ಚಿತ್ತಾರ ಜಾತ್ರೆಯಲಿ ಬಣ್ಣಗಳ ಬಿನ್ನಾಣ
Team Udayavani, Jan 6, 2020, 10:22 AM IST
ಚಿತ್ರಗಳು: ಫಕ್ರುದ್ಧೀನ್. ಎಚ್
ಬೆಂಗಳೂರು: ಅಲ್ಲಿ ಹಳ್ಳಿ ಸೊಗಡು ಮೈದಳೆದಿತ್ತು. ಬೆಳ್ಳಂ ಬೆಳಗ್ಗೆ ರಸ್ತೆಯ ಇಕ್ಕೆಲಗಳ ತುಂಬೆಲ್ಲಾ ಬಣ್ಣ, ಬಣ್ಣದ ಕಲಾಕೃತಿಗಳ ಮೆರವಣಿಗೆ ಸಾಗಿತ್ತು. ಚಕ್ಕಡಿಗಾಡಿನಲ್ಲಿ ಪುಟಾಣಿಗಳ ಸವಾರಿ ಜತೆಗೆ ನೇಗಿಲ ಯೋಗಿಯ ಸ್ಮರಣೆ. ಇದು, ಕರ್ನಾಟಕ ಚಿತ್ರಕಲಾ ಪರಿಷತ್ ಕುಮಾರಕೃಪ ರಸ್ತೆಯಲ್ಲಿ ಆಯೋಜಿಸಿದ್ದ 17ನೇ ಚಿತ್ರಸಂತೆಯಲ್ಲಿ ಕಂಡುಬಂದ ಚಿತ್ರಣ. ರೈತರ ಪರಿಕಲ್ಪನೆಯಲ್ಲಿ ಮೂಡಿ ಬಂದ ಹಳ್ಳಿ ಸೊಗಡಿನ ಚಿತ್ರ ಸಂತೆ ಬಣ್ಣ ಬಣ್ಣಗಳ ಭಾವ ರಂಗೋಲಿ ಬಿಡಿಸಿತ್ತು.
ಕೆಲವು ಚಿತ್ರಗಳು ಗ್ರಾಮೀಣ ಸೊಗಡನ್ನು ಬಿಚ್ಚಿಟ್ಟರೆ, ಇನ್ನೂ ಕೆಲವು ಹಂಪಿ, ಅಜಂತ, ಎಲ್ಲೋರ, ವಾರಣಾಸಿಯ ಶಿವದೇವಾಲಯ, ಮೈಸೂರಿನ ಸೋಮನಾಥ ದೇವಾಲಯ ಸೇರಿ ಐತಿಹಾಸಿಕ ಮತ್ತು ಸಾಂಪ್ರದಾಯಿಕ ಕಥೆಗಳನ್ನು ತೆರೆದಿಟ್ಟವು. ಒಟ್ಟಾರೆ, ಕಲಾಕೃತಿಗಳ ಬಣ್ಣಗಳ ಬಿನ್ನಾಣದಿಂದ ಕುಮಾರ ಕೃಪಾ ರಸ್ತೆಗೆ ರಾಜಕಳೆ ಬಂದಿತ್ತು. ಭಾನುವಾರ ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ನಡೆದ ಚಿತ್ರಸಂತೆ, ಹಿರಿಯ ಮತ್ತು ಕಿರಿಯ ದೇಶೀ ಕಲಾವಿದರ “ಮಹಾ ಸಂಗಮ’ ವಾಗಿತ್ತು. ಕಣ್ಣಾಯಿಸಿದಷ್ಟು ದೂರವೂ ಜನ ಜಂಗುಳಿ ಇತ್ತು. ರಸ್ತೆಯುದ್ದಕ್ಕೂ ಕಲಾಕೃತಿಗಳ ಭಾವ-ಬಿಂಬಗಳೇ ಸಂವಾದ ನಡೆಸುತ್ತಿದ್ದರೆ, ಕಲಾ ಪ್ರೇಮಿಗಳು ಮತ್ತು ಕಲಾ ಪೋಷಕರು ಕಲೆಯನ್ನು ಮನದುಂಬಿ ಆಸ್ವಾದಿಸಿದರು.
