ಒಂದೇ ಅರ್ಜಿಯಲ್ಲಿ ಎಲ್ಲ ಇಲಾಖೆ ಎನ್ಒಸಿ!
Team Udayavani, Jan 14, 2020, 3:10 AM IST
ಬೆಂಗಳೂರು: ಹೂಡಿಕೆದಾರರನ್ನು ಆಕರ್ಷಿಸಲು ಹಾಗೂ ವ್ಯಾಪಾರ ಸರಳೀಕರಣ ಮಾಡುವ ಉದ್ದೇಶ ದಿಂದ ಸ್ವಾಧೀನಾನುಭವ, ಚಾಲ್ತಿ ಪ್ರಮಾಣ ಪತ್ರ ಹಾಗೂ ವ್ಯಾಪಾರ ಪ್ರಾರಂಭಕ್ಕೆ ಸಂಬಂಧಿಸಿದಂತೆ ನೀಡುವ ನಿರಾಕ್ಷೇಪಣಾ ಪತ್ರ (ಎನ್ಒಸಿ)ವನ್ನು ಏಕ ಗವಾಕ್ಷಿಯಡಿ ನೀಡಲು ಪಾಲಿಕೆ ಮುಂದಾಗಿದೆ.
ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ (ವ್ಯಾಪಾರ ಸರಳೀಕರಣ) ದಲ್ಲಿ ಯೋಜನೆಗೆ ಅನುಮೋದನೆ ನೀಡಲು ಸರಳ ವ್ಯವಸ್ಥೆ ಅಳವಡಿಸಿಕೊಂಡಿರುವ ನಗರಗಳ ರ್ಯಾಂಕಿಂಗ್ ಪಟ್ಟಿಯನ್ನು ವಿಶ್ವ ಬ್ಯಾಂಕ್ ಪ್ರಕಟಿಸುತ್ತಿದೆ. ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ನಡಿ ಯೋಜನೆ ಅನುಮೋದನೆಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿ ಜನ ಸಂಖ್ಯೆ ಆಧಾರದ ಮೇಲೆ ಬೆಂಗಳೂರು, ಕೋಲ್ಕತ್ತಾವನ್ನು ಪರಿಗಣಿಸಲಾಗಿದೆ.
ಇದರೊಂದಿಗೆ ದೆಹಲಿ, ಮುಂಬೈ ಸೇರಿ ದೇಶದ ಪ್ರಮುಖ ನಾಲ್ಕು ನಗರಗಳಲ್ಲಿ ವಿಶ್ವ ಬ್ಯಾಂಕ್ ಸಮೀಕ್ಷೆ ನಡೆಸಲಿದೆ. ಹೀಗಾಗಿ, ಯೋಜನೆ ಅನುಮೋದನೆ ಪ್ರಕ್ರಿಯೆ ಸರಳೀರಣಕ್ಕೆ ಒತ್ತು ನೀಡಲು ಬಿಬಿಎಂಪಿ ನಿರ್ಧರಿಸಿದ್ದು, ಸ್ವಾಧೀನಾನು ಭವ ಪತ್ರ, ಚಾಲ್ತಿ ಪ್ರಮಾಣ ಪತ್ರ, ನಿರ್ಮಾಣ ಕಾರ್ಯ ಪೂರ್ಣ ಗೊಂಡಿರುವ ಬಗ್ಗೆ ಪ್ರಮಾಣ ಪತ್ರ ಹಾಗೂ ವಿವಿಧ ಇಲಾಖೆಗಳಿಂದ ನಿರಾಕ್ಷೇಪಣ ಪತ್ರವನ್ನು ಒಂದೇ ಅರ್ಜಿಯಲ್ಲಿ ಎಲ್ಲ ಇಲಾಖೆ ಗಳಿಂದ ನಿರಾಕ್ಷೇಪಣೆ ಪತ್ರ ನೀಡುವ ನಿಟ್ಟಿನಲ್ಲಿ ಅರ್ಜಿ ನಮೂನೆ ಅಭಿವೃದ್ಧಿಪಡಿಸಲು ಸಿದ್ಧತೆ ನಡೆಯುತ್ತಿದೆ.
