ಅಭಿಯಾನಕ್ಕಿಂತ ಸುರಕ್ಷಿತ ವ್ಯವಸ್ಥೆ ಮುಖ್ಯ
Team Udayavani, Aug 4, 2019, 3:03 AM IST
ಬೆಂಗಳೂರು: ರಸ್ತೆ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಸರ್ಕಾರಿ-ಖಾಸಗಿ ಸೇರಿದಂತೆ ಎಲ್ಲ ಪಾಲುದಾರರೂ ಒಗ್ಗೂಡಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ)ದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ತಿಳಿಸಿದರು.
ಬಾಷ್ ಸಂಸ್ಥೆ ಈಚೆಗೆ ಹಮ್ಮಿಕೊಂಡಿದ್ದ ಎರಡು ದಿನಗಳ “ರಸ್ತೆ ಸುರಕ್ಷತಾ ಸಮ್ಮೇಳನ’ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಸ್ತೆ ಸುರಕ್ಷತಾ ಅಭಿಯಾನಗಳಿಗಿಂತ ಹೆಚ್ಚಾಗಿ ವ್ಯವಸ್ಥೆಗಳು ಸುರಕ್ಷಿತವಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ದುರ್ಬಲ ಬಳಕೆದಾರರು ಮತ್ತು ಪಾದಚಾರಿಗಳನ್ನು ಗಮನದಲ್ಲಿಟ್ಟುಕೊಂಡು ರಸ್ತೆ ಮೂಲಸೌಕರ್ಯಗಳನ್ನು ವಿನ್ಯಾಸಗೊಳಿಸುವ ಅವಶ್ಯಕತೆ ಇದೆ ಎಂದು ಹೇಳಿದರು.
ರಸ್ತೆ ಸುರಕ್ಷತೆ ಒಂದು ಅಭಿಯಾನವಾಗಿ ಮಾತ್ರವಲ್ಲ; ಅದರೊಂದಿಗೆ ಮೂಲಸೌಕರ್ಯ, ತಂತ್ರಜ್ಞಾನ, ಶಿಕ್ಷಣವನ್ನು ಸಂಯೋಜಿಸಿ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಅಲ್ಲದೆ, ರಾಜ್ಯಾದ್ಯಂತ ಚಾಲಕರುಗಳಿಗೆ ನಿಯಮಿತ ತರಬೇತಿ, ಹೊಸ ತಂತ್ರಜ್ಞಾನಗಳ ಅಳವಡಿಕೆ, ಕ್ರೋಡೀಕರಿಸಿರುವ ದತ್ತಾಂಶಗಳ ನಿರಂತರ ವಿಶ್ಲೇಷಣೆ, ಆರ್ಟಿಫೀಷಿಯಲ್ ಇಂಟಲಿಜೆನ್ಸ್, ಸೆನ್ಸರ್ಗಳನ್ನು ಬಸ್ಗಳಿಗೆ ಅಳವಡಿಸಿಕೊಳ್ಳಬೇಕು. ಈ ಮೂಲಕ ಅಪಘಾತ ಮುನ್ಸೂಚನೆ ನೀಡಿ, ಚಾಲಕರನ್ನು ಜಾಗೃತಗೊಳಿಸುವ ಉಪಕ್ರಮಗಳ ಅವಶ್ಯಕತೆ ಹೆಚ್ಚಿದೆ ಎಂದು ಹೇಳಿದರು. ನಾಗರೋ ಸಾಫ್ಟ್ವೇರ್ ಕಂಪೆನಿಯ ಸರಿಕಾ ಪಾಂಡ ಉಪಸ್ಥಿತರಿದ್ದರು.