ಸಿಕ್ಕಾ ರಾಜೀನಾಮೆ; ಇನ್ಫೋಸಿಸ್ ಒಳ ಗುದ್ದಾಟಕ್ಕೆ ತಾರ್ಕಿಕ ಅಂತ್ಯ
Team Udayavani, Aug 19, 2017, 6:10 AM IST
ಬೆಂಗಳೂರು/ನವದೆಹಲಿ: ನನ್ನ ಹೆಸರು ಕೆಡಿಸುವಂಥ ಘಟನೆಗಳು ನಡೆದ ತರುವಾಯ, ಹುದ್ದೆ ತ್ಯಜಿಸಲು ಇದೇ ಸಕಾಲ ಎಂದು ತೀರ್ಮಾನಿಸಿ ಕಂಪನಿಯಲ್ಲಿ ನನ್ನ ಸ್ಥಾನವಾದ ವ್ಯವಸ್ಥಾಪಕ ನಿರ್ದೇಶಕ(ಎಂಡಿ) ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಹುದ್ದೆಗಳಿಗೆ ರಾಜೀನಾಮೆ ನೀಡುತ್ತಿದ್ದೇನೆ. ಈ ವಿಷಯವನ್ನು ಶೇಷಸಾಯಿ ಅವರಿಗೂ ಮುಟ್ಟಿಸಿದ್ದೇನೆ.”
ಇದು ಇನ್ಫೋಸಿಸ್ ಕಂಪನಿಯ ಸಿಇಒ ಮತ್ತು ಎಂಡಿ ವಿಶಾಲ್ ಸಿಕ್ಕಾ ಅವರ ರಾಜೀನಾಮೆ ಪತ್ರದ ಒಂದು ಸಾಲಿನ ತಿರುಳು. ಈ ಮೂಲಕ ಇನ್ಫೋಸಿಸ್ ಸಂಸ್ಥೆಯ ಸ್ಥಾಪಕರ ಮಂಡಳಿ ಮತ್ತು ಆಡಳಿತ ಮಂಡಳಿ ನಡುವಿನ ಗುದ್ದಾಟಕ್ಕೆ ತಾರ್ಕಿಕ ಅಂತ್ಯ ಸಿಕ್ಕಂತಾಗಿದೆ.
ಈ ಬೆಳವಣಿಗೆಯನ್ನು ಕಂಪನಿಯ ಕಾರ್ಯದರ್ಶಿ ಎಜಿಎಸ್ ಮಣಿಕಾಂತ್ ಅವರು ದೃಢಪಡಿಸಿದ್ದು, ಶುಕ್ರವಾರವೇ ನಡೆದ ಇನ್ಫೋಸಿಸ್ನ ಆಡಳಿತ ಮಂಡಳಿ ಸಭೆಯಲ್ಲಿ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಎಂದು ತಿಳಿಸಿದ್ದಾರೆ. ಯು.ಬಿ. ಪ್ರವೀಣ್ ರಾವ್ ಅವರು ಮಧ್ಯಂತರ ಸಿಇಒ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದೂ ಅವರು ತಿಳಿಸಿದ್ದಾರೆ. ಜತೆಗೆ ಸಿಕ್ಕಾ ಅವರು ಕಂಪನಿಯ ಕಾರ್ಯಕಾರಿ ಉಪಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂಬ ಮಾಹಿತಿಯನ್ನೂ ನೀಡಿದ್ದಾರೆ.
