ಅಹಮದ್ ಪಟೇಲ್ ಗೆಲುವಿನ ಕ್ರೆಡಿಟ್ ಬೇಡ
Team Udayavani, Aug 10, 2017, 6:50 AM IST
ಬೆಂಗಳೂರು: “ಗುಜರಾತ್ ರಾಜ್ಯ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಹಮದ್ ಪಟೇಲ್ ಗೆಲುವಿನ ಕ್ರೆಡಿಟ್ ನನಗೆ ಬೇಡ. ನಾನು ನನ್ನ ಜವಾಬ್ದಾರಿ ನಿರ್ವಹಿಸಿರುವುದಾಗಿ’ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, “ಗುಜರಾತ್ ಚುನಾವಣೆ ಹೇಗೆ ನಡೆಯಿತೆಂದು ಇಡೀ ದೇಶವೇ ನೋಡಿದೆ. ಕಾಂಗ್ರೆಸ್ಗೆ ಬಹುಮತ ಇದ್ದರೂ, ಆಪರೇಷನ್ ಕಮಲ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಅಂತಿಮವಾಗಿ ನಮ್ಮ ಅಭ್ಯರ್ಥಿ ಗೆದ್ದಿದ್ದಾರೆ. ಅಹಮದ್ ಪಟೇಲ್ರನ್ನು ಸೋಲಿಸುವ ಬಿಜೆಪಿಯ ಕನಸು ಕೊನೆಗೂ ಈಡೇರಲಿಲ್ಲ’ ಎಂದರು.
ಚುನಾವಣೆಯಲ್ಲಿ ಅನಿವಾರ್ಯವಾಗಿ ಗುಜರಾತ್ ಶಾಸಕರನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದೆವು. ಹೈಕಮಾಂಡ್ ನಮ್ಮ ಮೇಲೆ ವಿಶ್ವಾಸವಿಟ್ಟು ಶಾಸಕರನ್ನು ಇಲ್ಲಿಗೆ ಕಳುಹಿಸಿ ಕೊಟ್ಟಿತ್ತು. ಅವರು ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ ಎಂದರು.
ಬಳ್ಳಾರಿ ಹಾಗೂ ಹೆಬ್ಟಾಳ ಉಪ ಚುನಾವಣೆಯಲ್ಲಿಯೂ ನನಗೆ ವಹಿಸಿದ್ದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೆ. ಈಗಲೂ ನನ್ನ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಂಡಿದ್ದೇನೆ. ಈ ಗೆಲುವಿನಿಂದ ಕೆಲವರು ಖುಷಿ ಪಟ್ಟರೆ, ಕೆಲವರಿಗೆ ದುಃಖವಾಗಿದೆ ಎಂದು ಸೂಕ್ಷ್ಮವಾಗಿ ನುಡಿದರು.
ಗೃಹ ಖಾತೆ ಅಪೇಕ್ಷೆ ಇಲ್ಲ: ಗುಜರಾತ್ ಚುನಾವಣೆಯ ಬೆಳವಣಿಗೆ ಹಿನ್ನೆಲೆಯಲ್ಲಿ ಗೆಲುವಿನ ರೂವಾರಿಯಾಗಿರುವ ತಮಗೆ ಗೃಹ ಖಾತೆ ನೀಡುತ್ತಾರೆನ್ನುವ ಅಪೇಕ್ಷೆ ಇಟ್ಟುಕೊಂಡಿಲ್ಲ. ಅದರ ಅವಶ್ಯಕತೆ ನನಗಿಲ್ಲ. ನನ್ನ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿ, ರೈತರಿಗೆ, ಜನರಿಗೆ ವಿದ್ಯುತ್ ನೀಡಬೇಕು. “ಕತ್ತಲಲ್ಲಿ ಕರ್ನಾಟಕ ‘ ಅನ್ನದಿದ್ದರೆ ಸಾಕು. ರಾಜಕೀಯ ಸ್ಥಾನಮಾನ ಕಾಲವೇ ನಿರ್ಣಯಿಸಲಿದೆ
ಎಂದು ಹೇಳಿದರು.