ಚಿತ್ರ ಸಂತೆ ವೀಕ್ಷಣೆ, ಕಲಾಕೃತಿಗಳ ಖರೀದಿಗೆ ಬೆಳಗ್ಗೆ ಪ್ರಮಾಣದ ಜನರ ಆಗಮನವಿತ್ತಾದರೂ ಸಂಜೆ ಆಗುತ್ತಿದಂತೆ ಜನಪ್ರವಾಹವೇರಿದು ಬಂತು. 50 ರೂ.ನಿಂದ ಹಿಡಿದು ಬರೋಬ್ಬರಿ 12 ಲಕ್ಷ ರೂ.ವರೆಗಿನ ವಿವಿಧ ಚಿತ್ರಗಳು ಚಿತ್ರ ರಸಿಕರನ್ನು ಬೆರಗುಗೊಳಿಸಿದವು. ನಾಡಿನ ಕಲಾ ಪರಂಪರೆ ಜತೆಗೆ ಅನ್ಯ ರಾಜ್ಯಗಳ ಕಲೆ ಮತ್ತು ಸಂಸ್ಕೃತಿಯ ಪ್ರದರ್ಶನದ ಮೂಲಕ ಭಾವೈಕ್ಯತೆ ಸಂಕೇತ ಮತ್ತು ರಾಷ್ಟ್ರೀಯ ಹಬ್ಬದ ವಾತಾವರಣ ನಿರ್ಮಾಣ ಮಾಡಿಕೊಟ್ಟ ಚಿತ್ರ ಸಂತೆಯಲ್ಲಿ ಕರ್ನಾಟಕ, ಗೋವಾ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಒಡಿಶಾ ಮಧ್ಯಪ್ರದೇಶ ಮತ್ತು ಉತ್ತರಪ್ರದೇಶ ಸೇರಿ 16 ರಾಜ್ಯಗಳ 1,450ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದರು.
ಸಾಂಪ್ರದಾಯಿಕ ಮೈಸೂರು ಚಿತ್ರಕಲಾ ಶೈಲಿ, ತಂಜಾವೂರು, ರಾಜಸ್ಥಾನಿ, ಮಧುಬನಿಯ ಶೈಲಿ, ತೈಲ ಮತ್ತು ಜಲವರ್ಣಗಳ ಕಲಾಕೃತಿಗಳ ಜತೆಗೆ, ಅಕ್ರಿಲಿಕ್, ಕೊಲಾಜ್, ಲಿಥೋಗ್ರಾಫ್ ಮೊದಲಾದ ಪ್ರಕಾರಗಳ ಕಲಾಕೃತಿಗಳು ಪ್ರದರ್ಶನಕ್ಕಿದ್ದವು. ಪೆನ್ಸಿಲ್ಗಳಿಂದ ಸ್ಥಳದಲ್ಲೇ ಭಾವಚಿತ್ರ ಬಿಡಿಸುವ ಕಲಾವಿದರು ಮತ್ತು ದಾರಿ ಮಧ್ಯೆ ಅಲ್ಲಿಲ್ಲಿ ಇರಿಸಲಾಗಿದ್ದ ಬುದ್ಧನ ಕಲಾಕೃತಿಗಳು ಮನಸೆಳೆದವು.
