ರೈತರ ಹೋರಾಟಕ್ಕೆ ಮಣಿದ ಸಮೀರವಾಡಿ ಕಾರ್ಖಾನೆ; ದರ ಘೋಷಣೆ
ಗೋದಾವರಿ ಕಾರ್ಖಾನೆಯಿಂದ 2022-23 ನೇ ಸಾಲಿಗೆ 2900 ರೂ.
Team Udayavani, Nov 7, 2022, 9:57 PM IST
ಮಹಾಲಿಂಗಪುರ : ಕಳೆದ ಒಂದು ವಾರದಿಂದ ಕಬ್ಬಿನ ದರ ಘೋಷಣೆಗಾಗಿ ರೈತ ಸಂಘ ಮತ್ತು ರೈತರು ನಡೆಸಿದ್ದ ಹೋರಾಟಕ್ಕೆ ಮಣಿದ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆಯು ಸೋಮವಾರ ರಾತ್ರಿ 9ಕ್ಕೆ 2022-23 ನೇ ಸಾಲಿನ ಮೊದಲ ಕಂತಿನ ಕಬ್ಬಿನ ಬಿಲ್ 2900 ರೂ. ಕೊಡುವದಾಗಿ ಘೋಷಿಸಿತು.
ಕಬ್ಬಿನ ದರ ಘೋಷಣೆಗಾಗಿ ಶನಿವಾರ ರೈತ ಸಂಘ ಮತ್ತು ಸಮೀರವಾಡಿ ಕಬ್ಬು ಬೆಳೆಗಾರರ ಸಂಘದಿಂದ ನಡೆದಿದ್ದ ಸಭೆ ವಿಫಲವಾಗಿ ಸಭೆಯನ್ನು ನ.7ರ ಸೋಮವಾರಕ್ಕೆ ಮುಂದೂಡಲಾಗಿತ್ತು.
ಇಂದು ಸೋಮವಾರ ಮುಂಜಾನೆ 10 ರಿಂದ ರಾತ್ರಿ 9ವರೆಗೂ ರೈತ ಸಂಘ , ಕಬ್ಬು ಬೆಳಗಾರ ಸಂಘ ಮತ್ತು ಕಾರ್ಖಾನೆ ಅಧಿಕಾರಿಗಳ ಮಧ್ಯೆ ದರ ಸಮರಕ್ಕಾಗಿ ಹಗ್ಗಜಗ್ಗಾಟ ನಡೆದು ಅಂತಿಮವಾಗಿ ರೈತ ಸಂಘ ಮತ್ತು ಸಭೆಯಲ್ಲಿ ಭಾಗವಹಿಸಿದ್ದ ಸಾವಿರಾರು ರೈತರು 2900 ದರ ನೀಡಬೇಕೆಂಬಬಿಗಿಪಟ್ಟಿಗೆ ಮಣಿದ ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಾಲಚಂದ್ರ ಭಕ್ಷಿಯವರು ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆಯು ಪ್ರಸಕ್ತ 2022-23 ನೇ ಸಾಲಿನಲ್ಲಿ ಪ್ರತಿಟನ್ ಕಬ್ಬಿಗೆ ಮೊದಲ ಕಂತಿಗೆ 2900 ದರ ನೀಡಲು ಒಪ್ಪಿದೆ ಎಂದು ಘೋಷಿಸಿದರು.
ಈ ಮೂಲಕ ಪ್ರಸಕ್ತ ಸಾಲಿನ ಕಬ್ಬಿನ ದರ ಘೋಷಣೆಗಾಗಿ ಅ. 29 ರಂದು ಮನವಿ ಅರ್ಪಣೆ, ನಂತರ ಕಾರ್ಖಾನೆ ಮುತ್ತಿಗೆ, ರೈತ ಸಂಘ ಮತ್ತು ಕಬ್ಬುಬೆಳೆಗಾರ ಸಂಘದ ಸಭೆಗಳು ನಡೆದಿದ್ದವು.
