ಕೃಷಿ ಕ್ಷೇತ್ರದಿಂದ ಯುವಕರು ವಿಮುಖ: ಡಾ|ಆನಂದ
Team Udayavani, Jan 13, 2020, 11:23 AM IST
ಜಮಖಂಡಿ: ಕೃಷಿ ಕ್ಷೇತ್ರದಿಂದ ಯುವ ರೈತರು ವಿಮುಖರಾಗುತ್ತಿದ್ದಾರೆ ಎಂದು ಸಾವಯವ ಕೃಷಿ ಮಿಷನ್ ಅಧ್ಯಕ್ಷ ಡಾ| ಎಸ್ ಆನಂದ ಹೇಳಿದರು.
ಮರೇಗುದ್ದಿ ಗ್ರಾಮದಲ್ಲಿ ಅಡವಿಸಿದ್ದೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಕೃಷಿ ಇಲಾಖೆ ಜಮಖಂಡಿ ಹಾಗೂ ಅಡವಿಸಿದ್ದೇಶ್ವರ ಜಾತ್ರಾ ಕಮೀಟಿ ಹಮ್ಮಿಕೊಂಡಿದ್ದ ಆತ್ಮಯೋಜನೆ ಅಡಿಯಲ್ಲಿ ಕೃಷಿ ವಿಚಾರ ಸಂಕಿರಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ಕೃಷಿ ಭೂಮಿ ಮಾರಾಟ ಮಾಡಿ ನಗರಗಳಿಗೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ವಂಶಸ್ಥರಿಂದ ಬಂದಿರುವ ಕೃಷಿ ಪರಂಪರೆ ಉಳಿಸಿಕೊಂಡು ಹೋಗುವ ಕೆಲಸ ಆಗಬೇಕು. ರೈತರು ರಾಸಾಯನಿಕಗಿಂತ ನೈಸರ್ಗಿಕವಾಗಿ ಸಿಗುವ ಸಂಪನ್ಮೂಲಗಳ ಬಳಕೆ ಮಾಡಬೇಕು ಎಂದರು.
ವಿಜಯಪುರದ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಸಹವಿಸ್ತರಣಾ ನಿರ್ದೇಶಕ ಡಾ| ಆರ್.ಬಿ. ಬೆಳ್ಳಿ ಮಾತನಾಡಿ, ನೀರಿನ ಅನುಕೂಲ ಹೆಚ್ಚಾದಂತೆ ರೈತರು ಅಸಮರ್ಪಕ ನೀರಾವರಿ ಮಾಡಿ, ಹೆಚ್ಚಿನ ರಾಸಾಯನಿಕ ಗೊಬ್ಬರ, ಕೀಟನಾಶಕ ಮತ್ತು ಕಳೆನಾಶಕ ಬಳಸಿ ಭೂಮಿಯ ಫಲವತ್ತತೆ ಕಳೆದುಕೊಳ್ಳುತ್ತಿದ್ದಾರೆ. ಮುಂದಿನ ಪೀಳಿಗೆಗೋಸ್ಕರ ಉತ್ತಮ ಭೂಮಿ ಉಳಿಸಿಕೊಳ್ಳಬೇಕಾಗಿದೆ. ಸರ್ಕಾರ ಬಜೆಟ್ನಲ್ಲಿ ಸಾವಯವ ಕೃಷಿಗೆ ಹೆಚ್ಚು ಅನುದಾನ ಘೋಷಿಸುವ ಯೋಜನೆ ಬರಲಿದೆ ಎಂದರು.
ವಿಜಯಪುರ ಕೃಷಿ ಮಹಾವಿದ್ಯಾಲಯ ಮಣ್ಣು ವಿಜ್ಞಾನಿ ಡಾ| ವಿದ್ಯಾವತಿ ಯಡಹಳ್ಳಿ ಮಾತನಾಡಿ, ನಮ್ಮ ಶರೀರದಲ್ಲಿ ನಡೆಯುವ ಚಟುವಟಿಕೆಗಳಂತೆ ಮಣ್ಣಿನಲ್ಲಿ ಕೂಡ ಸಹ ಚಟುವಟಿಕೆಗಳು ನಡೆಯುತ್ತಿರುತ್ತವೆ. ರೈತರು ಮಣ್ಣು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಮಣ್ಣಿನಲ್ಲಿ ಸಾವಯವ ಅಂಶ ಹೆಚ್ಚಿಸಿ, ರಾಸಾಯನಿಕಗಳ ಬಳಕೆ ಕಡಿತಗೊಳಿಸಿ ಫಲವತ್ತತೆ ಹೆಚ್ಚಿಸಿಕೊಳ್ಳಬೇಕು. ನೀರಿನ ವೈಜ್ಞಾನಿಕ ಬಳಕೆ ಮಾಡಿಕೊಂಡು ಸವಳು-ಜವಳು ಹಾಗೂ ಮಣ್ಣಿನ ಸವಕಳಿ ತಡೆಗಟ್ಟಬೇಕು ಎಂದರು.
ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್. ಬುಜರುಖ, ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಎಸ್.ಟಿ. ಪಾಟೀಲ, ಅಡವಿ ಸಿದ್ದೇಶ್ವರ ಮಠದ ಗುರುಪಾದಸ್ವಾಮಿಗಳು ಮಾತನಾಡಿದರು. ಸಾವಯವ ಕೃಷಿಕ ಆರ್.ಟಿ. ಪಾಟೀಲ, ಕೃಷಿ ಅಧಿ ಕಾರಿ ಎಸ್.ಎಂ. ಬಿರಾದಾರ, ಸಹಾಯಕ ಕೃಷಿ ಅಧಿಕಾರಿಗಳಾದ ಕೆ.ಎಸ್. ಅನಂತಪುರ, ಐ.ಬಿ. ಪುರಾಣಿಕ ಮಠ, ಆತ್ಮಯೋಜನೆ ತಾಲೂಕ ತಾಂತ್ರಿಕ ವ್ಯವಸ್ಥಾಪಕ ಕೆ.ಎ.ಜಮಖಂಡಿ ಇದ್ದರು.
ಜಿಲ್ಲಾ ಮತ್ತು ತಾಲೂಕುಮಟ್ಟದಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ಸಾಧಕರನ್ನು ಹಾಗೂ ದಾನಿಗಳನ್ನು ಸನ್ಮಾನಿಸಲಾಯಿತು.