಹಾತ್ಮ ಗಾಂಧೀಜಿಯವರ ಜೀವನಚರಿತ್ರೆ ಓದಿ ತಿಳಿದುಕೊಳ್ಳಿ. ಇಲ್ಲದಿದ್ದರೆ ಮುಧೋಳ ನಾಯಿ ನೋಡಿಯಾದರೂ ತಿಳಿದುಕೊಳ್ಳಿ’ ಎಂದು ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್ನವರಿಗೆ ದೇಶಭಕ್ತಿಯ ಟಾಂಗ್ ನೀಡಿದರು.
ಜಮಖಂಡಿ ಹೊರವಲಯದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿ, “ಕಾಂಗ್ರೆಸ್ನವರು ಇಷ್ಟು ವರ್ಷ ಅಧಿಕಾರ ಅನುಭವಿಸಿ ಆಗಸ (ಆಕಾಶ) ತಲುಪಿದ್ದಾರೆ. ಅವರಿಗೆ ನಮ್ಮ ದೇಶಭಕ್ತಿಯಲ್ಲೂ ಕೆಟ್ಟ ವಾಸನೆ ಬರುತ್ತಿದೆ. ಇಲ್ಲಿನ ಮುಧೋಳದ ನಾಯಿಗಳು ದೇಶದ ಸೇನೆಯಲ್ಲಿ ಕೆಲಸ ಮಾಡುತ್ತಿವೆ. ಮುಧೋಳ ನಾಯಿ ನೋಡಿಯೂ ಅವರು ಕೆಳಗೆ ಬರುವ ವಿಶ್ವಾಸವಿಲ್ಲ’ ಎಂದು ಕುಟುಕಿದರು.
ಕಬ್ಬು ಬೆಳೆಗಾರರಿಗೆ ಸಹಾಯಧನ: ಈ ಭಾಗದಲ್ಲಿ ಕಬ್ಬು ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಿಗೆ ಸೂಕ್ತ ನೀರಾವರಿ ಸೌಲಭ್ಯ ಕಲ್ಪಿಸುವುದರ ಜತೆಗೆ ಪ್ರತಿ ಕ್ವಿಂಟಲ್ ಕಬ್ಬಿಗೆ 5.50 ರೂ. ಸಹಾಯಧನ ನೀಡುತ್ತೇವೆ. ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ರೈತರ ಖಾತೆಗೆ ನೇರವಾಗಿ ಈ ಸಹಾಯಧನ ಜಮೆಯಾಗಲಿದೆ. ಈ ಭಾಗದ ರೈತರಿಗೆ ಅನುಕೂಲವಾಗಲಿ ಎಂದು ನೀರಾವರಿ ಯೋಜನೆ
ತರಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಅದನ್ನು ಬೇರೆಡೆ ಸಾಗಿಸಿದೆ. ಕಬ್ಬು ಬೆಳೆಗಾರರ ಮೇಲೆ ಸಿದ್ದರಾಮಯ್ಯಗೆ ಯಾವ ಜನ್ಮದ ದ್ವೇಷವಿದೆಯೋ ಗೊತ್ತಿಲ್ಲ ಎಂದರು.
ದಲಿತ ರಾಷ್ಟ್ರಪತಿಯನ್ನೂ ಅಭಿನಂದಿಸಿಲ್ಲ: 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಾಗ, ತಾಯಿ- ಮಗ (ಸೋನಿಯಾ, ರಾಹುಲ್) ಬಿಜೆಪಿ ಪ್ರಮಾಣ ವಚನ ನೋಡುವ ಮನಸ್ಸು ಮಾಡಲಿಲ್ಲ. ಕಾಂಗ್ರೆಸ್ನವರು ನಾಮದಾರ, ನಾನು ಕಾಮದಾರ. ನನ್ನಂತವರಿಗೆ ಅಭಿನಂದನೆಸಲ್ಲಿಸದ ಬಗ್ಗೆ ನಾನು ಅರ್ಥ ಮಾಡಿಕೊಂಡೆ. ಕಾಂಗ್ರೆಸ್ನವರ ಅಹಂಕಾರ ಮುಗಿಲು ಮುಟ್ಟಿದೆ. ದಲಿತ ಸಮುದಾಯದ ವ್ಯಕ್ತಿ ರಾಷ್ಟ್ರಪತಿಯಾದರು. ಒಂದು ವರ್ಷವಾದರೂ ಮೇಡ್ಂ ಸೋನಿಯಾ ಗಾಂಧಿ ದಲಿತ ರಾಷ್ಟ್ರಪತಿಯನ್ನು ಅಭಿನಂದಿಸಲಿಲ್ಲ. ಅದಕ್ಕೆ ಅವರಿಗೆ ಸಮಯವೂ ಸಿಗಲಿಲ್ಲ. ಸೋನಿಯಾ ಮಗ ರಾಹುಲ್ ಬೇಬಿ, ರಾಷ್ಟ್ರಪತಿ ಭವನಕ್ಕೆ ಕೇವಲ ಮನವಿ ಹಿಡಿದುಕೊಂಡು ಹೋದರು. ಇವರ ದಲಿತಪರ ಕಾಳಜಿ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.
