ಕೈಗಾರಿಕಾ ವ್ಯವಹಾರದ ಅನುಕೂಲಕ್ಕೆ ಎಬಿಸಿ
ವ್ಯವಹಾರ ಪ್ರಕ್ರಿಯೆ ಸರಳಗೊಳಿಸಿ, ಬಂಡವಾಳ ಹೂಡಿಕೆಗೆ ಪೂರಕ ವಾತಾವರಣ:ಯಡಿಯೂರಪ್ಪ
Team Udayavani, Dec 22, 2020, 12:05 PM IST
ಬೆಂಗಳೂರು: ಕೈಗಾರಿಕೆಗಳ ಸುಲಲಿತ ವ್ಯವಹಾರಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅಫಿಡವಿಟ್ ಬೇಸ್ಡ್ ಕ್ಲಿಯರೆನ್ಸ್ (ಎಬಿಸಿ) ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ವಿಧಾನಸೌಧದಲ್ಲಿ ಚಾಲನೆ ನೀಡಿ ಮಾತನಾಡಿ, ಸ್ವಯಂ ಘೋಷಣೆ ಪತ್ರ ಮುಖೇನಕೈಗಾರಿಕೆಗಳ ಸ್ಥಾಪನೆ ಪ್ರಕ್ರಿಯೆ ಸರಳೀಕೃತಗೊಳಿಸುವ ಯೋಜನೆ ಇದಾಗಿದೆ. ವಿವಿಧ ಇಲಾಖೆಗಳ ಆಯ್ದ15ಉದ್ಯಮ ಸೇವೆಗಳು ಇದರ ವ್ಯಾಪ್ತಿಗೆ ಬರಲಿವೆ. ವ್ಯವಹಾರ ಪ್ರಕ್ರಿಯೆ ಸರಳಗೊಳಿಸಿ, ಬಂಡವಾಳ ಹೂಡಿಕೆಗೆಪೂರಕ ವಾತಾವರಣ ಕಲ್ಪಿಸುವ ಯತ್ನದಲ್ಲಿ ಕರ್ನಾಟಕ ಸದಾ ಒಂದು ಹೆಜ್ಜೆ ಮುಂದಿರುತ್ತದೆ ಎಂದರು.
ಕೈಗಾರಿಕೆಗಳ ಸ್ಥಾಪನೆಗೆ ಎಲ್ಲಾ ರೀತಿಯ ಅನುಕೂಲಮಾಡಿಕೊಟ್ಟಿರುವ ರಾಜ್ಯದ ಬಗ್ಗೆ ಹೂಡಿಕೆದಾರರು ಅಚಲ ವಿಶ್ವಾಸ ಇರಿಸಿದ್ದಾರೆ. ಹೂಡಿಕೆದಾರರ ಹಿತದೃಷ್ಟಿಗಮನದಲ್ಲಿಟ್ಟುಕೊಂಡು ಹಲವು ಸುಧಾರಣೆ ತರಲಾಗಿದೆ. ಭೂ, ಕಾರ್ಮಿಕ ಸೇರಿ ಹಲವು ಅನುಮತಿ, ಪರವಾನಗಿ ಕೇಂದ್ರೀಕೃತ ವ್ಯವಸ್ಥೆ ಇದಾಗಲಿದೆ ಎಂದರು.
ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಕೈಗಾರಿಕೆ ಸ್ಥಾಪನೆಗೆ ಭೂ ಪರಿವರ್ತನೆ,ಬಿಲ್ಡಿಂಗ್ ಪ್ಲ್ಯಾನ್ ಸೇರಿ ಇತರೆ ಎಲ್ಲಾ ಅನುಮತಿ ಪಡೆಯುವವರೆಗೂ ಕೈಗಾರಿಕಾ ಸ್ಥಾಪನೆ ಕಾಮಗಾರಿ ನಡೆಸಲು ಕಾಯಬೇಕಾಗಿಲ್ಲ. ಜಿಲ್ಲಾ ಸಮಿತಿ ಹಾಗೂ ರಾಜ್ಯ ಸಮಿತಿಗಳಿಂದ ಕೈಗಾರಿಕಾ ಸ್ಥಾಪನೆಗೆ ಅನುಮತಿ ಸಿಕ್ಕಕೂಡಲೇ ಕಾಮಗಾರಿ ಆರಂಭ ಮಾಡಬಹುದು. 3 ವರ್ಷಗಳ ಕಾಲಾವಕಾಶದಲ್ಲಿ ಇತರ ಎಲ್ಲಾ ಅನುಮತಿ ಪಡೆದುಕೊಳ್ಳಲು ಈ ತಿದ್ದುಪಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಕೈಗಾರಿಕೋದ್ಯಮಿಗಳುವಿವಿಧ ಇಲಾಖೆಗಳಿಗೆ ಅಲೆದಾಡಬೇಕಾದ ಪ್ರಮೇಯ ಬರುವುದಿಲ್ಲ ಎಂದು ವಿವರಿಸಿದರು.