ಸಭೆಯಲ್ಲಿ ಗಲಾಟೆ : ಬನಹಟ್ಟಿ ಸಿಪಿಐ ಸೇರಿ ಹಲವರಿಗೆ ಗಾಯ
ದರ ನಿಗದಿ ಸಭೆಯಲ್ಲಿ ಸುಮಾರು 5-6 ಸಾವಿರ ರೈತರು ಭಾಗವಹಿಸಿದ್ದರು. ಸೋಮವಾರ ರಾತ್ರಿ 9ವರೆಗೆ ಸಭೆ ನಡೆದರೂ ದರ ಘೋಷಣೆಯಾಗದ ಹಿನ್ನಲೆಯಲ್ಲಿ ಉದ್ರಿಕ್ತ ಹೋರಾಟಗಾರು ಸಮೀರವಾಡಿ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸದಸ್ಯರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಈ ಗಲಾಟೆಯಲ್ಲಿ ಅವರನ್ನು ರಕ್ಷಿಸಲು ಹೋದ ಬನಹಟ್ಟಿ ಸಿಪಿಆಯ್ ಆಯ್.ಎಂ.ಮಠಪತಿ ಹಾಗೂ ಜಮಖಂಡಿ ಗ್ರಾಮೀಣ ಠಾಣಾಧಿಕಾರಿ ಬಿರಾದರ್ ಮೇಡಂ ಅವರಿಗೆ ಕಲ್ಲು ಬಡಿದು ಸಣ್ಣಪುಟ್ಟ ಗಾಯಗಳಾಗಿವೆ. ಗಲಾಟೆಯಲ್ಲಿ 3-4 ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿವೆ.
ರಾತ್ರಿ 9 ಕ್ಕೆ ಗಲಾಟೆ ಪ್ರಾರಂಭವಾಗುತ್ತಿದ್ದಂತೆ ಪರಿಸ್ಥಿತಿ ವಿಕೋಪಕ್ಕೆ ಹೋಗಬಾರದು ಎಂದು ಎಚ್ಚೆತ್ತ ಕಾರ್ಖಾನೆಯವರು 2900 ದರ ಘೋಷಿಸಿ, ಮತ್ತಷ್ಟು ಆಗಬಹುದಾದ ಅನಾಹುತ ವನ್ನು ತಪ್ಪಿಸಿದ್ದಾರೆ. ಬನಹಟ್ಟಿ ಸಿಪಿಆಯ್ ಐ.ಎಂ.ಮಠಪತಿ, ಜಮಖಂಡಿ ಗ್ರಾಮೀಣ ಠಾಣಾಧಿಕಾರಿ ಬಿರಾದಾರ ಅವರು ಮಹಾಲಿಂಗಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಂತಿಮವಾಗಿ ರೈತ ಸಂಘ ಮತ್ತು ರೈತರು ಮಾಡಿದ ಹೋರಾಟಕ್ಕೆ ಜಯ ದೊರೆತಿದೆ. ಸಮೀರವಾಡಿ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ್, ಕಾರ್ಯದರ್ಶಿ ರಂಗನಗೌಡ ಪಾಟೀಲ್, ರೈತ ಸಂಘದ ಮುಖಂಡರಾದ ಗಂಗಾಧರ ಮೇಟಿ, ಸುಭಾಸ ಶಿರಬೂರ, ಬಸವಂತಪ್ಪ ಕಾಂಬಳೆ, ಯಂಕಣ್ಣ ಮಳಲಿ, ಬಂದು ಪಕಾಲಿ ಸೇರಿದಂತೆ ಸಾವಿರಾರು ರೈತರು ಸಭೆಯಲ್ಲಿ ಭಾಗವಹಿಸಿದ್ದರು. ಮಹಾಲಿಂಗಪುರ ಠಾಣಾಧಿಕಾರಿ ವಿಜಯಕುಮಾರ ಕಾಂಬಳೆ ಹಾಗೂ ಪೊಲೀಸ್ ಸಿಬ್ಬಂದಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದೋಬಸ್ತ್ ಒದಗಿಸಿದ್ದರು.