ಅಲ್ಲದೆ ಮುಂದಿನ ಸಿಇಒ ಮತ್ತು ಎಂಡಿ ಆಯ್ಕೆಯಾಗುವವರೆಗೂ ಪ್ರವೀಣ್ ರಾವ್ ಈ ಸ್ಥಾನದಲ್ಲಿದ್ದರೂ, ಹೊಣೆಯನ್ನು ವಿಶಾಲ್ ಸಿಕ್ಕಾ ಅವರೇ ಇರಿಸಿಕೊಂಡಿರುತ್ತಾರೆ. ಪ್ರವೀಣ್ ರಾವ್ ಅವರು ಸಿಕ್ಕಾ ಅವರ ಅಡಿ ಕೆಲಸ ಮಾಡಲಿದ್ದಾರೆ ಎಂದು ಕಂಪನಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. 2018ರ ಮಾರ್ಚ್ ಅಂತ್ಯದ ವರೆಗೆ ಸಿಕ್ಕಾ ಅವರು ಇಲ್ಲೇ ಇರಲಿದ್ದು, ಆ ಬಳಿಕವಷ್ಟೇ ಜವಾಬ್ದಾರಿ ತೊರೆಯಲಿದ್ದಾರೆ ಎಂದೂ ಹೇಳಿದೆ.
ವಿಶಾಲ್ ಸಿಕ್ಕಾ ಅವರು ರಾಜೀನಾಮೆ ನೀಡುತ್ತಿದ್ದಂತೆ ಷೇರುಪೇಟೆಯಲ್ಲಿ ತಲ್ಲಣ ಶುರುವಾಗಿ ಇನ್ಫೋಸಿಸ್ ಷೇರುಗಳಲ್ಲಿ ಭಾರಿ ಕುಸಿತವಾಗಿದೆ. ಷೇರುಗಳ ಮೌಲ್ಯ ಶೇ.9.60ರಷ್ಟು ಕುಸಿದಿದ್ದು, ಇದು 3 ವರ್ಷಗಳ ಹಿಂದಿನ ದಾಖಲೆಯಾಗಿದೆ. ಇದರಿಂದಾಗಿ ಕಂಪನಿಗೆ 28,500 ಕೋಟಿ ರೂ.ಗಳಷ್ಟು ನಷ್ಟವಾಗಿದೆ.
ಇನ್ನೊಂದೆಡೆ ಸಿಕ್ಕಾ ರಾಜೀನಾಮೆಗೆ ಕಂಪನಿಯ ಸ್ಥಾಪಕರಲ್ಲೊಬ್ಬರಾದ ಇನ್ಫೋಸಿಸ್ ನಾರಾಯಣಮೂರ್ತಿ ಅವರೇ ಕಾರಣ ಎಂದು ಕಂಪನಿಯ ಆಡಳಿತ ಮಂಡಳಿ ಆರೋಪಿಸಿದೆ. ಇತ್ತೀಚಿನ ದಿನಗಳಲ್ಲಿ ಸಿಕ್ಕಾ ಅವರ ಎಲ್ಲ ನಡೆಗಳಿಗೆ ನಾರಾಯಣಮೂರ್ತಿ ಅವರು ಅಡ್ಡಗಾಲು ಹಾಕುತ್ತಲೇ ಇದ್ದರು. ಹೀಗಾಗಿ ವಿಧಿ ಇಲ್ಲದೇ ಸಿಕ್ಕಾ ಅವರು ರಾಜೀನಾಮೆ ನೀಡಬೇಕಾಯಿತು ಎಂದು ಆಪಾದಿಸಿದೆ.
ಮೂರ್ತಿ ಅವರು ಪದೇ ಪದೆ ಸಿಕ್ಕಾ ಮೇಲೆ ದಾಳಿ ನಡೆಸುತ್ತಲೇ ಇದ್ದರು. ಇತ್ತೀಚೆಗಷ್ಟೇ ಪತ್ರವೊಂದನ್ನು ಬರೆದು ಈ ಮೂಲಕವೂ ಆರೋಪಿಸಿದ್ದರು. ಈ ಕಾರಣದಿಂದಲೇ ಸಿಕ್ಕಾ ಅವರು, ದೃಢವಾದ ಆಡಳಿತ ಮಂಡಳಿ ಇದ್ದರೂ ಸಹ ವಿಧಿ ಇಲ್ಲದೇ ರಾಜೀನಾಮೆ ಕೊಡಬೇಕಾಯಿತು ಎಂದು ಆಡಳಿತ ಮಂಡಳಿ ಹೇಳಿಕೆ ಬಿಡುಗಡೆ ಮಾಡಿದೆ.