ಪಟೇಲ್ಗೆ ಮುಖ್ಯಮಂತ್ರಿ ಅಭಿನಂದನೆ
ಬೆಂಗಳೂರು: ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಜಿದ್ದಾಜಿದ್ದಿನ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿದ್ದಾರೆ.
ಈ ಬಗ್ಗೆ ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿ, “ಬಿಜೆಪಿಯವರ ಕುದುರೆ ವ್ಯಾಪಾರ, ಹಣದ ಆಮಿಷ ಯಾವುದೂ ನಡೆಯಲಿಲ್ಲ. ಪ್ರಜಾಪ್ರಭುತ್ವಕ್ಕೆ ಜಯ ಸಿಕ್ಕಿದೆ’ ಎಂದು ಹೇಳಿದರು.
ಅಹ್ಮದ್ ಪಟೇಲ್ರನ್ನು ಸೋಲಿಸಲು ಬಿಜೆಪಿಯವರು ಹರಸಾಹಸ ಮಾಡಿದರು. ಕುದುರೆ ವ್ಯಾಪಾರವನ್ನೂ ಆರಂಭಿಸಿದ್ದರು. 15-20 ಕೋಟಿ ರೂ. ಆಮಿಷ ಒಡ್ಡಿ ಶಾಸಕರನ್ನು ಖರೀದಿಸುವ ಪ್ರಯತ್ನಕ್ಕೂ ಕೈ ಹಾಕಿದ್ದರು. ಆದರೆ, ಕಾಂಗ್ರೆಸ್ ಶಾಸಕರು ಯಾವುದೇ ಆಮಿಷಕ್ಕೆ ಒಳಗಾಗದೆ ಅಹ್ಮದ್ ಪಟೇಲ್ರಿಗೆ ಮತ ಹಾಕಿದ್ದಾರೆ. ಹಾಗಾಗಿ ಶಾಸಕರಿಗೂ, ಅವರಿಗೂ ಧನ್ಯವಾದಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ಗುಜರಾತ್ ಗ್ರಾಪಂ, ತಾಪಂ ಚುನಾಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ. ಬಿಜೆಪಿ ನಾಯಕರಿಗೆ ಸೋಲಿನ ಭೀತಿ ಎದುರಾಗಿದೆ. ಮುಂದಿನ ಚುನಾವಣೆಯಲ್ಲಿ ಗೆಲ್ಲುತ್ತೇವೆ, ಅಧಿಕಾರಕ್ಕೆ ಬರುತ್ತೇವೆ ಅಥವಾ ಸರ್ಕಾರ ಮಾಡುತ್ತೇವೆ ಎಂಬ ವಿಶ್ವಾಸ ಅವರಿಗೆ ಇಲ್ಲ. ಅವರ ಶಕ್ತಿ ಕುಂದುತ್ತಿದೆ. ಹೀಗಾಗಿಯೇ ಕಾಂಗ್ರೆಸ್ ಶಾಸಕರನ್ನು ಹುಡುಕುತ್ತಿದ್ದಾರೆ. ರಾಷ್ಟ್ರೀಯ ನಾಯಕರಿಗೆ ಕರ್ನಾಟಕದ ಮೇಲೆ ಕಣ್ಣು ಬಿದ್ದಿದೆ. ರಾಜ್ಯಸಭೆ ಚುನಾವಣೆ ಫಲಿತಾಂಶದಿಂದ ಗುಜರಾತ್ನ ಕಾಂಗ್ರೆಸ್ ಶಾಸಕರಿಗೆ ಆತ್ಮಸ್ಥೈರ್ಯ ಹೆಚ್ಚಿದೆ.
– ಡಿ.ಕೆ.ಶಿವಕುಮಾರ್, ಇಂಧನ ಸಚಿವ