ಗಾಂಧಿ ಕುಟೀರದಲ್ಲಿ ಹಳ್ಳಿ ಸೊಗಡು : ಚಿತ್ರಕಲಾ ಪರಿಷತ್ತು ಈ ಬಾರಿಯ ಚಿತ್ರ ಸಂತೆಯನ್ನು ರೈತರಿಗೆ ಸಮರ್ಪಿಸಿದೆ. ಆ ಹಿನ್ನೆಲೆಯಲ್ಲಿ ಚಿತ್ರಕಲಾ ಪರಿಷತ್ನಲ್ಲಿರುವ ಗಾಂಧಿ ಕುಟೀರದಲ್ಲಿ ಹಳ್ಳಿಯ ಸೊಗಡು ಮೇಳೈಸಿತ್ತು. ಗಾಂಧೀ ಕುಟೀರ ಮುಂದೆ ಇರಿಸಲಾಗಿದ್ದ ಚಕ್ಕಡಿ ಗಾಡಿನಲ್ಲಿ ಪುಟಾಣಿಗಳ ಮೆರವಣಿಗೆ ಕಂಡು ಬಂತು. ಕಿರಿಯರ ಜತೆಗೆ ಹಿರಿಯರು ಕೂಡ ಚಕ್ಕಡಿ ಗಾಲಿಯ ಸೆಲ್ಫಿಗೆ ಮೊರೆ ಹೋದ ದೃಶ್ಯ ಗಮನ ಸೆಳೆಯಿತು. ಬೃಹತ್ ಬತ್ತದ ಕಣಜ ಹಾಗೂ 800 ಟೀ ಬ್ಯಾಗ್ ಗಳನ್ನು ಬಳಸಿ ಸುಂದರವಾದ ಉದ್ದನೆಯ ಕರ್ಟನ್ ಲೈಟ್, ಅದರ ಕೆಳಗಡೆ ಹಳೆಯ ಲ್ಯಾಟೀನ್ಗಳನ್ನು ಬಳಸಿ ರಾಗಿ ಮೊಳಕೆ ಬರೆಸಿರುವುದು ನೋಡುಗರನ್ನು ಚಿತ್ತಾಕರ್ಷಿಸಿತು.
ರಂಗೋಲಿಯಲ್ಲಿ ವೃಕ್ಷ ಮಾತೆ : ಭಾರತ ಸಂಪ್ರದಾಯಿಕ ಕಲೆಯಾದ ರಂಗೋಲಿಗೆ ಅಂತಾರಾಷ್ಟ್ರೀಯ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿ ಚಂದಾಪುರದ ಶ್ರೀನಾರಾಯಣಿ ಯಾಗ ಶಾಲೆಯ ಪ್ರಧಾನ ಅರ್ಚಕ ಅಕ್ಷಯ್ ಜಾಲಿಹಾಳ್ ಆಚಾರ್ಯ ಅವರು ಸಾಲು ಮರದ ತಿಮ್ಮಕ್ಕ ಅವರ ಭಾವ ಚಿತ್ರವನ್ನು ರಂಗೋಲಿಯಲ್ಲಿ ಬಿಡಿಸಿ ಗಮನ ಸೆಳೆದರು. ವೃಕ್ಷಗಳ ಬಗ್ಗೆ ಅನುಕಂಪ ಹೊಂದಿರುವ ಸಾಲು ಮರದ ತಿಮ್ಮಕ್ಕ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಆ ಹಿನ್ನೆಲೆಯಲ್ಲಿ ಅವರನ್ನು ರಂಗೋಲಿಯಲ್ಲಿ ಸೆರೆಹಿಡಿಯುವ ಕೆಲಸ ಮಾಡಿರುವುದಾಗಿ ಅಕ್ಷಯ್ ಜಾಲಿಹಾಳ್ ಆಚಾರ್ಯ ಹೇಳಿದರು.