ಇದನ್ನೂ ಓದಿ :ಪಾಕ್ ಸರ್ಕಾರ, ಸೇನೆಯ ದೌರ್ಜನ್ಯ ಬಯಲುಗೊಳಿಸಿದ್ದ ಕರಿಮಾ ಕೆನಡಾದಲ್ಲಿ ಶವವಾಗಿ ಪತ್ತೆ!
ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ಕೃಷಿ ಸಚಿವ ಬಿ.ಸಿ.ಪಾಟೀಲ್, ಮುಖ್ಯಕಾರ್ಯದರ್ಶಿ ವಿಜಯ್ ಭಾಸ್ಕರ್,ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಆಯುಕ್ತೆ ಗುಂಜನ್ ಕೃಷ್ಣ ಇದ್ದರು.
ಎಬಿಸಿ ಅರ್ಜಿ ಸಲ್ಲಿಸುವ ಬಗೆ ಹೇಗೆ?: ಕರ್ನಾಟಕ ಉದ್ಯೋಗ ಮಿತ್ರದ ಏಕಗವಾಕ್ಷಿ ಪೋರ್ಟಲ್ https://ebiz.karnataka.gov.in/kum/index.aspx ನಲ್ಲಿ ಲಾಗಿನ್ ಆಗಿ, ಅಫಿಡವಿಟ್ ಬೇಸ್ಡ್ ಕ್ಲಿಯರೆನ್ಸ್ ಆಯ್ಕೆ ಒತ್ತಿದರೆ ಲಭ್ಯ ಇರುವ 15 ಸೇವೆಗಳ ಪಟ್ಟಿ ಕಾಣುತ್ತದೆ. ಈ 15 ಸೇವೆಗಳ ಪೈಕಿ ಆಯಾ ಸಂಸ್ಥೆ ಅಗತ್ಯಕ್ಕೆ ಅನುಗುಣವಾಗಿ ಅಫಿಡವಿಟ್ ಬೇಸ್ಡ್ ಕ್ಲಿಯರನ್ಸ್ ಆಯ್ಕೆ ಮಾಡಿದಾಗ, ನಿರ್ದಿಷ್ಟ ಇಲಾಖೆಗಳ ಆನ್ಲೈನ್ ಅರ್ಜಿ ಪಟ್ಟಿ ಕಾಣುತ್ತದೆ. ಅದನ್ನು ಭರ್ತಿ ಮಾಡಿದ ನಂತರ, ಅಗತ್ಯ ದಾಖಲೆ ಲಗತ್ತಿಸಿ, ಪ್ರಮಾಣೀಕರಿಸುವ ಅಫಿಡವಿಟ್ ಡೌನ್ ಲೋಡ್ ಮಾಡಿ, ಅದನ್ನು ಭರ್ತಿ ಮಾಡಿ, ನೋಟರಿ ಸಹಾಯದಿಂದ ಸಹಿ ಮಾಡಿ, ಅಪ್ಲೋಡ್ ಮಾಡಬೇಕು. ಆನ್ಲೈನ್ ಬ್ಯಾಂಕಿಂಗ್ ಚಾನೆಲ್ ಮೂಲಕ ಶುಲ್ಕ ಪಾವತಿಸಿ, ರಸೀದಿ ಪ್ರತಿ ಡೌನ್ ಲೋಡ್ ಮಾಡಿಕೊಳ್ಳಬೇಕು. ಕರ್ನಾಟಕ ಉದ್ಯೋಗ ಮಿತ್ರದಿಂದ ಅಫಿಡವಿಟ್ ಅನುಮೋದನೆ ಆದನಂತರ, ಇಮೇಲ್, ಎಸ್ಎಂಎಸ್ ಸಂದೇಶ ರವಾನೆ ಆಗುತ್ತದೆ. ಅಧಿಸೂಚನೆ ಪೋಸ್ಟ್ ಮಾಡಿ, ಏಕಗವಾಕ್ಷಿ ಪೋರ್ಟಲ್ಗೆ ಲಾಗಿನ್ ಮಾಡಿ ಮತ್ತು ಸ್ವೀಕೃತಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಎಬಿಸಿ ಅನುಕೂಲವಿದು… :
