ನಿರ್ವಹಣೆಯಿಲ್ಲದೇ ಶ್ರೀರಾಮಮಂದಿರ ಅನಾಥ
Team Udayavani, Nov 13, 2019, 10:53 AM IST
ಮುಧೋಳ: ನೂರಾರು ವರ್ಷಗಳ ಇತಿಹಾಸ ಹೊಂದಿರುವ, ಘೋರ್ಪಡೆ ಮಹಾರಾಜರ ಕಾಲದಲ್ಲಿ ನಿರ್ಮಾಣಗೊಂಡಿರುವ ಶ್ರೀರಾಮಮಂದಿರ ಸೂಕ್ತ ನಿರ್ವಹಣೆ ಇಲ್ಲದೇ ಅನಾಥವಾಗಿದೆ.
ಭವ್ಯ ಇತಿಹಾಸ ಹೊಂದಿದ ರಾಮಮಂದಿರದಲ್ಲಿ ಮಹಾರಾಜರ ಆಡಳಿತ ಅವಧಿಯಲ್ಲಿ ದಿನನಿತ್ಯ ಪೂಜೆ-ಪುನಸ್ಕಾರಗಳು ನಡೆಯುತ್ತಿದ್ದವು. ಆದರೀಗ ನಿತ್ಯ ಪೂಜೆ-ಪುನಸ್ಕಾರಗಳು ನಡೆಯದೇ ನಿರ್ಲಕ್ಷಕ್ಕೆ ಒಳಗಾಗಿದೆ. ನಗರದ ಹೃದಯ ಭಾಗ ಎನಿಸಿದ ಗಾಂಧಿವೃತ್ತದ ಹತ್ತಿರವೇ ಶ್ರೀರಾಮಮಂದಿರ ಇದ್ದು, ಗೋಡೆ ಶಿಥಿಲಗೊಂಡು ಕುಸಿಯುವ ಹಂತಕ್ಕೆ ತಲುಪಿದೆ. ಪ್ರದಕ್ಷಿಣೆ ಪಥದಲ್ಲಿ ಯಥೇತ್ಛವಾಗಿ ಕಸ ಬೆಳೆದಿದೆ. ತುಳಸಿ ಕಟ್ಟೆ ಸುತ್ತ ಗಿಡಗಂಟಿಗಳು ಬೆಳೆದಿದೆ. ಪೂಜೆ ಮಾಡುವವರು ಇಲ್ಲದ ಕಾರಣ ಗರ್ಭಗುಡಿಯಲ್ಲಿ ಧೂಳು ತುಂಬಿಕೊಂಡಿದೆ. ಬೀದಿ ನಾಯಿಗಳು ದೇವಸ್ಥಾನದಲ್ಲಿ ಗಲೀಜು ಮಾಡುತ್ತಿವೆ. ಸ್ವಚ್ಛತೆ ಕೈಗೊಳ್ಳುವವರೂ ಇಲ್ಲದೇ ಹಾಳು ಕೊಂಪೆಯಂತಾಗಿದೆ.
ಬೇಕಿದೆ ಕಾಯಕಲ್ಪ: ನಗರದ ಹೃದಯ ಭಾಗದಲ್ಲೇ ದೇವಸ್ಥಾನ ಇದ್ದರೂ ಜನಪ್ರತಿನಿಧಿಗಳಾಗಲಿ, ಸಂಬಂಧಿಸಿದ ಅಧಿಕಾರಿಗಳಾಗಲಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಮುಂದಾಗದಿರುವುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ. ಅರ್ಚಕರು ಹಾಗೂ ಎಣ್ಣೆ-ದೀಪಕ್ಕಾಗಿ ಮುಜರಾಯಿ ಇಲಾಖೆಯಿಂದ ಅನುದಾನ ಒದಗಿಸಲು ಅವಕಾಶವಿದ್ದು, ದೇವಸ್ಥಾನದತ್ತ ಮುತುವರ್ಜಿ ವಹಿಸಿ ಶ್ರೀರಾಮನಿಗೆ ನಿತ್ಯ ಪೂಜೆ ನಡೆಯುವಂತೆ ನೋಡಿಕೊಳ್ಳಬೇಕು ಎಂಬುದು ಹಲವರ ಒತ್ತಾಸೆ.