ಗಮನ ಸೆಳೆದ ಮೋದಿ ಕಲಾಕೃತಿ : ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರ ಭಾವ ಚಿತ್ರವನ್ನು ನೋಟ್ನಲ್ಲೆ ಸಿದ್ಧಪಡಿಸಿ ಗಮನ ಸೆಳೆದಿದ್ದ ಸಿಂದಗಿ ತಾಲೂಕಿನ ಅಲಹಳ್ಳಿಯ ಕಲಾವಿದ ಸೋಮಶೇಖರ್, ಈ ಬಾರಿ “ಮೇಕಿನ್ ಇನ್ ಇಂಡಿಯಾ’ ಪರಿಕಲ್ಪನೆಯಲ್ಲಿ ಕಲಾಕೃತಿಯನ್ನು ರಚಿಸಿದ್ದರು. ಇಂದು ಇಡೀ ವಿಶ್ವವೇ ಭಾರತವನ್ನು ದಿಟ್ಟಿಸಿ ನೋಡುತ್ತಿದೆ. ಆ ಹಿನ್ನೆಲೆಯಲ್ಲಿ ಮೋದಿ ಅವರನ್ನು ಭಿನ್ನ ರೀತಿಯ ಚಿತ್ರದ ಮೂಲಕ ಸೆರೆ ಹಿಡಿದಿದ್ದೇನೆ. ಕಳೆದ ಬಾರಿಯ ಕಲಾಕೃತಿಯನ್ನು ಪ್ರಧಾನಿ ಅವರ ಕಚೇರಿಗೆ ಕಳುಹಿಸಿ ಕೊಟ್ಟಿದ್ದಾಗಿ ಹೇಳಿದರು.
ಸಾವಿರಾರು ಸ್ಕ್ರೂ ಕೂಡಿ ಒಂದು ಅಂಗಿ : ಚಿತ್ರ ಸಂತೆಯಲ್ಲಿ ಹಲವು ರೀತಿಯ ವೈಶಿಷ್ಟ ಕಲೆಗಳು ಕಂಡು ಬಂದವು. ಅದರಲ್ಲಿ ಸೂðಗಳನ್ನು ಬಳಸಿ ತಯಾರಿಸಿದ್ದ ಅಂಗಿ ಹಲವರ ಮೆಚ್ಚುಗೆಗೆ ಪಾತ್ರವಾಯಿತು. ಮಹಾರಾಷ್ಟ್ರದ ಸಾಂಗ್ಲಿ ಮೂಲದ ವಾಸೀಂ ಎಂಬವರು ಸುಮಾರು 7 ಸಾವಿರ ಸೂðಗಳಲ್ಲಿ ಅಂಗಿ ಸಿದ್ಧಪಡಿಸಿದ್ದರು. ಇದರ ಬೆಲೆ 51 ಸಾವಿರ ರೂ. ಆಗಿದ್ದು, ಇದನ್ನು ತಯಾರಿಸಲು ಸುಮಾರು 2 ತಿಂಗಳ ತೆಗೆದು ಕೊಂಡಿದ್ದರು.
ಅಲ್ಲಲ್ಲಿ ಪ್ರತ್ಯಕ್ಷವಾದ ಗಾಂಧಿ ವೇಷಧಾರಿ : ಚಿತ್ರಸಂತೆಯಲ್ಲಿ ಅಲ್ಲಲ್ಲಿ ಗಾಂಧೀ ವೇಷಧಾರಿ ಗದಗ್ ಜಿಲ್ಲೆ ರೋಣ ತಾಲೂಕಿನ ಮುತ್ತಪ್ಪ ಚನ್ನಬಸಪ್ಪ ಹಾಗೂ ಗೋವಾ ಮೂಲದ ಅಗೋಸ್ಟೀನ್ ಕಾಣಿಸಿಕೊಂಡು ಗೋಹತ್ಯೆ ನಿಷೇಧ, ಮದ್ಯಪಾನ ಮುಕ್ತ ಭಾರತ, ಪರಿಸರ ಕಾಳಜಿ ಹಾಗೂ ಸ್ವತ್ಛ ಭಾರತ್ ಬಗ್ಗೆ ಅರಿವು ಮೂಡಿಸಿದವು. ಗಾಂಧೀ ವೇಷಧಾರಿಗಳ ಸೆಲ್ಪಿಗೆ ಪುಟಾಣಿಗಳು ಸೇರಿದಂತೆ ಹಲವರು ಮುಗಿಬಿದ್ದರು.
