ಮಾದನಾಯಕನಹಳ್ಳಿ ಪುರಸಭೆ ನಿರೀಕ್ಷೆಗೆ ಸಾಕಾರ ರೂಪ
Team Udayavani, Feb 17, 2020, 3:06 AM IST
ಯಲಹಂಕ: ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿಯ ಮಾದಾದರ, ಸಿದ್ದನಹೊಸಹಳ್ಳಿ ಮತ್ತು ಮಾದನಾಯಕನಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಸೇರಿಸಿ “ಮಾದನಾಯಕನಹಳ್ಳಿ ಪುರಸಭೆ’ ಎಂದು ಸರ್ಕಾರ ಘೋಷಿಸಿದೆ. ಈ ಮೂಲಕ ಸ್ಥಳೀಯರ ಹತ್ತಾರು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ. ಜತೆಗೆ ಭೂಮಿ ದಾಖಲಾತಿ, ಮೂಲ ಸೌಕರ್ಯ ಸೇರಿ ಹಲವಾರು ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ ಎಂಬುದು ಸ್ಥಳೀಯರ ನಿರೀಕ್ಷೆಯಾಗಿದೆ.
ಮೂರೂ ಗ್ರಾ.ಪಂಗಳನ್ನು ಒಟ್ಟಾಗಿಸಿ ಪುರಸಭೆ ಎಂದು ಮೇಲ್ದರ್ಜೆಗೇರಿಸುವ ಸಂಬಂಧ 2019ರ ಡಿ.31ರಂದು ವಿಶೇಷ ರಾಜ್ಯಪತ್ರದಲ್ಲಿ ಕರಡು ಅಧಿಸೂಚನೆ ಹೊರಡಿಸಿ, ಆಕ್ಷೇಪಣೆಗಳ ಸಹಿತ ಜ.31ರೊಳಗೆ ವರಿದಿ ಸಲ್ಲಿಸಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿತ್ತು.
ಶ್ರೀಕಂಠಪುರ (ಅಂಚೆಪಾಳ್ಯ) ಗ್ರಾ.ಪಂ ಅನ್ನೂ ಪುರಸಭೆ ವ್ಯಾಪ್ತಿಗೆ ಸೇರಿಸಬೇಕೆಂಬ ಬೇಡಿಕೆ ಬಿಟ್ಟರೆ ಯಾವುದೇ ಆಕ್ಷೇಪಣೆ ಬಂದಿಲ್ಲ ಎಂದು ಡೀಸಿ ವರದಿ ನೀಡಿದ್ದಾರೆ. 15 ದಿನಗಳಲ್ಲಿ ನೂತನ ಪುರಸಭೆಯ ಪತ್ರ ವ್ಯವಹಾರ ಮುಗಿಯಲಿದ್ದು, ನಂತರ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಲಿದೆ ಎಂದು ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ವಿಜಯಕುಮಾರ್ ತಿಳಿಸಿದ್ದಾರೆ.
ಪುರಸಭೆಗೆ ಸೇರುವ ಪ್ರದೇಶ: ಮಾದ ನಾಯಕನಹಳ್ಳಿ, ಹನುಮಸಾಗರ, ಮಾದಾ ವರ, ಸಿದ್ದನಹೊಸಹಳ್ಳಿ, ದೊಂಬರಹಳ್ಳಿ, ಬೈಲಪ್ಪನಪಾಳ್ಯ, ಹೋಟ್ಟಪ್ಪನಪಾಳ್ಯ, ಹನುಮಂತೇಗೌಡಪಾಳ್ಯ, ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ, ತೋಟದಗುಡ್ಡದಹಳ್ಳಿ, ರಾಷ್ಟ್ರೀಯ ಹೆದ್ದಾರಿ 4 ಒಳಗೊಂಡಂತೆ ಹನುಮಂತಸಾಗರ, ಕುದುರೆಗೆರೆ ಗಡಿ ಸಂಧಿಸುವ ಪ್ರದೇಶ, ಅರ್ಕಾವತಿ ನದಿ ಪಾತ್ರ ಪ್ರದೇಶಗಳು ನೂತನ ಪುರಸಭೆ ವ್ಯಾಪ್ತಿಗೆ ಬರಲಿವೆ.