ಆಡಳಿತ ಮಂಡಳಿಯ ಈ ಆರೋಪಗಳನ್ನು ತಿರಸ್ಕರಿಸಿದ ಇನ್ಫೋಸಿಸ್ ನಾರಾಯಣಮೂರ್ತಿ ಅವರು, ನಾನೇನು ಹಣ ಕೇಳಿದೆನೇ? ಹುದ್ದೆ ಕೇಳಿದೆನೇ? ಅಥವಾ ನನ್ನ ಮಕ್ಕಳಿಗೆ ಅಧಿಕಾರ ಕೊಡಿ ಎಂದು ಕೇಳಿದೆನೇ? ನಾನು ಕೇಳಿದ್ದು ಉತ್ತಮವಾದ ಕಾರ್ಪೊರೇಟ್ ಆಡಳಿತವಿರಬೇಕು ಎಂದಷ್ಟೇ, ಎಂದಿದ್ದಾರೆ. ಇಂಥ ಆಧಾರ ರಹಿತ ಆರೋಪಗಳಿಗೆ ಉತ್ತರ ಕೊಡುವುದು ತನ್ನ ವರ್ಚಸ್ಸಿಗೆ ಸರಿಹೊಂದುವಂಥದ್ದಲ್ಲ.
ಆದರೂ, ಈ ಹಿಂದೆ ತಪ್ಪು ಮಾಡಿದವರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳದೇ ಅವರಿಗೆ ಕ್ಲೀನ್ಚಿಟ್ ನೀಡಿದ್ದೇ ನನ್ನ ಅಸಮಾಧಾನಕ್ಕೆ ಕಾರಣವಾಯಿತು ಎಂದಿದ್ದಾರೆ. 2014ರಲ್ಲೇ ನಾನು ಸ್ವಂತ ನಿರ್ಧಾರದಿಂದಲೇ ಕಂಪನಿ ಬಿಟ್ಟು ಹೊರಬಂದೆ. ನಾನೇನೂ ನನಗಾಗಿ, ನನ್ನ ಮಕ್ಕಳಿಗಾಗಿ ಏನನ್ನಾದರೂ ಮಾಡಿ ಎಂದು ಕೇಳಿರಲಿಲ್ಲವಲ್ಲ ಎಂದು ಹೇಳಿಕೆಯಲ್ಲೇ ಉತ್ತರ ನೀಡಿದ್ದಾರೆ. ಅಲ್ಲದೆ ಕಂಪನಿಯನ್ನು ಉಳಿಸುವ ಸಲುವಾಗಿಯೇ ಆಡಳಿತ ಮಂಡಳಿಯ ಕೆಲವು ನಿರ್ಧಾರಗಳನ್ನು ಪ್ರಶ್ನಿಸಿದ್ದೆ ಎಂದಿದ್ದಾರೆ.
ಸಿಕ್ಕಾ ರಾಜೀನಾಮೆ ಪತ್ರದಲ್ಲೇನಿದೆ?
