ಗ್ರಾಮೀಣ ಅಭಿವೃದ್ಧಿಗೆ ಆದ್ಯತೆ: ಚರಂತಿಮಠ
Team Udayavani, Jul 22, 2020, 8:39 AM IST
ಬಾಗಲಕೋಟೆ: ರಾಜ್ಯದಲ್ಲಿ ಬಾಗಲಕೋಟೆ ಕ್ಷೇತ್ರವನ್ನು ಅಭಿವೃದ್ಧಿ ಕಾಮಗಾರಿಗಳ ಮೂಲಕ ಮಾದರಿಯಾಗುವ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ಶಾಸಕ ಡಾ|ವೀರಣ್ಣ ಚರಂತಿಮಠ ಹೇಳಿದರು.
ಸಮೀಪದ ಕಿರಸೂರ ಗ್ರಾಮದಲ್ಲಿ ಕಿರಸೂರದಿಂದ ಹಳೆಯ ಮಲ್ಲಾಪುರವರೆಗೆ 60 ಲಕ್ಷ ರೂ. ರಸ್ತೆ ನಿರ್ಮಾಣ, ಕಿರಸೂರದಿಂದ ಮುಗಳೊಳ್ಳಿ ಆರ್.ಸಿ. ವರೆಗೆ 5 ಲಕ್ಷ ರೂ. ರಸ್ತೆ ನಿರ್ಮಾಣ ಹಾಗೂ ಗ್ರಾಮದ ಆಶ್ರಯ ಕಾಲೋನಿಯಲ್ಲಿ ಮೂಲ ಸೌಕರ್ಯಗಳಾದ ಸಿಸಿ ರಸ್ತೆ, ಚರಂಡಿ ಹಾಗೂ ಸಿಡಿಗಳ ನಿರ್ಮಾಣಕ್ಕೆ ನರೇಗಾ ಯೋಜನೆ ಅಡಿಯಲ್ಲಿ 82 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ನನ್ನ ಅಧಿಕಾರವ ಧಿಯಲ್ಲಿ ಗ್ರಾಮಗಳ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅದಕ್ಕೆ ಗ್ರಾಮೀಣ ಜನರು ಸಹಕಾರ ನೀಡಬೇಕು. ಮನ್ನಿಕಟ್ಟಿ, ಕಿರಸೂರ, ನೀರಾವರಿ ಮಾಡುವ ವಿಚಾರದಲ್ಲಿ ನನ್ನ ಬದ್ಧತೆ ಕಡಿಮೆಯಾಗಿಲ್ಲ. ನೀರಾವರಿ ಯೋಜನೆ ಬಗ್ಗೆ ಚಿಂತನೆ, ಪ್ರಯತ್ನ ಅ ಧಿಕಾರಿಗಳೊಂದಿಗೆ ನಿತ್ಯ ನಡೆಯುತ್ತಿದೆ ಎಂದರು.
ತಾಪಂ ಅಧ್ಯಕ್ಷ ಚನ್ನಗೌಡ ಪರನಗೌಡರ, ತಾ.ಪಂ ಮುಖ್ಯ ಕಾರ್ಯನಿರ್ವಾಹಕ ಎನ್.ವೈ.ಬಸರಿಗಿಡದ, ವಿ.ಎಸ್. ಕೊಟಗಿ, ಭಗವತಿ ಗ್ರಾ.ಪಂ ಆಡಳಿತಾಧಿಕಾರಿ ಎ.ಎ. ರಾಮತಿರ್ಥ, ಪಿಡಿಒ ಎಂ.ಎಸ್ ಕಟ್ಟಿಮನಿ, ಸುರೇಶ ಕೊಣ್ಣೂರ, ರಾಜು ಮುದೇನೂರ, ಉಮೇಶ ಜುಮನಾಳ, ಲವಪ್ಪ ಕಪ್ಪಲಿ, ಅಪ್ಪಣ್ಣ ವಡ್ರಕಲ್, ಬಸವರಾಜ ಡುಗ್ಗಿ, ಹುಚ್ಚೇಶ ನಿಲುಗಲ್, ದುಂಡಯ್ಯ ಹಳದೂರಮಠ ಮುಂತಾದವರು ಉಪಸ್ಥಿತರಿದ್ದರು.