ತಿಮ್ಮಾಪುರ ರನ್ನ ಶುಗರ್ ಎದುರು ಕಾರ್ಮಿಕರ ಪ್ರತಿಭಟನೆ
Team Udayavani, Oct 14, 2019, 11:15 AM IST
ಲೋಕಾಪುರ: ತಿಮ್ಮಾಪುರ ರೈತರ ಸಹಕಾರಿ ಸಕ್ಕರೆ ಕಾರಖಾನೆ ಕಾರ್ಮಿಕರಿಗೆ ಕಾನೂನು ಬಾಹಿರವಾಗಿ ಮುಚ್ಚಳಿಕೆ ಪತ್ರಕ್ಕೆ ಸಹಿ ಹಾಕಬೇಕೆಂದು ಒತ್ತಾಯಿಸಿದ್ದನ್ನು ಖಂಡಿಸಿ 500ಕ್ಕೂ ಹೆಚ್ಚು ಕಾರ್ಮಿಕರು ಕಾರಖಾನೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಕಾರ್ಮಿಕರು ಜವಾಬ್ದಾರಿಯಿಂದ ಪ್ರಾಮಾಣಿಕತೆಯಿಂದ ಕರ್ತವ್ಯ ನಿಭಾಯಿಸಬೇಕು. ಕಾರ್ಖಾನೆ ಆಸ್ತಿ, ಪಾಸ್ತಿ ಹಾನಿಯಾಗದಂತೆ ನಿಗಾ ವಹಿಸಬೇಕು. ಉಪಕಾರ್ಮಿಕ ಆಯುಕ್ತರ ಸಭೆಯಲ್ಲಿ ಕೈಗೊಂಡ ಕಾರ್ಮಿಕರ ಬೇಡಿಕೆ ಇತ್ಯರ್ಥವಾಗುವವರೆಗೆ ಧರಣಿ ಮಾಡಬಾರದು ಎಂದು ಮುಚ್ಚಳಿಕೆ ಬರೆದುಕೊಡುವಂತೆ ಕಾರ್ಖಾನೆ ಆಡಳಿತ ಮಂಡಳಿ ಒತ್ತಾಯಿಸುತ್ತಿದೆ ಎಂದು ಕಾರ್ಮಿಕರು ಆರೋಪಿಸಿದರು.
ಕಾರ್ಮಿಕ ಸಂಘಟನೆಯ ಮುಖಂಡ ಪ್ರಕಾಶ ಕಬ್ಬೂರ ಮಾತನಾಡಿ, ಮುಚ್ಚಳಿಕೆ ಪತ್ರಕ್ಕೆ ಸಹಿ ಮಾಡಿದರೆ ಕೆಲಸಕ್ಕೆ ಬನ್ನಿ, ಇಲ್ಲದಿದ್ದರೆ ಮನೆಗೆ ನಡೆಯಿರಿ ಎಂದು ಕಾರಖಾನೆಯವರು ತಿಳಿಸುತ್ತಿದ್ದಾರೆ. ಇದರಿಂದ ನಮ್ಮ ಜೀವನ ಅತಂತ್ರವಾಗಿದೆ ಎಂದು ಆರೋಪಿಸಿದರು. ರೈತ ಸಹಕಾರಿ ಸಕ್ಕರೆ ಕಾರ್ಖಾನೆ ನಿ. ಎಂಪ್ಲಾಯಿಸ್ ಯುನಿಯನ್ ಪದಾಧಿಕಾರಿಗಳ ಅಧ್ಯಕ್ಷ ಬಿ.ವಿ. ಹಳೇಮನಿ, ಉಪಾಧ್ಯಕ್ಷ ಯು. ಎಂ. ಬಡಿಗೇರ, ಪ್ರಧಾನ ಕಾರ್ಯದರ್ಶಿ ಪಿ.ಬಿ.ಕಬ್ಬೂರ, ಸಹ ಕಾರ್ಯದರ್ಶಿ ಬಿ.ಡಿ. ಗಲಗಲಿ ಪ್ರತಿಭಟನೆಯಲ್ಲಿದ್ದರು.