ಕಟ್ಟಡ ನಿರ್ಮಾಣ ನಿರಾಕ್ಷೇಪಣಾ ಪತ್ರ (ಎನ್ಒಸಿ) ಪಡೆಯುವುದಕ್ಕೆ ಬೆಸ್ಕಾಂ, ಜಲ ಮಂಡಳಿ, ಅಗ್ನಿ ಶಾಮಕದಳ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ವಿಮಾನ ನಿಲ್ದಾಣ ಪ್ರಾಧಿಕಾರ ಸೇರಿದಂತೆ ವಿವಿಧ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರ ಪಡೆದುಕೊಳ್ಳಬೇಕಾಗಿತ್ತು. ಈಗ ಅಲೆದಾಟ ತಪ್ಪಲಿದೆ. ನಿರಾಕ್ಷೇಪಣಾ ಪತ್ರ ಪಡೆದುಕೊಳ್ಳಲು ವಿವಿಧ ಇಲಾಖೆಗಳಿಗೆ ಪ್ರತ್ಯೇಕ ಅರ್ಜಿಸಲ್ಲಿಸಬೇಕಿತ್ತು. ಕೆಲವು ಇಲಾಖೆಗಳು ಮಾತ್ರ ಆನ್ಲೈನ್ನಲ್ಲಿ ಅರ್ಜಿ ತುಂಬುವ ವ್ಯವಸ್ಥೆ ಅಳವಡಿಸಿಕೊಂಡಿತ್ತು.
ಇದರಲ್ಲಿ ಆಯಾ ಇಲಾಖೆಗಳ ನಿಯಮಾನುಸಾರ ಅರ್ಜಿಗಳನ್ನು ತುಂಬಬೇಕಾಗಿತ್ತು. ಬಹುತೇಕ ಇಲಾಖೆಗಳು ಅರ್ಜಿ ಸಲ್ಲಿಸುವುದಕ್ಕೆ ಆನ್ಲೈನ್ ಸೌಲಭ್ಯ ನೀಡದಿ ರುವುದರಿಂದ ನೇರ ವಾಗಿ ಅರ್ಜಿ ಪಡೆದು ಅರ್ಜಿ ಗಳನ್ನು ತುಂಬಬೇಕಾಗಿತ್ತು. ಈಗ ಒಂದೇ ಅರ್ಜಿ ಮೂಲಕ ಈ ಸೌಲಭ್ಯ ಸಿಗಲಿದೆ. ಒಮ್ಮೆ ಅರ್ಜಿ ಸಲ್ಲಿಸಿದರೆ ಆನ್ಲೈನ್ ಮೂಕವೇ ವಿವಿಧ ಇಲಾಖೆ ಗಳಿಂದ ಅನುಮತಿ ಸಿಗಲಿದೆ.
ಹಣ ಪಾವತಿಯೂ ಒಂದೇ ಬಾರಿಗೆ ಪಾವತಿ ಮಾಡಿದರೆ ಸಾಕು. ವಿಶ್ವ ಬ್ಯಾಂಕ್ ಸಂಸ್ಥೆ ಖಾತಾ ಬದಲಾವಣೆ, ಕಂದಾಯ, ಸಾಲ, ವ್ಯಾಪಾರ ಪ್ರಾರಂಭ ಸೇರಿದಂತೆ 12 ಮಾನ ದಂಡಗಳ ಮೇಲೆ ವ್ಯಾಪಾರ ಸರಳೀಕರಣ ನಗರ ಎಂದು ಗುರುತಿಸುತ್ತದೆ. ಇದರಲ್ಲಿ ನಿರಾಕ್ಷೇಪಣ ಪತ್ರ ನೀಡು ವುದು ಒಂದಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಹೂಡಿಕೆದಾರರನ್ನು ಆಕರ್ಷಿಸಲಿದೆ: ವ್ಯಾಪಾರ ಸರಳೀಕರಣ ಮಾಡುವುದರಿಂದ ವಿವಿಧ ರಾಜ್ಯ ಹಾಗೂ ದೇಶಗಳ ಹೂಡಿಕೆದಾರರೂ ಸಹಜವಾಗಿ ಬೆಂಗಳೂರಿನಲ್ಲಿ ಹೂಡಿಕೆ ಮಾಡಲಿದ್ದಾರೆ. ಇಲ್ಲಿ ವ್ಯಾಪಾರ ಮತ್ತು ವಹಿವಾಟಿನ ಪ್ರಮಾಣವೂ ಹೆಚ್ಚಾಗಲಿದೆ ಎನ್ನುವುದು ಅಧಿಕಾರಿಗಳ ಲೆಕ್ಕಾಚಾರ ವಾಗಿದೆ. ಅದೇ ರೀತಿ ವಿಶ್ವಬ್ಯಾಂಕ್ ಸಮೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಗಳಿಸಿದರೆ ಭವಿಷ್ಯದಲ್ಲಿ ಸಾಲ ಪಡೆಯಲು ಸಹಾಯವಾಗಲಿದೆ.