ವ್ಯಾಪ್ತಿ, ಜನಸಂಖ್ಯೆ ಮತ್ತು ಆದಾಯ: ಮಾದನಾಯಕನಹಳ್ಳಿ ಪುರಸಭೆ 8.47 ಚದರ ಕೀ.ಮೀ ವ್ಯಾಪ್ತಿ ಹೊಂದಿರಲಿದ್ದು, 2011 ಜನಗಣತಿಯಂತೆ 30,759 ಜನರಿದ್ದಾರೆ. ಈ ಪೈಕಿ ಶೇ.85 ಜನ ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ತೆರಿಗೆ ಮತ್ತು ತೆರಿಗೆಯೇತರ ಸಂಪನ್ಮೂಲಗಳಿಂದ ವಾರ್ಷಿಕ 627 ಲಕ್ಷ ರೂ. ರಾಜಸ್ವ ಸಂಗ್ರಹ ನಿರೀಕ್ಷಿಸಲಾಗಿದೆ.
ಚುನಾವಣೆ ವೇಳೆ ನೀಡಿದ ಭರವಸೆ ಈಡೇರಿಸಿದ್ದೇನೆ. ಸರ್ಕಾರದ ಅಂತಿಮ ಅಧಿಸೂಚನೆ, ಆಡಳಿತಾಧಿಕಾರಿ ನೇಮಕ, ವಾರ್ಡ್ ವಿಂಗಡಣೆ, ಚುನಾವಣೆ ಸೇರಿ ಎಲ್ಲ ಆಡಳಿತ ಪ್ರಕ್ರಿಯೆಗಳು ಮೂರು ತಿಂಗಳೊಳಗೆ ಪೂರ್ಣಗೊಳ್ಳಲಿವೆ.
-ಎಸ್.ಆರ್.ವಿಶ್ವನಾಥ್, ಶಾಸಕ
ಪಂಚಾಯಿತಿ ಮೇಲ್ದರ್ಜೆಗೇರಿಸಲು ವರ್ಷದ ಹಿಂದೆಯೆ ಸದಸ್ಯರು ನಡಾವಳಿ ಮಾಡಿ ಮನವಿ ಸಲ್ಲಿಸಿದ್ದೆವು. ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿದೆ. ಇದರಿಂದ ಗ್ರಾಮಗಳ ಅಭಿವೃದ್ಧಿಗೆ ಅನುಕೂಲವಾಗಲಿದೆ.
-ಜಿ.ಮೂರ್ತಿ, ಮಾದನಯಕನಹಳ್ಳಿ ಗ್ರಾ.ಪಂ ಅಧ್ಯಕ್ಷ
ಅಗತ್ಯ ಅನುದಾನವಿಲ್ಲದೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿರಲಿಲ್ಲ. ಈಗ ಪುರಸಭೆಯಾಗುವುದರಿಂದ ಹೆಚ್ಚಿನ ಅನುದಾನ ದೊರೆಯಲಿದ್ದು, ಮೂಲ ಸೌಕರ್ಯ ಕಲ್ಪಿಸಲು ಅನುಕೂಲವಾಗಲಿದೆ.
-ಗಂಗಪ್ಪ, ಮಾದನಾಯಕನಹಳ್ಳಿ ಗ್ರಾ.ಪಂ ಸದಸ್ಯ
ಹಸಿರು ವಲಯಗಳಾಗಿದ್ದ ಈ ಪ್ರದೇಶ ನಗರ ಪ್ರದೇಶವಾಗಿ ಅಭಿವೃದ್ಧಿ ಹೊಂದಿ ಹತ್ತು ವರ್ಷ ಕಳೆದರೂ ಅಧಿಕೃತವಾಗಿ ಭೂ ನೋಂದಣಿ ಆಗಿರಲಿಲ್ಲ. ಪುರಸಭೆಯಾದರೆ ಭೂ ದಾಖಲೆಗಳು ಸಿಗಲಿವೆ.
-ಎಚ್.ಜಿ.ವೆಂಕಟೇಶ್, ಹನುಮಂತೇಗೌಡಪಾಳ್ಯ ಗ್ರಾ.ಪಂ ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!