ಕೃತಕ ಮರಳು ಘಟಕ ಸ್ಥಗಿತಗೊಳಿಸಲು ಅಹೋರಾತ್ರಿ ಧರಣಿ
Team Udayavani, Jul 22, 2019, 10:09 AM IST
ಜಮಖಂಡಿ: ಕೃತಕ ಮರಳು ಘಟಕ ಸ್ಥಗಿತಗೊಳಿಸಲು ಆಗ್ರಹಿಸಿ ಮರೇಗುದ್ದಿ-ಪಿಎಂ ಬುದ್ನಿ ಗ್ರಾಮದಲ್ಲಿ ರೈತರು ಅಹೋರಾತ್ರಿ ಧರಣಿ ನಡೆಸಿದರು.
ಜಮಖಂಡಿ: ತಾಲೂಕಿನ ಮರೇಗುದ್ದಿ-ಪಿಎಂ ಬುದ್ನಿ ಗ್ರಾಮದಲ್ಲಿ ಅಕ್ರಮವಾಗಿ ಕೃತಕ (ಎಂ ಸ್ಯಾಂಡ್ ಉಸುಕು) ಮರಳು ತಯಾರಿಕೆ ಘಟಕ ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಕಳೆದ 38 ದಿನಗಳಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಮುಂದುವರಿದಿದೆ. ಗ್ರಾಮಸ್ಥರು ಸೋಮವಾರ ಜು. 22ರಂದು ಧಾರವಾಡ-ವಿಜಯಪುರ ರಾಜ್ಯ ಹೆದ್ದಾರಿ ಸ್ಥಗಿತಗೊಳಿಸಿ ಉಗ್ರ ಹೋರಾಟ, ಪ್ರತಿಭಟನೆ ನಡೆಸಲಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ತಾಲೂಕಿನ ಮರೇಗುದ್ದಿ ಮತ್ತು ಪಿ.ಎಂ.ಬುದ್ನಿ ಎರಡು ಗ್ರಾಮಗಳ ಸರಹದ್ದಿನಲ್ಲಿ ಅಕ್ರಮ ಗಣಿಗಾರಿಕೆ ಬಾಲಾಜಿ ಎಂ ಸ್ಯಾಂಡ್ ಫ್ಯಾಕ್ಟರಿ ಅನಧಿಕೃತವಾಗಿ ನಡೆಸುತ್ತಿರುವುದರ ವಿರುದ್ಧ ಧರಣಿ ಸತ್ಯಾಗ್ರಹ ನಡೆಸಿ ತಿಂಗಳು ಗತಿಸಿದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಯಾವುದೇ ಕ್ರಮ ಜರುಗಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಧರಣಿ ಸತ್ಯಾಗ್ರಹದಲ್ಲಿ ಅಬ್ದುಲ್ ಸಿಕಂದರ, ಶಿವನಿಂಗ ತುಬಚಿ, ಜಗು ಮಠಪತಿ, ಪ್ರದೀಪ ನಂದೆಪನ್ನವರ, ಪ್ರಭು ಬಾರಿಕಾಯಿ, ಪರಸಪ್ಪ ಬಡಿಗೇರ, ರಮೇಶ ಮಾಯನ್ನವರ, ಅಶೋಕ ಹಲಗಣ್ಣವರ, ಶ್ರೀಶೈಲ ಮಾಯನ್ನವರ, ವೆಂಕಪ್ಪ ಕಾಗಿನವರ, ಶಾಸಪ್ಪ ನಾಯಕ, ವೆಂಕಪ್ಪ ಕಡಕೋಳ, ಅಡಿವೆಪ್ಪ ಇಟಗಿ, ರಾಜಶೇಖರ ಪಾಟೀಲ, ಮಲ್ಲಪ್ಪ ಹರಗೋಣ ಇದ್ದರು.