ನಾವು ಎಂಎಲ್ಎ ಮನೆಗೆ ಬೆಂಕಿ ಹಚ್ಚಿಲ್ಲ!
ಸಿದ್ದರಾಮಯ್ಯಗೆ ಮುತಾಲಿಕ್ ಟೀಕೆ
Team Udayavani, Apr 25, 2022, 4:06 PM IST
ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಗೊಂದಲ ಹಾಗೂ ಹತಾಶೆಯಿಂದ ಮಾತನಾಡುತ್ತಿದ್ದಾರೆ. ಶ್ರೀರಾಮಸೇನೆ ಈ ರಾಜ್ಯದಲ್ಲಿ ಶಾಸಕರ ಮನೆಗೆ ಬೆಂಕಿ ಹಚ್ಚಿಲ್ಲ. ದೇಶದ್ರೋಶದಂತಹ ಕೆಲಸ ಎಂದೂ ಮಾಡಿಲ್ಲ. ಇದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬುಲ್ಡೋಜರ್ನಿಂದ ಶ್ರೀರಾಮ ಸೇನೆ ಕಿತ್ತೂಗೆಯಬೇಕು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸರಿಯಲ್ಲ. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದೆ. ಗಲಾಟೆ ವೇಳೆ ಅಲ್ಲಿನ 300ಕ್ಕೂ ವರ್ಷಗಳ ಐತಿಹಾಸಿಕ ದೇವಾಲಯ ಒಡೆಯಲಾಗಿದೆ. ಅಲ್ಲಿನ ಮುಖ್ಯಮಂತ್ರಿಗಳು ತಪ್ಪಾಗಿದೆ. ಪುನಃ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದ್ದಾರೆ. ಸಾಕಷ್ಟು ಹಿಂದೂ ಬಡವರ ಮನೆಗಳನ್ನು ಒಡೆಯಲಾಗಿದೆ. ಈ ಬಗ್ಗೆ ಸಿದ್ದರಾಮಯ್ಯ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು. ನಾವೇನು ದೇಶದ್ರೋಹದ ಕೆಲಸ ಮಾಡಿಲ್ಲ. ನಾವು ಪೊಲೀಸ್ ಠಾಣೆ, ಎಂಎಲ್ಎ ಮನೆಗೆ ಬೆಂಕಿ ಹಚ್ಚಿಲ್ಲ. ಇದನ್ನು ಸಿದ್ದರಾಮಯ್ಯ ಎಂಐಎಂಎ, ಮುಸ್ಲಿಮರಿಗೆ ಹೇಳಬೇಕಿದೆ. ಮೇಲಿಂದ ಮೇಲೆ ಹಿಂದು ಸಂಘಟನೆಗಳ ಮೇಲಿನ ಪ್ರಹಾರ ಸರಿಯಲ್ಲ. ನಾವು ಕಾನೂನು ವಿರುದ್ಧದ ಕಾರ್ಯ ಮಾಡಿಲ್ಲ, ಮಾಡೋದೂ ಇಲ್ಲ. ಕಾಂಗ್ರೆಸ್ ದೇಶಕ್ಕೆ ಅಹಿತಕರ ಕೆಲಸ ಮಾಡುತ್ತಿದೆ. ಕಾಂಗ್ರೆಸ್ನ ತುಷ್ಟೀಕರಣ ಮಾಡಿದ ಪರಿಣಾಮದಿಂದಲೇ ಡಿಕೆ ಹಳ್ಳಿ, ಕೆಜಿ ಹಳ್ಳಿ, ಹುಬ್ಬಳ್ಳಿ ಅಥವಾ ಪಾದರಾಯಪುರ ಘಟನೆಗಳು, ಹರ್ಷನ ಕೊಲೆ ಮುಂತಾದ ಘಟನೆಗಳಿಗೆ ಕಾರಣ ಎಂದರು.