ಬಸವಣ್ಣನ ತತ್ವ ಪಾಲಿಸಿ: ನನ್ನ ಮಾತನ್ನು ಕೇಳುವುದು ಬಿಡಿ. ಜೈ ಭಾರತ ಜನನಿಯ ತನುಜಾತೆ ಎಂಬ ಮಾತನ್ನಾದರೂ ಕೇಳಿ. ಕರ್ನಾಟಕ ಯಾವುತ್ತೂ ವಿಭಜಕ (ಒಡೆಯುವ) ರಾಜಕಾರಣ ಒಪ್ಪುವುದಿಲ್ಲ. ಮೇ 12ರಂದು ಜನತೆ ಕಾಂಗ್ರೆಸ್ನವರಿಗೆ ಬುದ್ಧಿ
ಕಲಿಸುತ್ತಾರೆ. ಈ ನೆಲದ ಬಸವಣ್ಣನವರ ಬಗ್ಗೆ ಅವರು ಮಾತನಾಡುತ್ತಾರೆ. ಆದರೆ, ಅವರ ತತ್ವವನ್ನು ಮರೆತಿದ್ದಾರೆ. ಕಾಂಗ್ರೆಸ್ನವರಿಗೆ ನುಡಿದಂತೆ ನಡೆ ಎಂಬ ಎರಡು ಶಬ್ದಗಳು ಮಾತ್ರ ಗೊತ್ತಿವೆ. ಕಳೆದ ಐವತ್ತು ವರ್ಷದಲ್ಲಿ ಇವರಿಗೆ ಬಸವಣ್ಣ ನೆನಪಾಗಲಿಲ್ಲ. ಈಗ ಮಾತನಾಡುತ್ತಿದ್ದಾರೆ. ನಾವು ಲಂಡನ್ನ ಥೇಮ್ಸ್ ನದಿ ದಡದಲ್ಲಿ ಬಸವಣ್ಣನ ಪುತ್ಥಳಿ ನಿರ್ಮಾಣ ಮಾಡಿದೆವು. ಈ ಬಾರಿಯೂ ನಾನು ಬಸವಣ್ಣನವರ ಜಯಂತಿಗೆ ಲಂಡನ್ಗೆ ಹೋಗಿದ್ದೆ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿ ವಿರುದ್ಧ ಕಿಡಿ ಕಾರಿದರು.
ಚಿತ್ರದುರ್ಗದಲ್ಲಿ ಶ್ರೀರಾಮುಲು ಭೇಟಿಯಾಗಿದ್ದರು. ಬಾಗಲಕೋಟೆಯಲ್ಲಿ ಸಿಎಂ ಸೋಲು ಖಚಿತ ಎಂದರು. ಬಾಗಲಕೋಟೆಯ ಮಣ್ಣು ಬಲಿದಾನದ ಮಣ್ಣು. ಇಲ್ಲಿಯ ಬೇಡರು, ಇಂಗ್ಲಿಷರ ವಿರುದ್ಧ ಹೋರಾಡಿದ್ದರು. ರಾಷ್ಟ್ರಕ್ಕಾಗಿ ಹೇಗೆ ನಮ್ಮನ್ನು ಸಮರ್ಪಿಸಬಹುದು ಎಂಬುದಕ್ಕೆ ಹಲಗಲಿ ಬೇಡರು ಸಾಕ್ಷಿಯಾಗಿದ್ದಾರೆ. ಇಂದು ಸೇರಿದ ಅಪಾರ ಜನಸ್ತೋಮ ನೋಡಿ ಸಿದ್ದರಾಮಯ್ಯಗೆ ರಾತ್ರಿ ನಿದ್ದೆಯೇ
ಬರೋದಿಲ್ಲ ಎಂದು ವ್ಯಂಗ್ಯವಾಡಿದರು.