ಅನರ್ಹರಿಗೆ ಜನತಾ ನ್ಯಾಯಾಲಯದಲ್ಲಿ ಶಿಕ್ಷೆ: ಎಸ್.ಆರ್.ಪಾಟೀಲ್
Team Udayavani, Nov 13, 2019, 8:46 PM IST
ಬಾಗಲಕೋಟೆ: ರಾಜ್ಯದ 15 ಕ್ಷೇತ್ರಗಳ ಉಪ ಚುನಾವಣೆ ಬಳಿಕ ಬಿಜೆಪಿ ಸರಕಾರ ಪತನವಾಗಲಿದೆ. ಸಿಎಂ ಯಡಿಯೂರಪ್ಪ ಮನೆಗೆ ಹೋಗುತ್ತಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಹೇಳಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯ ಶಾಸಕರ ಅನರ್ಹತೆ ಎತ್ತಿ ಹಿಡಿದಿದೆ. ಅನರ್ಹತೆ ಎನ್ನುವುದು ಒಂದು ಶಿಕ್ಷೆ. ಅವರೆಲ್ಲ ಅನರ್ಹತೆ ಮುಖ ಇಟ್ಟುಕೊಂಡು ಚುನಾವಣೆಗೆ ಹೋಗಬೇಕಿದೆ. ಉಪ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿರುವುದು ಅನರ್ಹ ಶಾಸಕರಿಗೆ ಖುಷಿ ಆಗಿರಬಹುದು. ಆದರೆ ಜನತಾ ನ್ಯಾಯಾಲಯದಲ್ಲಿ ಅವರಿಗೆ ಸೋಲು ಖಚಿತ. ಕೋರ್ಟ್ ತೀರ್ಪು ಕಾಂಗ್ರೆಸ್ಗೆ ದೊಡ್ಡ ಪ್ರಮಾಣದಲ್ಲಿ ಲಾಭವಾಗಲಿದೆ. ಜೀವಾವಧಿ ಶಿಕ್ಷೆಯಿಂದ ವಿನಾಯಿತಿ ಕೊಡಲು ಮನವಿ ಮಾಡಿದಾಗ, 10 ವರ್ಷ ಶಿಕ್ಷೆ ಕೊಟ್ಟ ಉದಾಹರಣೆಗಳಿವೆ. ಸಾಯುವವರೆಗೂ ಜೈಲಿನಲ್ಲಿ ಇರುವ ಬದಲು, 10 ವರ್ಷ ಜೈಲಿನಲ್ಲಿದ್ದರೂ ಅಷ್ಟೆ. ಶಿಕ್ಷೆ ಒಂದು ದಿನ, ಹತ್ತು ವರ್ಷ, ಜೀವನ ಪರ್ಯಂತವಾದರೂ ಶಿಕ್ಷೆ ಶಿಕ್ಷೆನೇ ಎಂದರು.