ಹಿಂದೂಗಳ ಪರ ನಿಲ್ಲಲು ಗಟ್ಸ್ ಇಲ್ಲ: ಹುಬ್ಬಳ್ಳಿ ಘಟನೆ ಬಗ್ಗೆ ಸಿಎಂ ಬೊಮ್ಮಾಯಿ ಏನೂ ಹೇಳುತ್ತಿಲ್ಲ. ಬಿಜೆಪಿಯವರು ಬರೀ ಮಾತಲ್ಲಿ ಮಾತ್ರ ಹೇಳುತ್ತಾರೆ. ಅವರಿಗೆ ಸೂಕ್ತ ಕ್ರಮ ಕೈಗೊಳ್ಳಲು ತಾಕತ್ತಿಲ್ಲ. ಸರ್ಕಾರ ಇದುವರೆಗೂ ಗಟ್ಟಿಯಾದ ಕ್ರಮ ಕೈಗೊಳ್ಳುತ್ತಿಲ್ಲ. ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣದಲ್ಲಿಯೂ 300 ಜನರನ್ನು ಬಂಧಿಸಿದರು. ಅವರು ಬೇಲ್ ಮೇಲೆ ಹೊರ ಬಂದರು. ಇದೇ ಕ್ರಮವನ್ನು ಹುಬ್ಬಳ್ಳಿಯಲ್ಲಿ ತಗೋತಾರೆ. ಇದನ್ನು ಬಿಟ್ಟು ಏನೂ ಮಾಡುವುದಿಲ್ಲ. ಉಗ್ರ ಕ್ರಮ, ಕಾನೂನು ಕ್ರಮ ಅಂತ ಮಾತ್ರ ಹೇಳುತ್ತಾರೆ.
ಬಿಜೆಪಿಯವರು ಏನೂ ಮಾಡುವುದಿಲ್ಲ, ಕೋಕಾ ಕಾಯ್ದೆ ಹಾಕಿ ಅಂದ್ರು ಕೇಳುತ್ತಿಲ್ಲ. ಅದು ಸಾಮೂಹಿಕ, ಸಂಘಟಿತ ಗಲಭೆ ಇದೆ. ಹೀಗಾಗಿ ಕೋಕಾ ಕಾಯ್ದೆಯಡಿ ಕೇಸ್ ದಾಖಲಿಸಿ, ತಪ್ಪಿತಸ್ಥರು ಜೈಲಿನಲ್ಲೇ ಕೊಳೆಯುವಂತೆ ಮಾಡಬೇಕು. ಈ ರೀತಿ ಮಾಡುವುದರಿಂದ ಮುಂದೆ ಯಾರೇ ಇಂತಹ ಘಟನೆಯಲ್ಲಿ ತೊಡಗಿದರೂ ಅವರಿಗೊಂದು ಪಾಠವಾಗುತ್ತದೆ. ಇದು ಬಿಜೆಪಿಗೆ ಏಕೆ ಗೊತ್ತಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಕೋಕಾ ಕಾಯ್ದೆ ಇಲ್ಲ, ಗಡಿಪಾರು ಇಲ್ಲ, ಬುಲ್ಡೋಜರ್ ಸಹ ಇಲ್ಲ. ರಾಜ್ಯಕ್ಕೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಮಾದರಿಯ ಅಧಿಕಾರ ಬೇಕು ಅಂತ ಜನ ಸಾಮಾನ್ಯರಲ್ಲಿ ಕೇಳಿಬರುತ್ತಿದೆ. ಹಾಗಾದರೆ ಉತ್ತರ ಪ್ರದೇಶ ಬೇರೆ, ಕರ್ನಾಟಕ ಬೇರೆಯೇ. ದಂಗೆಗಳು ಒಂದೇ, ಕಲ್ಲು ಒಂದೇ. ಕಾನೂನು ಸಹ ಎಲ್ಲರಿಗೂ ಒಂದೇಯಾಗಿರೋ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಬೇಕು. ಹಿಂದೂಗಳ ಪರವಾಗಿ ನಿಲ್ಲಲು ಬಿಜೆಪಿಗೆ ತಾಕತ್ತಿಲ್ಲ ಎಂದರು.