ಸ್ಥಳದಲ್ಲಿ ಚಿತ್ರಕ್ಕೆ ಬೇಡಿಕೆ : ಸ್ಥಳದಲ್ಲಿಯೇ ಭಾವ ಚಿತ್ರ ಬಿಡಿಸುವ ಕಲೆಗೆ ಹೆಚ್ಚಿನ ಬೇಡಿಕೆಯಿತ್ತು. ಅಧಿಕ ಸಂಖ್ಯೆಯಲ್ಲಿ ಜನರು ತಮ್ಮ ಭಾವಚಿತ್ರ ಬಿಡಿಸಿಕೊಂಡು ಖುಷಿ ಪಟ್ಟರು. ಇದರ ಜತೆಗೆ ಕಾಫಿ ಡಿಕಾಕ್ಷನ್ನಲ್ಲಿ ಪೇಂಟಿಂಗ್ ರಚಿಸಿರುವುದು ಮತ್ತೂಂದು ವಿಶೇಷವಾಗಿತ್ತು.
12 ಲಕ್ಷ ರೂ. ಬೆಲೆಯ ಕಲಾಕೃತಿ : ತಮಿಳುನಾಡಿನ ಕೊಯಮತ್ತೂರಿನ ಕಲಾ ವಿದ ಗೋಕುಲಂ ವಿಜಯ್ ಅವರ ಸಾಂಪ್ರದಾಯಿಕ ಕಲೆಯ ಬೃಹತ್ ನೈಜ ಚಿತ್ರವು ನೋಡು ಗರನ್ನು ಆಕರ್ಷಿಸಿತು. ಮಧುರೈನ ಅಳಗರ ದೇವಸ್ಥಾನದ ಮುಂಭಾಗದ ಚಿತ್ರವನ್ನು ಅತ್ಯಂತ ಅದ್ಭುತವಾಗಿ ಕುಂಚದಲ್ಲಿ ಸೆರೆ ಹಿಡಿದಿದ್ದರು. ಹೂವು, ಹಣ್ಣು, ಕಾಯಿ ಸೇರಿದಂತೆ ಪೂಜಾ ಸಾಮಗ್ರಿಗಳ ಮಾರಾಟದ ಅಂಗಡಿ, ಅದರ ಮುಂದೆ ಬ್ಯಾಗ್ ಹಿಡಿದು ಆಟಿಕೆಗಳ ಮಾರಾಟ ವ್ಯಕ್ತಿಯನ್ನು ನೋಡುತ್ತಿರುವ ಬಾಲಕಿ, ಮಣ್ಣಿನ ಮಡಕೆಯನ್ನು ಕಂಕುಳಲ್ಲಿ ಇಟ್ಟು ಇಳಿಯುತ್ತಿರುವ ಅಜ್ಜಿ , ಪೂಜಾ ಸಾಮಗ್ರಿಗಳ ತಟ್ಟೆಯನ್ನು ಹಿಡಿದಿರುವ ಮಹಿಳೆಯ ಚಿತ್ರ ಅತ್ಯಂತ ಆಕರ್ಷಕವಾಗಿತ್ತು. ಇದರ ಬೆಲೆ ಬರೋ ಬ್ಬರಿ 12 ಲಕ್ಷ ರೂ. ಕಳೆದ ವರ್ಷವೂ ಈ ಚಿತ್ರವನ್ನು ಪ್ರದರ್ಶಿಸಲಾಗಿತು
ಚಲನವಲನದ ಮೇಲೆ ಕಣ್ಣು : ಚಿತ್ರಸಂತೆಯಲ್ಲಿ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಭದ್ರತೆ ಮತ್ತು ನಿಗಾ ವಹಿಸುವುದಕ್ಕಾಗಿ ಪ್ರತಿ 50 ಅಡಿಗೆ ಒಂದರಂತೆ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. 200ಕ್ಕೂ ಹೆಚ್ಚು ಪೊಲೀಸರು ಮತ್ತು 400ಕ್ಕೂ ಹೆಚ್ಚು ಚಿತ್ರಕಲಾ ಪರಿಷತ್ತಿನ ವಿದ್ಯಾರ್ಥಿಗಳು ಚಿತ್ರಸಂತೆಯ ಚಲನ ವಲನಗಳ ಮೇಲೆ ಕಣ್ಣಿಟ್ಟಿದ್ದರು.
