ಪೀಠಾಧಿಪತಿಗಳ ಆಯ್ಕೆ ಭಕ್ತರಿಗೆ ಬಿಟ್ಟಿದ್ದು: ಸ್ವಾಮೀಜಿ
Team Udayavani, Jun 28, 2021, 5:02 PM IST
ಗುಳೇದಗುಡ್ಡ: ಪಟ್ಟಣದ ಶ್ರೀ ಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠದ ಗುರುಪೀಠದ ಪರಂಪರೆ ಮುಂದುವರಿಸುವ ಬಹುದೊಡ್ಡ ಜವಾಬ್ದಾರಿ ಸಮಾಜದ ಸಮಸ್ತ ಭಕ್ತರ ಮೇಲಿದೆ. ಶ್ರೀಮಠದ 3ನೇ ಪೀಠಾಧಿ ಪತಿಗಳ ಆಯ್ಕೆಯನ್ನು ಭಕ್ತರ ಮೇಲೆ ಬಿಡಲಾಗಿದೆ ಎಂದು ಶ್ರೀ ಜಗದ್ಗುರು ಬಸವರಾಜ ಪಟ್ಟದಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠದ ಸಭಾ ಭವನದಲ್ಲಿ ಅಖೀಲ ಭಾರತ ಪಟ್ಟಸಾಲಿ ನೇಕಾರ ಸಮಾಜದ ಏಕೈಕ ಗುರುಪೀಠ ಶ್ರೀ ಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠ ಗುರು ಪರಂಪರೆಯನ್ನು ಮುನ್ನೆಡೆಸುವ ನಿಟ್ಟಿನಲ್ಲಿ ನಡೆದ ಪ್ರಮುಖರ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಈ ಪಟ್ಟಸಾಲಿ ಪೀಠಕ್ಕೆ ಭೌಗೋಲಿಕ ಹಾಗೂ ಮನುಜಕುಲದ ಬಹುದೊಡ್ಡ ವ್ಯಾಪ್ತಿ ಇದೆ. ಅದಕ್ಕಾಗಿ ಬಹಳಷ್ಟು ವಿವೇಚನೆಯಿಂದ, ವಿಶಾಲ ಭಾವನೆಯಿಂದ ಯೋಗ್ಯವಾದವರನ್ನು ಪೀಠಕ್ಕೆ ಗುರುವನ್ನಾಗಿ ಮಾಡಬೇಕು. ಭಕ್ತರ ಆಯ್ಕೆಯೇ ನಮ್ಮ ಆಯ್ಕೆ. ಇದರಲ್ಲಿ ನಮ್ಮ ಪಾತ್ರವೇನು ಇಲ್ಲವೆಂದು ಎಂದರು.
ಗುರುಸಿದ್ದೇಶ್ವರ ಬೃಹನ್ಮಠದ ಆಸ್ಥಾನ ಕಾರಬಾರಿಗಳಾದ ಮಲ್ಲೇಶಪ್ಪ ಬೆಣ್ಣಿ ಪ್ರಸ್ತಾವಿಕವಾಗಿ ಮಾತನಾಡಿ, ಶ್ರೀಮಠದ ದ್ವಿತೀಯ ಪೀಠಾಧಿ ಪತಿಗಳ ಪಟ್ಟಾಭಿಷೇಕ 42ನೇ ವಾರ್ಷಿಕ ದಿನವಾದ ಇಂದು ಶ್ರೀಮಠ ಗುರು ಪರಂಪರೆ ಆಯ್ಕೆ ಮಾಡಲು ಚರ್ಚಿಸುವ ನಿಟ್ಟಿನಲ್ಲಿ ಸಭೆ ಕರೆಯಲಾಗಿದೆ. ಪ್ರಸ್ತುತ ಮಹಾ ಸನ್ನಿ ಧಿಯವರು ವಯೋವೃದ್ಧರಾದ ಕಾರಣ ಹಾಗೂ ಗುರು ಪರಂಪರೆ ಮುಂದುವರಿಸುವ ಗುರುತರ ಜವಾಬ್ದಾರಿ ಸಮಾಜದ್ದಾಗಿದೆ. ಹಾಗಾಗಿ ಎಲ್ಲರೂ ಈ ಸಭೆಯಲ್ಲಿ ಗುರುವಿನ ಆಯ್ಕೆ ವಿಚಾರವಾಗಿ ಸೂಕ್ತ ಸಲಹೆ ಸೂಚನೆ ನೀಡಬೇಕು ಎಂದರು.
ಸಮಾಜದ ಪ್ರಮುಖರಾದ ಚಂದ್ರಶೇಖರ ತಿಪ್ಪಾಗೌಡ್ರ, ರವಿ ಗೌಡ್ರ, ಚಂದ್ರಕಾಂತ ಶೇಖಾ, ಈರಣ್ಣ ಅಲದಿ ಶಾಸ್ತ್ರೀಗಳು, ಸುರೇಖಾ ತಿಪ್ಪಾ, ಸಂಗಪ್ಪ ನಾರಾ, ಪ್ರಕಾಶ ರೋಜಿ, ಶಂಕರ ಲಕ್ಕುಂಡಿ, ತಾರಾಮತಿ ರೋಜಿ, ಸಂಗಪ್ಪ ತಿಪ್ಪಾ ಮಾತನಾಡಿದರು. ಪಟ್ಟಸಾಲಿ ಸಮಾಜದ ರಾಜ್ಯ ಕಾರ್ಯಾಧ್ಯಕ್ಷ ಚಂದ್ರಕಾಂತ ಶೇಖಾ, ಗುರುಸಿದ್ದೇಶ್ವರ ವಿದ್ಯಾ ಸಂಸ್ಥೆಯ ಚೇರಮನ್ ರಾಜು ಜವಳಿ, ಸಾಲೇಶ್ವರ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ ತಾಂಡೂರ, ತವನಿ ದಾಸೋಹ ಸಮಿತಿ ಅಧ್ಯಕ್ಷ ಸಂಗನಬಸಪ್ಪ ಚಿಂದಿ, ಪಟ್ಟಸಾಲಿ ನೇಕಾರ ಸಮಾಜದ ಅಧ್ಯಕ್ಷ ಈರಣ್ಣ ಶೇಖಾ, ವಿವೇಕಾನಂದ ಪರಗಿ ಇದ್ದರು.