ಮಳೆಗಾಲ ಬಂದ್ರೆ ಈ ಮಾರ್ಗಗಳು ‘ಡೆಡ್ಲಿ’
ಪ್ರಕೃತಿ ಸೊಬಗು ನೋಡಲೆಂದೇ ಈ ಮಾರ್ಗದಲ್ಲಿ ಸಂಚರಿಸುತ್ತಾರೆ
Team Udayavani, Aug 19, 2019, 11:28 AM IST
ಗುಳೇದಗುಡ್ಡ: ಗುಳೇದಗುಡ್ಡ-ನಂದಿಕೇಶ್ವರ ಹಾಗೂ ಗುಳೇದಗುಡ್ಡ-ಹುಲ್ಲಿಕೇರಿ ಮಾರ್ಗದ ರಸ್ತೆಗಳು ನಿಸರ್ಗ ಸೌಂದರ್ಯದಿಂದ ಕೂಡಿದ್ದು, ಈ ಮಾರ್ಗದಲ್ಲಿ ಸಂಚರಿಸುವುದೇ ಆನಂದ. ಆದರೆ, ಮಳೆಗಾಲ ಬಂದರೆ ಮಾತ್ರ ಬಲು ಅಪಾಯಕಾರಿ ರಸ್ತೆಯಿದು.
ಗುಳೇದಗುಡ್ಡದಿಂದ ಈ ಎರಡೂ ಪ್ರದೇಶಗಳಿಗೆ ತೆರಳಲು ಗುಡ್ಡ ಕಡಿದು ರಸ್ತೆ ಮಾಡಲಾಗಿದ್ದು, ನಿಸರ್ಗ ಸೌಂದರ್ಯ ಪ್ರೀತಿಸುವವರು, ಪರಿಸರ ಪ್ರೀತಿಸುವವರು ಈ ಮಾರ್ಗದ ಮೂಲಕವೇ ಹಾಯ್ದು ಹೋಗುತ್ತಾರೆ.
ನಿಸರ್ಗ ಸೌಂದರ್ಯ: ಈ ಎರಡೂ ರಸ್ತೆಗಳ ಸುತ್ತಲೂ ಗುಡ್ಡವೇ ಆವರಿಸಿದ್ದು, ನೋಡಲು ಸುಂದರವಾಗಿದೆ. ಈ ರಸ್ತೆಯಲ್ಲಿನ ಪ್ರಕೃತಿ ಸೊಬಗು ಚಾರ್ಮುಡಿ ಘಾಟ್ನ ಅನುಭವವನ್ನು ತಂದು ಕೊಡುತ್ತದೆ. ನಿಸರ್ಗ ರಮ್ಯತೆಯನ್ನು ಹೊಂದಿದೆ. ಎಷ್ಟೋ ಜನ ಯುವಕರು ಈ ಪರಿಸರವನ್ನು ತಮ್ಮ ಮೊಬೈಲ್ಗಳಲ್ಲಿ ಸೆರೆ ಹಿಡಿಯಲೆಂದೇ ಇಲ್ಲಿಗೆ ಆಗಮಿಸುತ್ತಾರೆ. ಸಂಜೆ ಹೊತ್ತು ಈ ಕುರುಚಲು ಗುಡ್ಡಗಳಲ್ಲಿ ಕುಳಿತುಕೊಂಡು ಆನಂದಿಸುತ್ತಾರೆ. ಪ್ರಕೃತಿಯ ಸೊಬಗನ್ನು ಸವಿಯುತ್ತಾರೆ.
ನವಿಲುಗಳ ನೋಡುವುದೇ ಆನಂದ: ಈ ಮಾರ್ಗದಲ್ಲಿ ಸಂಚರಿಸುವವರಿಗೆ ಹಿಂಡು ಹಿಂಡಾದ ನವಿಲುಗಳು ಕಂಡು ಬರುತ್ತವೆ. ನವಿಲುಗಳು ಗರಿ ಬಿಚ್ಚಿ ಕುಣಿಯುವುದು ನೋಡುವುದೇ ಬಲು ಚೆಂದ. ಇಲ್ಲಿಯ ಪ್ರಶಾಂತ ವಾತಾವರಣ, ಕುರುಚಲು ಗುಡ್ಡ, ಸುತ್ತಲೂ ಹಸಿರಾಗಿ ಕಾಣುವ ಹೊಲಗಳು ಈ ಮಾರ್ಗದಲ್ಲಿ ಇರುವುದರಿಂದ ಇವು ಇಲ್ಲಿಯೇ ಹೆಚ್ಚು ವಾಸವಾಗಿವೆ. ಈ ರಸ್ತೆ ಮೂಲಕ ಸಂಚರಿಸುವವರು ನವಿಲುಗಳು ಕಂಡರೆ ತಮ್ಮ ಮೊಬೈಲ್ಗಳಲ್ಲಿ ಸೆರೆ ಹಿಡಿಯುತ್ತಾರೆ. ಅವು ಕೂಗುವ ಧ್ವನಿಗೆ ಕಿವಿಯಾಗುತ್ತಾರೆ. ಆದರೆ ಯಾರೂ ಕೂಡಾ ಅವುಗಳಿಗೆ ತೊಂದರೆ ಕೊಡಲ್ಲ. ಹೀಗಾಗಿ ಅವು ಸ್ವಚ್ಛಂದವಾಗಿ ಇಲ್ಲಿ ಸಂಚರಿಸುತ್ತವೆ, ವಿಹರಿಸುತ್ತವೆ.
ಎಲ್ಲಿಗೆ ಸಂಪರ್ಕ: ನಂದಿಕೇಶ್ವರ ಮಾರ್ಗದ ರಸ್ತೆ ಮಹಾಕೂಟ, ಶಿವಯೋಗ ಮಂದಿರ, ಬನಶಂಕರಿಗೆ ಸಂಪರ್ಕ ಕಲ್ಪಿಸಿದರೆ, ಹುಲ್ಲಿಕೇರಿ ರಸ್ತೆ ಹುಲ್ಲಿಕೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸಿ, ಮುಂದೆ ಹಾನಾಪುರ ಗ್ರಾಮಕ್ಕೆ ಸಂಪರ್ಕ ಕೊಡುತ್ತದೆ. ಶಿವಯೋಗಮಂದಿರ ಹಾಗೂ ಬನಶಂಕರಿಗೆ ಹೋಗುವವರು ಎಷ್ಟೋ ಜನರು ಬಾದಾಮಿ ಮೂಲಕ ಹೋಗದೇ ನಂದಿಕೇಶ್ವರ ಮಾರ್ಗದ ಮೂಲಕವೇ ಹೋಗುತ್ತಾರೆ.·ಮಹಾಗುಂಡಪ್ಪ ನಂದ್ಯಾಳ, ಹನಮಪ್ಪ ಕೋಚಲ, ನಂದಿಕೇಶ್ವರ ಗ್ರಾಮಸ್ಥರು
•ಮಲ್ಲಿಕಾರ್ಜುನ ಕಲಕೇರಿ