ಚಿನ್ನ ಖರೀದಿ ಅಭಿಯಾನ: ಹಲಾಲ್, ಜಟ್ಕಾ ಬಳಿಕ ಈಗ ಹಿಂದೂ ಸಂಘಟನೆಗಳಿಂದ ಅಕ್ಷಯ ತೃತೀಯ ಅಭಿಯಾನ ನಡೆಸಲಾಗುತ್ತಿದೆ. ಅಕ್ಷಯ ತೃತೀಯಕ್ಕೆ ಹಿಂದೂಗಳ ಬಂಗಾರದ ಅಂಗಡಿಯಲ್ಲೇ ಖರೀದಿಸಿ ಎಂಬ ಟ್ವಿಟರ್ ಅಭಿಯಾನಕ್ಕೆ ಶ್ರೀರಾಮ ಸೇನೆ ಸಂಪೂರ್ಣ ಬೆಂಬಲವಿದೆ. ರಾಜ್ಯದಲ್ಲಿ ಇರುವ ಕೇರಳ ಮೂಲದ ಮುಸ್ಲಿಂರ ಜುವೆಲರಿ ಶಾಪ್ನಲ್ಲಿ ಚಿನ್ನ ಖರೀದಿಸಬೇಡಿ. ಹಲಾಲ್ ಅಭಿಯಾನದ ಮೂಲಕ ಜಾಗೃತಿ ಮೂಡಿಸುವ ಕೆಲಸ ಯಶಸ್ವಿಯಾಗಿದೆ. ಈಗ ಅಕ್ಷಯ ತೃತೀಯ ಸಂದರ್ಭದಲ್ಲಿ ಈ ಅಭಿಯಾನ ನಡೆಯುತ್ತಿದೆ. ರಾಜ್ಯದಲ್ಲಿ ಕೇರಳ ಮೂಲದ ಮುಸ್ಲಿಂರ ಬಂಗಾರದ ಅಂಗಡಿಗಳು ಹೆಚ್ಚಿವೆ. ಹಿಂದೂಗಳು ಅಲ್ಲಿ ಬಂಗಾರ ಖರೀದಿ ಮಾಡಬೇಡಿ ಎಂದರು.
ಕೇರಳದಲ್ಲಿ 800 ಹಿಂದೂಗಳ ಕೊಲೆಯಾಗಿದೆ. ನೀವು ಅಲ್ಲಿ ಖರೀದಿ ಮಾಡಿದ್ರೆ ಅದರ ಲಾಭ ಕೇರಳದ ಮುಸ್ಲಿಂ ಸಂಘಟನೆಗಳಿಗೆ ಹೋಗುತ್ತದೆ. ಹಿಂದೂಗಳ ಕೊಲೆ ಆಗುತ್ತಿದೆ. ದೌರ್ಜನ್ಯ ಆಗುತ್ತಿದೆ. ಲವ್ ಜಿಹಾದ್ ಆಗುತ್ತಿದೆ. 12 ಸಾವಿರ ಹುಡುಗಿಯರನ್ನು ಮತಾಂತರ ಮಾಡಿದ್ದಾರೆ. ನೀವು ಅವರ ಅಂಗಡಿಯಲ್ಲಿ ಬಂಗಾರ ಖರೀದಿ ಮಾಡಿದರೆ ಅದೆಲ್ಲ ದುಡ್ಡು ನಮ್ಮ ತಲೆ ಮೇಲೆ ಚಪ್ಪಡಿ ಎಳೆದುಕೊಂಡಂತಾಗುತ್ತದೆ. ಹೀಗಾಗಿ ಅಕ್ಷಯ ತೃತೀಯಕ್ಕೆ ಹಿಂದೂಗಳ ಅಂಗಡಿಗಳಲ್ಲೇ ಖರೀದಿ ಮಾಡಬೇಕು ಎಂದು ಮನವಿ ಮಾಡಿದರು.
ಮುಸ್ಲಿಂ ಸಮುದಾಯ ಬದಲಾಗಬೇಕು: ರಾಜ್ಯದಲ್ಲಿ ಧರ್ಮ ದಂಗಲ್ ಕೊನೆಗೊಳ್ಳಲು ಮುಸ್ಲಿಂರು ಸಂವಿಧಾನಬದ್ದವಾಗಿ ಈ ದೇಶದಲ್ಲಿ ಇದ್ದಾಗ ಮಾತ್ರ ಅಂತ್ಯ ಆಗುತ್ತದೆ. ಗೋಹತ್ಯೆ ನಿಷೇಧ ಕಾಯ್ದೆ ಇದ್ದರೂ ಗೋವು ಕಳ್ಳತನ, ಗೋ ಮಾಂಸ ಮಾರಾಟ ನಡೆಯುತ್ತಿದೆ. ಎಲ್ಲಿಯವರೆಗೂ ಇದು ನಿಲ್ಲಲ್ಲ. ಅಲ್ಲಿವರೆಗೂ ಇದು ಇರುತ್ತದೆ. ಅವರು ಮಾನಸಿಕತೆ ಬದಲಾಗೋವರೆಗೂ ನಮ್ಮ ಅಭಿಯಾನಗಳು, ಹೋರಾಟಗಳು ನಡೆಯುತ್ತವೆ. ನಾವೇನು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಲ್ಲ. ರಾಜಕೀಯೇತರ ಹಿಂದೂ ಸಂಘಟನೆ. 365 ದಿನಗಳು ಹಿಂದೂ ಸಂಘಟನೆಗಾಗಿ ಜಾಗೃತಿ, ಹೋರಾಟ ಮಾಡುತ್ತ ಬಂದಿದ್ದೇವೆ. ಬಿಜೆಪಿಯವರು ಅದನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿರಬಹುದು. ಇದು ನಮಗೆ ಸಂಬಂಧವಿಲ್ಲ ಎಂದರು.