ಕೈಗಾರಿಕೆಯ ವಾಣಿಜ್ಯ ಕಾರ್ಯಾಚರಣೆ ಆರಂಭದವರೆಗೆ ಅಥವಾ3ವರ್ಷಗಳ ಆರಂಭಿಕ ಅವಧಿಗೆ ಎಬಿಸಿಯನ್ನೇ ಇಲಾಖೆಗಳ ಅನುಮೋದನೆ ಎಂದು ಪರಿಗಣಿಸಲಾಗುತ್ತದೆ. ಕರ್ನಾಟಕ ಉದ್ಯೋಗ ಮಿತ್ರ ನೀಡುವ ಸ್ವೀಕೃತಿ ಪ್ರಮಾಣ ಪತ್ರವನ್ನು 3ವರ್ಷಗಳ ಆರಂಭಿಕ ಅವಧಿಗೆ ಇಲಾಖೆಗಳ ಅನುಮತಿ ಎಂದೇ ಪರಿಗಣಿಸಲಾಗುತ್ತದೆ. ಇದು ಪೂರ್ವಾನುಮತಿ ದಾಖಲೆ. ಉತ್ಪಾದನಾ ಕೈಗಾರಿಕೆ ಅಥವಾ ಉದ್ಯಮಗಳು ಈ ಅಫಿಡವಿಟ್ ಕ್ಲಿಯರೆನ್ಸ್ಪಡೆಯಲು ಅರ್ಹರು. ಕಂದಾಯ ಇಲಾಖೆಯಿಂದಭೂ ಖರೀದಿ, ಭೂ ಪರಿವರ್ತನೆಗೆ ಅನುಮತಿ, ಅರಣ್ಯ ಇಲಾಖೆ, ಬಿಬಿಎಂಪಿಯಿಂದ ಮರ ಉರುಳಿಸಿ, ಸಾಗಿಸಲು ಅನುಮತಿ, ಕೆಐಎಡಿಬಿ,ಕೆಎಸ್ಎಸ್ಐಡಿಸಿ, ಬಿಡಿಎ, ಬಿಬಿಎಂಪಿ, ಇತರೆ ಸ್ಥಳಿಯಾಡಳಿತ ಸಂಸ್ಥೆ, ಸ್ಥಳೀಯ ಯೋಜನಾಪ್ರಾಧಿಕಾರ (ಡಿಎಂಎ), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಕಟ್ಟಡನಿರ್ಮಾಣ ಯೋಜನೆ, ಪ್ರಾರಂಭ ಪ್ರಮಾಣ ಪತ್ರ, ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆಯಿಂದ ಕಟ್ಟಡ ನಿರ್ಮಾಣಕ್ಕೆ ನಿರಾಕ್ಷೇಪಣಾ ಪತ್ರ, ಕಟ್ಟಡ ಪೂರ್ಣಗೊಂಡ ನಂತರ ಕ್ಲಿಯರೆನ್ಸ್ ಪ್ರಮಾಣಪತ್ರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಕಾರ್ಖಾನೆ ನಿರ್ಮಾಣ ಮತ್ತು ಯಂತ್ರೋಪಕರಣ ಸ್ಥಾಪನೆಗೆ ಅನುಮತಿ, ರಾಜ್ಯ ವಿದ್ಯುತ್ ನಿರೀಕ್ಷಕರಿಂದ ವಿದ್ಯುತ್ ಸಂಪರ್ಕ ನಕ್ಷೆಅನುಮೋದನೆ, ವಿದ್ಯುತ್ ಸಂಪರ್ಕ ಅಳವಡಿಕೆಅನುಮೋದನೆ, ಕಾರ್ಖಾನೆ, ಬಾಯ್ಲರ್, ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ ಇಲಾಖೆಯಿಂದ ಕಾರ್ಖಾನೆ ಯೋಜನೆ ಅನುಮೋದನೆ, ಕಾರ್ಮಿಕ ಇಲಾಖೆಯಿಂದ ಗುತ್ತಿಗೆ ಕಾರ್ಮಿಕರ ನೇಮಕ, ಗುತ್ತಿಗೆದಾರರಿಗೆ ಹೊಸ ಪರವಾನಿಗೆ, ಕಾನೂನು ಮಾಪನಶಾಸ್ತ್ರ ವಿಭಾಗದಿಂದ ತೂಕ ಮತ್ತು ಅಳತೆಗಳ ರಾಜ್ಯ ನ್ಯಾಯ ವ್ಯಾಪ್ತಿಯ ತಯಾರಕರಿಗೆ ಹೊಸ ಪರವಾನಗಿ ಎಬಿಸಿಯಿಂದ ಪಡೆಯಬಹುದಾಗಿದೆ.