ಗ್ರಂಥಾಲಯ ಕಾಮಗಾರಿ ವೀಕ್ಷಣೆ
Team Udayavani, Jan 4, 2022, 12:37 PM IST
ಜಮಖಂಡಿ: ಸಾರ್ವಜನಿಕ ಗ್ರಂಥಾಲಯ ಕಟ್ಟಡ ಶಿಥಿಲಾವ್ಯಸ್ಥೆ ತಲುಪಿದ್ದು, ತೆರವು ಕಾರ್ಯಾಚರಣೆ ನಡೆದಿದೆ ಎಂದು ಶಾಸಕ ಆನಂದ ಸಿದ್ದು ನ್ಯಾಮಗೌಡ ಹೇಳಿದರು.
ನಗರದಲ್ಲಿ ಸೋಮವಾರ ಗ್ರಂಥಾಲಯ ಕಾಮಗಾರಿ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಗ್ರಂಥಾಲಯಗಳ ಇಲಾಖೆ ಅಧೀನದಲ್ಲಿರುವ ನಗರದ ಗ್ರಂಥಾಲಯ 1.30 ಕೋಟಿ ವೆಚ್ಚದಲ್ಲಿ ಹೊಸ ತಂತ್ರಜ್ಞಾನ ಬಳಕೆಯೊಂದಿಗೆ ನಿರ್ಮಾಣದ ಕೆಲಸ ಭರದಿಂದ ನಡೆದಿದೆ ಎಂದರು.
ಐತಿಹಾಸಿಕ ಹಿನ್ನೆಲೆ ಹೊಂದಿರುವ ಈ ಕಟ್ಟಡದ ಮೂಲ ಸ್ವರೂಪ ಧಕ್ಕೆ ತರದೇ, ತೆರವುಗೊಳಿಸದೇ ಹೊಸ ತಂತ್ರಜ್ಞಾನ ಬಳಕೆಯೊಂದಿಗೆ ಹೊಸ ರೂಪ ನೀಡುವ ಮೂಲಕ ಸಾರ್ವಜನಿಕರಿಗೆ, ಓದುಗರಿಗೆ ಅರ್ಪಿಸಲಾಗುತ್ತಿದೆ. ಇ-ಗ್ರಂಥಾಲಯ ಸಹಿತ 500 ವಿದ್ಯಾರ್ಥಿಗಳು ಕುಳಿತುಕೊಳ್ಳುವ ನಿಟ್ಟಿನಲ್ಲಿ ಗುಣಮಟ್ಟದ ಸಭಾಭವನ ನಿರ್ಮಿಸುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡುವ ಯೋಜನೆಯಿದೆ. ಇ-ಗ್ರಂಥಾಲಯವನ್ನು ವಿದ್ಯಾರ್ಥಿಗಳ ಮಾಹಿತಿ ಕೇಂದ್ರವಾಗಿಸುವ ನಿಟ್ಟಿನಲ್ಲಿ ಸೌಲಭ್ಯ ಅಳವಡಿಸಲಾಗುತ್ತಿದೆ ಎಂದರು.
ಹಿಂದಿನ ಶಾಸಕ ದಿ. ಸಿದ್ದು ನ್ಯಾಮಗೌಡ ತಮ್ಮ ಅವಧಿಯಲ್ಲಿ ಅನುದಾನ ಮೀಸಲಿಟ್ಟಿದ್ದಾರೆ. ಅದರಂತೆ ವಿಧಾನ ಪರಿಷತ್ ಸದಸ್ಯರಾದ ಎಸ್.ಆರ್.ಪಾಟೀಲ, ಸುನೀಲಗೌಡ ಪಾಟೀಲ ಅನುದಾನ ನೀಡಿದ್ದಾರೆ. ಕೇಂದ್ರ-ರಾಜ್ಯ ಸರಕಾರ ಅನುದಾನ ಮತ್ತು ಶಾಸಕರ, ಸಚಿವರ, ವಿಧಾನ ಪರಿಷತ್ ಸದಸ್ಯ ಮತ್ತು ರಾಜ್ಯಸಭಾ ಸದಸ್ಯರ ಅನುದಾನದಲ್ಲಿ ಇ-ಗ್ರಂಥಾಲಯ ಪೂರ್ಣಗೊಳ್ಳಲಿದೆ ಎಂದರು. ಬಸವರಾಜ ಹರಕಂಗಿ, ಕುಮಾರ ಆಲಗೂರ, ಅಬುಬಕರ ಕುಡಚಿ ಇದ್ದರು.