ಮತ್ತೆ ಮತ್ತೆ ನನ್ನ ಹೆಸರಿಗೆ ಕೆಟ್ಟ ಹೆಸರು ಬರುತ್ತಿದೆ ಎಂಬುದನ್ನು ಗಮನಹರಿಸಿ, ಕಡೆಗೆ ಹುದ್ದೆ ಬಿಡಲು ಇದೇ ಸಕಾಲವೆಂದು ತೀರ್ಮಾನಿಸಿ, ಶೇಷಸಾಯಿ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದೇನೆ. ಮುಂದಿನ ದಿನಗಳಲ್ಲಿ ಶೇಷಸಾಯಿ, ರವಿ, ಪ್ರವೀಣ್ ಮತ್ತು ನಿಮ್ಮೆಲ್ಲರ ಜತೆ ಕೆಲಸ ಮಾಡುತ್ತಲೇ ಇರುತ್ತೇನೆ. ಸೀನಿಯರ್ ಟೀಂ ಜತೆಯಲ್ಲೂ ಕೆಲಸ ಮಾಡುತ್ತಾ, ಮುಂದಿನ ಸಿಇಒಗೆ ಅಧಿಕಾರ ಹಸ್ತಾಂತರ ಸುಲಭವಾಗಿ ಆಗುವಂತೆ ನೋಡಿಕೊಳ್ಳುತ್ತೇನೆ. ಈ ಮೂಲಕ ಕೆಲಸಕ್ಕೆ ಯಾವುದೇ ಅಡೆ ತಡೆಗಳಿಲ್ಲದೇ, ನಮ್ಮ ಕಂಪನಿಯ ಹಿತಾಸಕ್ತಿ ಕಾಪಾಡಿಕೊಳ್ಳುತ್ತಾ, ಇದರ ಜತೆ ಜತೆಯಲ್ಲೇ ನಮ್ಮ ಸಿಬ್ಬಂದಿ, ಗ್ರಾಹಕರು ಮತ್ತು ಪ್ರತಿಯೊಬ್ಬ ಷೇರುದಾರನ ಹಿತಾಸಕ್ತಿ ಕಾಯುತ್ತಾ ಕೆಲಸ ಮಾಡೋಣ. ಈ ಬಗ್ಗೆ ನನ್ನ ಬದ್ಧತೆಯನ್ನು ನೀವು ನೋಡ್ತಿರಬಹುದು.
ಆದರೆ ಕೆಲವು ತ್ತೈಮಾಸಿಕ ಅಥವಾ ತಿಂಗಳುಗಳಿಂದ ನಮ್ಮೆಲ್ಲರ ವಿರುದ್ಧ ಆಧಾರ ರಹಿತ, ತಪ್ಪು, ಅತ್ಯಂತ ಕೀಳುಮಟ್ಟದ ವೈಯಕ್ತಿಕ ದಾಳಿ ಮಾಡಲಾಗುತ್ತಿದೆ. ಈ ಎಲ್ಲಾ ಆರೋಪಗಳಲ್ಲಿ ಸತ್ಯವಿಲ್ಲ ಎಂದು ಸ್ವತಂತ್ರ ಸಂಸ್ಥೆಯಿಂದ ತನಿಖೆ ಮಾಡಿಸಿ ಹೇಳಿದರೂ ಇದನ್ನು ನಂಬದೆ ದಾಳಿ ಮುಂದುವರಿಸಲಾಗಿದೆ. ನಮ್ಮ ಬೆನ್ನಿಗೆ ನಿಲ್ಲುತ್ತಾರೆ ಎಂದೇ ನಾವೆಲ್ಲರೂ ಭಾವಿಸಿದ್ದವರೇ ಇನ್ನೂ ಕೆಟ್ಟ ರೀತಿಯಲ್ಲೇ ದಾಳಿ ನಡೆಸುತ್ತಿದ್ದಾರೆ. ಇವರ ಈ ದಾಳಿ, ಕೆಲಸಕ್ಕೆ ಅಡ್ಡಿ, ನೇತ್ಯಾತ್ಮಕ ಭಾವನೆ ಮೂಡಿಸುತ್ತಿರುವುದರಿಂದ ನಮ್ಮ ಕಂಪನಿಗೆ ಧನಾತ್ಮಕ ಪರಿಣಾಮ ಉಂಟು ಮಾಡಲು ಆಗುತ್ತಿಲ್ಲ ಎಂದು ರಾಜೀನಾಮೆ ಪತ್ರದಲ್ಲಿ ಸಿಕ್ಕಾ ಬರೆದುಕೊಂಡಿದ್ದಾರೆ.