ಸಂಗೀತದ ಸೊಬಗು : ಚಿತ್ರಸಂತೆಗೆ ಬರುವವರಿಗೆ ಮನರಂಜನೆಗಾಗಿ ಚಿತ್ರಕಲಾ ಪರಿಷತ್ತು ಸಂಗೀತ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಬೆಳಗ್ಗೆ ಯಿಂದ ಸಂಜೆ ವರೆಗೆ ವಿವಿಧ ಸಂಗೀತ ಕಲಾವಿದರುಗಳು ಜಾನಪದ ಗೀತೆ, ಭಾವ ಗೀತೆ ಸೇರಿದಂತೆ ಹಲವು ಕವಿಗಳ ರಚನೆಗಳನ್ನು ಹಾಡಿ ಸಂಗೀತ ಸುಧೆ ಹರಿಸಿದರು.
2- 3 ಕೋಟಿ ರೂ. ವಹಿವಾಟು : ಭಾನುವಾರ ನಡೆದ 17ನೇ ಚಿತ್ರಸಂತೆಯಲ್ಲಿ ಸುಮಾರು 3 ಕೋಟಿ.ರೂ.ವಹಿವಾಟು ನಡೆದಿದೆ. ದೇಶದ ವಿವಿಧ ರಾಜ್ಯದ 1500ಕ್ಕೂ ಅಧಿಕ ಕಲಾವಿದರು ತಮ್ಮ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ದಿನಪೂರ್ತಿ ಮಾಡಿದರು. ರಾಜ್ಯದ ವಿವಿಧ ಭಾಗಗಳಿಂದ ಸುಮಾರು 3 ಲಕ್ಷ ಜನರು ಭೇಟಿ ನೀಡಿ ಕಲಾಕೃತಿಗಳನ್ನು ವೀಕ್ಷಿಸಿದರು. ಕಳೆದ ಸಾಲಿನ ಚಿತ್ರಸಂತೆಯಲ್ಲಿ ಸುಮಾರು 2.5 ಕೋಟಿ ರೂ. ವಹಿವಾಟು ನಡೆದಿತ್ತು ಎಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ.ಬಿ.ಎಲ್. ಶಂಕರ್ ಮಾಹಿತಿ ನೀಡಿದ್ದಾರೆ.
ಮಾಜಿ ಸೈನಿಕನಿಂದ ಜಾಗೃತಿ : ಚಿತ್ರ ಸಂತೆಯಲ್ಲಿ ಸೇನೆ ನಿವೃತ್ತ ಅಧಿಕಾರಿ ಸುಬೇದಾರ್ ಬಿ.ಎನ್.ಶಾಂತಶೀಲನ್ ಅವರು ವಿಶೇಷ ರೀತಿಯಲ್ಲಿ ಗಮನ ಸೆಳೆದರು. ತೆಂಗಿನ ಕಾಯಿಯಲ್ಲಿ ಹೆಣ್ಣು ಮಕ್ಕಳ ರಕ್ಷಣೆ, ಸ್ವತ್ಛಭಾರತ್, ರಕ್ತದಾನ ಮಾಡುವುದು, ಸೂರ್ಯ ನಮಸ್ಕಾರ ಹಾಗೂ ಸೇನೆ ಸೇರುವುದು ಸೇರಿದಂತೆ ಅನೇಕ ಸಂದೇಶಗಳನ್ನು ಪುಟ್ಟ ತೆಂಗಿನ ಕಾಯಿಯಲ್ಲಿ ಬಿಡಿಸಿ ಗಮನ ಸೆಳೆದರು. ಜನರಿಗೆ ಹೆಣ್ಣು ಮಕ್ಕಳ ರಕ್ಷಣೆ ಬಗ್ಗೆ, ಸ್ವತ್ಛ ಭಾರತ್ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಆ ಹಿನ್ನೆಲೆಯಲ್ಲಿ ಚಿತ್ರಸಂತೆಯಲ್ಲಿ ಭಾಗವಹಿಸಿದ್ದಾಗಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