ಸ್ವತಂತ್ರ ನಂತರದ ಕಾಂಗ್ರೆಸ್ ದೇಶದ್ರೋಹಿ ಸಂಘಟನೆಯಾಗಿದೆ. ಇವರ ಮೈಮೇಲೆ ರಕ್ತದ ಕಲೆಗಳಿವೆ. ದೆಹಲಿ, ಕಾಶ್ಮೀರ ಹಾಗೂ ಉತ್ತರಪ್ರದೇಶದದ್ದು ಇರಬಹುದು. ಇಡೀ ದೇಶದ ಹಿಂದೂಗಳನ್ನ ಕೊಂದಂತಹ ರಕ್ತದ ಕಲೆ ಕಾಂಗ್ರೆಸ್ನ ಮೈಮೇಲಿದೆ. ಅದು ಹೋಗುವುದಿಲ್ಲ. ಇಂದಿಗೂ ಮತ ಓಲೈಕೆಗಾಗಿ ಈ ದೇಶವನ್ನು ಬಲಿ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
1947ರ ಮುಂಚೆ ಇರುವ ಕಾಂಗ್ರೆಸ್ ನಿಜವಾದ ಕಾಂಗ್ರೆಸ್. ಆ ಮೇಲಿನ ಕಾಂಗ್ರೆಸ್, ಅಧಿಕಾರ ದಾಹ, ಭ್ರಷ್ಟಾಚಾರ, ಭಯೋತ್ಪಾದನೆ, ನಮ್ಮ ದೇಶದ ಒಟ್ಟಾರೆ ವ್ಯವಸ್ಥೆಯನ್ನೇ ಕುಲಗೆಡಿಸಿದೆ ಎಂದು ದೂರಿದರು. ಮುಖಂಡರಾದ ಬಸವರಾಜ ಶಿದ್ಲಿಂಗಪ್ಪನವರ, ಬಸವರಾಜ ಯಂಕಂಚಿ ಮುಂತಾದವರು ಉಪಸ್ಥಿತರಿದ್ದರು.
ಮುಂಬರುವ 2023ರ ವಿಧಾನಸಭೆ ಚುನಾವಣೆಗೆ ನಾವು ಸ್ಪರ್ಧೆ ಮಾಡಲ್ಲ. ರಾಜಕೀಯದಿಂದ ದೂರ ಇದ್ದೇವೆ. ರಾಜಕೀಯ ವಿಷಯದಲ್ಲಿ ನಾವು ಬಾಗಿಲು ಹಾಕಿದ್ದೇವೆ. ಬಿಜೆಪಿಯವರು ನಮ್ಮಂತವರಿಗೆ ಟಿಕೆಟ್ ಕೊಡುವುದಿಲ್ಲ. ನಮ್ಮಂತಹ ಪ್ರಾಮಾಣಿಕರು, ಹೋರಾಟಗಾರರಿಗೆ ಅವರು ಅವಕಾಶ ಕೊಡುವುದಿಲ್ಲ. –ಪ್ರಮೋದ ಮುತಾಲಿಕ, ಸಂಸ್ಥಾಪಕ ಅಧ್ಯಕ್ಷ, ಶ್ರೀರಾಮ ಸೇನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್ ಈಗ “ಸಂಯುಕ್ತ’
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
ತಾಕತ್ತಿದ್ದರೆ ಯತ್ನಾಳ್ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್