ಸಂಘ-ಸಂಸ್ಥೆಗಳಿಂದ ಸ್ವಚ್ಛತಾ ಕಾರ್ಯ: ಇಲ್ಲಿನ ಶ್ರೀರಾಮ ಮಂದಿರ ನಿರ್ಲಕ್ಷಕ್ಕೆ ಒಳಗಾಗಿರುವುದನ್ನು ಕಂಡ ನಗರದ ಸ್ನೇಹಜ್ಯೋತಿ ಮಹಿಳಾ ಸಂಸ್ಥೆಯು ನಿಗದಿತ ದಿನದಂದು ಮಂದಿರದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಿದೆ. ಸಂಸ್ಥೆಯ ಮುಖ್ಯಸ್ಥೆ ಸ್ನೇಹಾ ಹಿರೇಮಠ ನೇತೃತ್ವದಲ್ಲಿ ಸದಸ್ಯರೆಲ್ಲ ಮಂದಿರ ಬಗ್ಗೆ ಕಾಳಜಿ ವಹಿಸಿದ್ದು, ಎರಡು ದಿನಗಳಿಗೊಮ್ಮೆ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ.
ಅಯೋಧ್ಯೆಯಲ್ಲಿರುವ ರಾಮನಿಗೆ ನಿತ್ಯ ಪೂಜೆ ನಡೆಯುವಂತೆ ಇಲ್ಲಿನ ಐತಿಹಾಸಿಕ ಶ್ರೀರಾಮ ಮಂದಿರದಲ್ಲಿರುವ ರಾಮನಿಗೂ ನಿತ್ಯ ಪೂಜೆ ನಡೆಯಬೇಕು. ದೇವಸ್ಥಾನ ಸ್ವಚ್ಛತೆ ಕೈಗೊಂಡು ಹಳೆಯ ಗತ ವೈಭವ ಮರಳುವಂತೆ ಮಾಡಬೇಕು. ಮಂದಿರದಲ್ಲಿ ನಿತ್ಯ ಪೂಜೆ-ಪುನಸ್ಕಾರಗಳು ನಡೆದು ಶ್ರೀರಾಮನ ಸ್ಮರಣೆ ನಡೆಯಬೇಕು. ಸ್ನೇಹಾ ಹಿರೇಮಠ, ಸ್ನೇಹಲೋಕ ಸಂಸ್ಥೆ ಅಧ್ಯಕ್ಷೆ
ಹಿಂದೆ ಇದಕ್ಕಿತ್ತು ನಳೆ ದೇವಸ್ಥಾನ ಹೆಸರು: ಶ್ರೀರಾಮ ಮಂದಿರವನ್ನು ಘೋರ್ಪಡೆ ಮಹಾರಾಜರ ಕಾಲದಲ್ಲಿ ನಳೆ ದೇವಸ್ಥಾನ ಎಂತಲೂ ಕರೆಯಲಾಗುತ್ತಿತ್ತು. ನಗರದ ದತ್ತನ ಕೆರೆಯಿಂದ ದೇವಸ್ಥಾನದ ಎರಡೂ ಬದಿಯಲ್ಲಿದ್ದ ಹೊಂಡಗಳಿಗೆ ನೀರು ಸರಬರಾಜು ಆಗುತ್ತಿತ್ತು. ನಗರದ ಜನತೆಗೆ ನೀರಿನ ಮೂಲವಾಗಿದ್ದ ದೇವಸ್ಥಾನಕ್ಕೆ “ನಳೆ ದೇವಸ್ಥಾನ’ ಎಂಬ ಹೆಸರಿನಿಂದ ಕರೆಯುತ್ತಿದ್ದರೆಂಬುದು ಇತಿಹಾಸ.
ನಾನು ಈಚೆಗೆ ಅಧಿಕಾರ ವಹಿಸಿಕೊಂಡಿದ್ದು, ನಗರದ ರಾಮಮಂದಿರ ಬಗ್ಗೆ ಮಾಹಿತಿ ಇಲ್ಲ. ಅಧಿಕಾರಿಗಳೊಂದಿಗೆ ಚರ್ಚಿಸಿ ಮುಜರಾಯಿ ಇಲ್ಲವೇ ಕಂದಾಯ ಇಲಾಖೆಯಡಿ ಬರುತ್ತಿದ್ದರೆ ಕೂಡಲೇ ಜೀರ್ಣೋದ್ಧಾರ ಮಾಡಿಸಿ, ನಿತ್ಯ ಪೂಜೆ-ಪುನಸ್ಕಾರ ನಡೆಯುವಂತೆ ಕ್ರಮ ಕೈಗೊಳ್ಳಲಾಗುವುದು. – ಎಸ್.ಬಿ. ಬಾಡಗಿ, ತಹಶೀಲ್ದಾರ್, ಮುಧೋಳ
-ಗೋವಿಂದಪ್ಪ ತಳವಾರ