ಪ್ರವಾಹ ಬಾಧಿತ ಗ್ರಾಮಗಳ ಸ್ಥಳಾಂತರಿಸಲು ಆಗ್ರಹ
Team Udayavani, Sep 9, 2019, 10:16 AM IST
ಬಾಗಲಕೋಟೆ: ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ ಜಿಲ್ಲೆಯ ಬಾಗಲಕೋಟೆ, ಬಾದಾಮಿ, ಮುಧೋಳ ಹಾಗೂ ಜಮಖಂಡಿ ತಾಲೂಕಿನ ಪ್ರವಾಹ ಬಾಧಿತ ಪ್ರದೇಶಗಳ ಪ್ರವಾಸ ಕೈಗೊಂಡು ಹಾನಿ ಪರಿಶೀಲಿಸಿದರು.
ರವಿವಾರ ಬೆಳಗ್ಗೆ ಬಾದಾಮಿಯ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಪ್ರವಾಹ ಬಾತ ಪ್ರದೇಶಗಳ ಛಾಯಾಚಿತ್ರ ಪ್ರದರ್ಶನ ವೀಕ್ಷಿಸಿದರು. ನಂತರ ಗೋವನಕಿ ಗ್ರಾಮಕ್ಕೆ ತೆರಳಿ ನದಿ ಪಾತ್ರದಲ್ಲಿ ಸಂಗ್ರಹವಾಗಿದ್ದ ಮರಳನ್ನು ವೀಕ್ಷಿಸಿದರು. ನಂದಿಕೇಶ್ವರ ಗ್ರಾಮಕ್ಕೆ ತೆರಳಿ ಅಲ್ಲಿನ ಆಶ್ರಯ ಮನೆಗಳಿಗೆ ಭೇಟಿ ನೀಡಿ ಅಲ್ಲಿ ಮೂಲಭೂತ ಸೌಲಭ್ಯಗಳು ಇರುವ ಬಗ್ಗೆ ಪರಿಶೀಲನೆ ಮಾಡಿದರು. ಜಾಲಿಹಾಳ ಗ್ರಾಮಕ್ಕೆ ತೆರಳಿ ಸೂರ್ಯಕ್ರಾಂತಿ ಬೆಳೆ ಹಾನಿ ವೀಕ್ಷಿಸಿದರು.
ಐತಿಹಾಸಿಕ ತಾಣಗಳಾದ ಪಟ್ಟದಕಲ್ಲಿಗೆ ತೆರಳಿ ಮನೆ ಹಾಗೂ ರಸ್ತೆ ಹಾನಿ ಪರಿಶೀಲಿಸಿದರು. ನಂತರ ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮಕ್ಕೆ ತೆರಳಿ ದಾಳಿಂಬೆ ಬೆಳೆ ಹಾನಿ ವೀಕ್ಷಿಸಿ, ರೈತರ ಸಮಸ್ಯೆ ಆಲಿಸಿದರು. ಮುಧೋಳ ತಾಲೂಕಿನ ಚಿಚಖಂಡಿ ಮತ್ತು ಯಾದವಾಡ ಸೇತುವೆ ಪರಿಶೀಲಿಸಿದರು. ನಂತರ ಜಮಖಂಡಿ ತಾಲೂಕಿನ ಅಸ್ಕಿ ಗ್ರಾಮದಲ್ಲಿ ತೆರೆಯಲಾದ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿನ ಸಂತ್ರಸ್ತರ ಸಮಸ್ಯೆ ಆಲಿಸಿದರು. ಸಂತ್ರಸ್ತರು ಸಂಪೂರ್ಣವಾಗಿ ಬೇರೆಡೆ ಸ್ಥಳಾಂತರಿಸುವಂತೆ ಮನವಿ ಮಾಡಿಕೊಂಡರು. ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ ಹೇಳಿದರು. ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಪ್ರವಾಸದುದ್ದಕ್ಕೂ ಪ್ರವಾಹ ಬಾಧಿತ ಪ್ರದೇಶಗಳ ಹಾನಿ ವಿವರಣೆ ಮುಖ್ಯ ಕಾರ್ಯದರ್ಶಿಗಳಿಗೆ ನೀಡಿದರು. ಜಿಪಂ ಸಿಇಒ ಗಂಗೂಬಾಯಿ ಮಾನಕರ, ಪ್ರೊಬೇಷನರಿ ಐಎಎಸ್ ಅಧಿಕಾರಿ ಗರಿಮಾ ಪೋವಾರ, ಉಪವಿಭಾಗಾಧಿಕಾರಿ ಎಚ್. ಜಯಾ, ಜಂಟಿ ಕೃಷಿ ನಿರ್ದೇಶಕ ರಾಜಶೇಖರ ವಿಜಾಪುರ ಉಪಸ್ಥಿತರಿದ್ದರು.