ಶಾಲೆ ಎದುರು ವಾಮಾಚಾರ
Team Udayavani, Apr 6, 2022, 4:33 PM IST
ಇಳಕಲ್ಲ: ಸರಕಾರಿ ಪ್ರಾಥಮಿಕ ಶಾಲೆ ಬಳಿ ವಾಮಾಚಾರ ಮಾಡಿದ ಹಿನ್ನೆಲೆಯಲ್ಲಿ ಪಾಲಕರು ಹಾಗೂ ಮಕ್ಕಳು ಆತಂಕಗೊಂಡ ಘಟನೆ ಇಳಕಲ್ಲ ತಾಲೂಕಿನ ಗೊನಾಳ ಎಸ್.ಬಿ. ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯ ದ್ವಾರದ ಬಳಿ ಎರಡು ಗೊಂಬೆಗಳನ್ನು ಇರಿಸಿ ಅವುಗಳಿಗೆ ಕುಂಕುಮ ಎರಚಿ ಸುತ್ತಲೂ ಲಿಂಬೆ ಹಣ್ಣುಗಳನ್ನು ಇಟ್ಟು ಭಯ ಹುಟ್ಟುವಂತೆ ವಾಮಾಚಾರ ಮಾಡಲಾಗಿದೆ. ಇದರಿಂದ ಮಕ್ಕಳು ಹಾಗೂ ಗ್ರಾಮಸ್ಥರು ಆತಂಕಗೊಂಡಿದ್ದು, ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುವಂತಾಗಿದೆ.
ಘಟನೆ ಮಾಹಿತಿ ಪಡೆದ ಎಸ್ಡಿಎಂಸಿ ಸದಸ್ಯರು ವಾಮಾಚಾರಕ್ಕೆ ಬಳಸಿದ್ದ ವಸ್ತುಗಳನ್ನು ಅಲ್ಲೇ ಸುಟ್ಟು ಹಾಕಿದ್ದು, ಈ ಹಿಂದೆಯೂ ಈ ಶಾಲೆ ಬಳಿ ವಾಮಾಚಾರ ಮಾಡಿದ್ದನ್ನು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರ ಗಮನಕ್ಕೂ ತಂದಿದ್ದಾರೆ.