ನಂದನ್ ನಿಲೇಕಣಿ ವಾಪಸ್?
ವಿಶಾಲ್ ಸಿಕ್ಕಾ ಅವರ ರಾಜೀನಾಮೆ ಆಘಾತಕಾರಿ ನಿರ್ಧಾರವೇನಲ್ಲ. ಹೀಗೇ ಆಗುತ್ತೆ ಎಂಬುದು ಮೊದಲೇ ಗೊತ್ತಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ. ಸಿಕ್ಕಾ ಅವರು ಆಚೆ ಹೋದ ಮೇಲೆ ನಂದನ್ ನಿಲೇಕಣಿ ಅವರನ್ನು ಮತ್ತೆ ಕರೆತರಬಹುದು ಎಂದು ಸಲಹಾ ಕಂಪನಿ ಎಲ್ಐಎಎಸ್ ಹೇಳಿದೆ. ಈ ಕಂಪನಿಯ ಪ್ರಕಾರ ನಿಲೇಕಣಿ ಅವರನ್ನು ನಾನ್-ಎಕ್ಸಿಕ್ಯೂಟಿವ್ ಚೇರ್ವೆುನ್ ಮಾಡಬಹುದು ಎಂದು ತಿಳಿಸಿದೆ.
2014 ರಿಂದ 2017ರ ವರೆಗೆ
ಜೂನ್ 2014 – ಇನ್ಫೋಸಿಸ್ ಕಂಪನಿಯ ಸಿಇಒ ಆಗಿ ಸಿಕ್ಕಾ ನೇಮಕ. ಸ್ವತಃ ನಾರಾಯಣಮೂರ್ತಿ ಅವರಿಂದಲೇ ಘೋಷಣೆ
ಆಗಸ್ಟ್ 2014 – ಕಂಪನಿಯ 5000 ಉದ್ಯೋಗಿಗಳಿಗೆ ಏಕಕಾಲದಲ್ಲೇ ಭಡ್ತಿ. ಕೆಲಸ ತೊರೆಯದಂತೆ ಉದ್ಯೋಗಿಗಳಿಗೆ ಉತ್ತೇಜನ
ಅಕ್ಟೋಬರ್ 2014 – ನಾನ್ ಎಕ್ಸ್ಕ್ಯೂಟೀವ್ ಚೇರ್ಮನ್ ಹುದ್ದೆಯಿಂದ ಕೆಳಗಿಳಿದ ಇನ್ಫೋಸಿಸ್ ನಾರಾಯಣಮೂರ್ತಿ
ಡಿಸೆಂಬರ್ 2014 – ಉತ್ತಮವಾಗಿ ಕೆಲಸ ಮಾಡಿದ 3000 ಉದ್ಯೋಗಿಗಳಿಗೆ ಐಫೋನ್ 6 ಉಡುಗೊರೆ
ಫೆಬ್ರವರಿ 2015 – ಇನ್ಫೋಸಿಸ್ನ ಆರ್ಥಿಕ ಸ್ಥಿತಿ ಸುಧಾರಣೆ ಹಂತದತ್ತ ಮರಳಿತು
ಏಪ್ರಿಲ್ 2015 – ಇ -ಕಾಮರ್ಸ್ ಸರ್ವೀಸ್ ಪ್ರೊವೈಡರ್ ಎಸ್ಕಾವಾ ಕಂಪನಿ ಖರೀದಿ
ಜೂನ್ 2015 – ಅಶೋಕ್ ಲೈಲ್ಯಾಂಡ್ನಲ್ಲಿದ್ದ ಆರ್.ಶೇಷಸಾಯಿ ಅವರನ್ನು ನಾನ್ ಎಕ್ಸ್ಕ್ಯೂಟಿವ್ ಚೇರ್ಮನ್ ಆಗಿ ನೇಮಕ