ಡೀಮ್ಡ್ ಆಗಲಿರುವ ಅರ್ಜಿಗಳು: ಒಂದೇ ಅರ್ಜಿಯಡಿ ನಿರಾಕ್ಷೇಪಣ ಪತ್ರವನ್ನು ನಿರ್ದಿಷ್ಟ ಸಮಯದ ಒಳಗೆ ನೀಡುವ ನಿಟ್ಟನಿಲ್ಲೂ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. “ಪ್ರತಿ ಇಲಾಖೆಯ ಅಧಿಕಾರಿಗಳು ಇಂತಿಷ್ಟು ದಿನಗಳ ಒಳಗಾಗಿ ನಿರಾಕ್ಷೇಪಣಾ ಪತ್ರ ನೀಡಬೇಕು.
ಇಲ್ಲವಾದರೆ ಆ ಅರ್ಜಿಗಳು ಡೀಮ್ಡ್ ಆಗಲಿವೆ. ಅರ್ಜಿಗಳು ನಿಯಮಾನುಸಾರ ವಿಲೇವಾರಿ ಮಾಡಬೇಕು ಅಥವಾ ತಿರಸ್ಕರಿಸಬೇಕು. ಇಲ್ಲವಾದರೆ ಅರ್ಜಿಗಳು ಡೀಮ್ಡ್ ಆಗಲಿವೆ. ಒಂದೊಮ್ಮೆ ಅಧಿಕಾರಿಗಳು ಅರ್ಜಿಗಳನ್ನು ಪರಿಶೀಲನೆ ಮಾಡದೆ, ಭವಿಷ್ಯದಲ್ಲಿ ಏನಾದರು ಲೋಪದೋಷಗಳು ಕಂಡುಬಂದರೆ, ಅಧಿಕಾರಿಗಳೇ ನೇರ ಹೊಣೆ ಯಾಗುತ್ತಾರೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಾ.ರವಿಕುಮಾರ್ ತಿಳಿಸಿದ್ದಾರೆ.
ಸಮನ್ವಯತೆಗೂ ಸಹಕಾರಿ: ವ್ಯಾಪಾರದ ವಿವಿಧ ಪರವಾನಗಿ ನೀಡಲು ವಿವಿಧ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ವರದಿ ನೀಡುತ್ತಿದ್ದರು. ಇನ್ನು ಮುಂದೆ ವಿವಿಧ ಇಲಾಖೆಯ ಅಧಿ ಕಾರಿಗಳು ಒಮ್ಮೆಗೆ ಸ್ಥಳ ಪರಿಶೀಲನೆ ಮಾಡಿ ನಿರಾಕ್ಷೇಪಣ ಪತ್ರ ನೀಡುವ ನಿಟ್ಟಿನಲ್ಲಿಯೂ ಚರ್ಚೆ ನಡೆಯುತ್ತಿದೆ. ಆದರೆ, ವಿವಿಧ ಇಲಾಖೆಯ ಅಧಿಕಾರಿಗಳ ಸಮನ್ವಯತೆ ಸಾಧಿಸುವುದು ಸವಾಲಿನ ಕೆಲಸವಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವ್ಯಾಪಾರ ಸರಳೀಕರಿಸುವ ನಿಟ್ಟಿನಲ್ಲಿ ಸುಧಾರಣಾ ಕ್ರಮಗಳನ್ನು ಅಳವಡಿಸಿ ಕೊಳ್ಳುತ್ತಿದ್ದು, ಸಾರ್ವಜನಿಕರು ಇನ್ನು ಮುಂದೆ ಒಂದೇ ಅರ್ಜಿಯ ಮೂಲಕ ನಿರಾಕ್ಷೇಪಣಾ ಪತ್ರ ಪಡೆದುಕೊಳ್ಳಬಹುದು. ಮುಖ್ಯಕಾರ್ಯದರ್ಶಿಗಳ ಸೂಚನೆಯಂತೆ ಕ್ರಮ ತೆಗೆದುಕೊಳ್ಳಲಾಗಿದೆ.
-ಡಾ.ರವಿಕುಮಾರ್ ಸುರಪುರ, ಬಿಬಿಎಂಪಿ ವಿಶೇಷ ಆಯುಕ್ತ (ಯೋಜನೆ)
* ಹಿತೇಶ್ ವೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಸೆರೆ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ
ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್