ಒಂದೇ ಕೊಠಡಿಯಲ್ಲಿ ಬಾಡಿಗೆ ಇದ್ದ ಅಮೂಲ್ಯ- ಆರ್ದ್ರಾ
Team Udayavani, Feb 27, 2020, 3:08 AM IST
ಬೆಂಗಳೂರು: ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣ ಬಂಧನಕ್ಕೊಳಗಾಗಿರುವ ಅಮೂಲ್ಯ ಲಿಯೋನಾ ಮತ್ತು ಫ್ರೀ ಕಾಶ್ಮೀರ ನಾಮಫಲಕ ಪ್ರದರ್ಶಿಸಿದ ಆರೋಪದಡಿ ಬಂಧನವಾಗಿರುವ ಆರ್ದ್ರಾ ಒಂದೇ ಕೊಠಡಿಯಲ್ಲಿ ಕೆಲ ತಿಂಗಳು ವಾಸವಾಗಿದ್ದರು ಎಂಬುದು ವಿಶೇಷ ತನಿಖಾ ತಂಡದ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಪೊಲೀಸ್ ಭದ್ರತೆಯಲ್ಲಿ ಬಸವೇಶ್ವರನಗರ ಠಾಣೆಯಲ್ಲಿ ಆರೋಪಿ ಅಮೂಲ್ಯ ವಿಚಾರಣೆ ಸಂದರ್ಭದಲ್ಲಿ ಈ ಮಾಹಿತಿ ತಿಳಿದು ಬಂದಿದೆ. ಅಲ್ಲದೆ, ಚಿಕ್ಕಪೇಟೆ ಎಸಿಪಿ ಮಹಾಂತರೆಡ್ಡಿ ನೇತೃತ್ವದ ವಿಶೇಷ ತನಿಖಾ ತಂಡ ಆರೋಪಿ ವಾಸವಾಗಿದ್ದ ಪಿಜಿಗೆ ಕರೆದೊಯ್ದು ಸ್ಥಳ ಮಹಜರು ಮಾಡಿದ್ದು, ಈ ಸಂದರ್ಭದಲ್ಲಿ ಆಕೆಯ ಹೇಳಿಕೆಯನ್ನು ಚಿತ್ರೀಕರಣ ಮಾಡಿಕೊಳ್ಳಲಾಗಿದೆ.
ಅಮೂಲ್ಯ, ಆರ್ದ್ರಾ ಸಿ.ವಿ.ರಾಮನ್ ನಗರದಲ್ಲಿ ಕೊಠಡಿ ಬಾಡಿಗೆಗೆ ಪಡೆದು ಕೆಲ ಸಮಯ ಜತೆಯಾಗಿ ವಾಸಿಸುತ್ತಿದ್ದರು. ನಂತರ ಆರ್ದ್ರಾ ಬೇರೆ ಪಿಜಿಗೆ ಹೋಗಿದ್ದರು ಎಂದು ಗೊತ್ತಾಗಿದೆ. ಅಮೂಲ್ಯ ಕೆಲ ಪ್ರಶ್ನೆಗಳಿ ಗೆ ತಲೆಕೆಳಗಾಗಿಸಿ ಮೌನಕ್ಕೆ ಶರಣಾಗಿದ್ದಾಳೆ. ಆದರೆ, ಗೌರಿ ಲಂಕೇಶ್ ಹೆಸರು ಹೇಳುತ್ತಿದ್ದಂತೆ ಅಮೂಲ್ಯ ಕಣ್ಣಿರಿಟ್ಟಿದ್ದು, ಕೊನೆಗೆ ತನಿಖಾಧಿ ಕಾರಿಗಳು ನೀರು ಕೊಟ್ಟು ಸಮಾಧಾನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಗಳು ಸಿಎಎ, ಎನ್ಆರ್ಸಿ ಸೇರಿ ಕೆಲ ವಿಚಾರಗಳಿಗೆ ಹೇಗೆ ಪ್ರತಿಭಟನೆಯ ರೂಪುರೇಷಗಳು ಇರಬೇಕು ಎಂಬುದನ್ನು ಗ್ರೂಪ್ ರಚಿಸಿ ಚರ್ಚೆ ಮಾಡುತ್ತಿದ್ದರು. ತಾನೂ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದ ವಿಚಾರವನ್ನೇ ಭಾಷಣದಲ್ಲಿ ಮಾತನಾಡಲು ಮುಂದಾಗಿದ್ದೆ.ಆದರೆ, ಅವಕಾಶ ನೀಡಲಿಲ್ಲ ಎಂದು ಹೇಳಿಕೆ ನೀಡಿದ್ದಾಳೆ ಎಂದು ಪೊಲೀಸರು ಹೇಳಿದರು.