ಅಕ್ಟೋಬರ್ 2015 – ಸಿಎಫ್ಒ ರಾಜೀವ್ ಬನ್ಸಾಲ್ ರಾಜೀನಾಮೆ, ಡಿಸೆಂಬರ್ನಲ್ಲಿ ಓಲಾಗೆ ಸೇರ್ಪಡೆ
ಫೆಬ್ರವರಿ 2016 – ಸಿಕ್ಕಾ ವೇತನ ಶೇ.55 ರಷ್ಟು ಏರಿಕೆ, ಕೆಲವು ತಿಂಗಳಲ್ಲೇ ಸಿಕ್ಕಾ ಸಿಇಒ ಆಗಿ ಮುಂದುವರಿಕೆಗೆ ಪ್ರೊಮೋಟರ್ಗಳಿಂದ ನಕಾರ
ಮೇ 2016 – ಪ್ರಾಕ್ಸಿ ಅಡ್ವೆ„ಸರ್ ಫರ್ಮ್ನಿಂದ ರಾಜೀವ್ ಬನ್ಸಾಲ್ಗೆ 23 ಕೋಟಿ ರೂ. ವೇತನ ಕೊಟ್ಟದ್ದಕ್ಕೆ ಕಾರಣವೇನು ಎಂಬ ಪ್ರಶ್ನೆ
ಸೆಪ್ಟೆಂಬರ್ 2016 – ಬನ್ಸಾಲ್ಗೆ ನೀಡಬೇಕಾದ 17 ಕೋಟಿ ರೂ. ಹಾಗೆಯೇ ಉಳಿಸಿಕೊಂಡ ಕಂಪನಿ. ಸ್ಥಾಪಕರ ಅಸಮಾಧಾನ ಹಿನ್ನೆಲೆಯಲ್ಲಿ ಈ ಕ್ರಮ
ಡಿಸೆಂಬರ್ 2016 – ನಾರಾಯಮೂರ್ತಿ, ಶಿಬುಲಾಲ್, ಕ್ರಿಸ್ ಗೋಪಾಲಕೃಷ್ಣನ್ರಿಂದ ಶೇಷಸಾಯಿ ಮತ್ತು ಸಿಕ್ಕಾ ಭೇಟಿ, ಆಡಳಿತ ಮಂಡಳಿಯ ಕಾರ್ಯದ ಬಗ್ಗೆ ಅತೃಪ್ತಿ
ಫೆಬ್ರವರಿ 2017 – ಕಂಪನಿಯ ಕಾರ್ಪೊರೇಟ್ ಗವರ್ನೆನ್ಸ್ ಬಗ್ಗೆ ಪ್ರಶ್ನಿಸಿದ ಇನ್ಫೋಸಿಸ್ ನಾರಾಯಣಮೂರ್ತಿ
ಜೂನ್ 2017 – 2020ರ ಹೊತ್ತಿಗೆ 20 ಬಿಲಿಯನ್ ಅಮೆರಿಕನ್ ಡಾಲರ್ ಗಳಿಸುವ ಗುರಿ ತೆಗೆದು ಹಾಕಿದ ಸಿಕ್ಕಾ. ಪಾನಾಯಾ ಮತ್ತು ಎಸ್ಕಾವಾ ಖರೀದಿಯಲ್ಲಿ ಅವ್ಯವಹಾರದ ಬಗ್ಗೆ ಸಂದೇಹ
ಜುಲೈ 2017 – ಪಾನಾಯಾ ಖರೀದಿಯಲ್ಲಿ ಮುಖ್ಯ ಪಾತ್ರ ವಹಿಸಿದ್ದ ಕಾರ್ಯಕಾರಿ ಉಪಾಧ್ಯಕ್ಷ ರಿತಿಕಾ ಸೂರಿ ರಾಜೀನಾಮೆ
ಆಗಸ್ಟ್ 2017 – ತನಿಖಾ ವರದಿ ಕೇಳಿದ ಮೂರ್ತಿ, ಕೊಡಲ್ಲವೆಂದ ಆಡಳಿತ ಮಂಡಳಿ