ಐಟಿ ದಾಳಿ ನಡೆಯುತ್ತಿದ್ದ ಹೊತ್ತಲ್ಲೇ ಚಿದು ವಕೀಲಿಕೆ
Team Udayavani, May 17, 2017, 11:22 AM IST
ಬೆಂಗಳೂರು: ಕೋಣನಕುಂಟೆಯಲ್ಲಿರುವ ಮೆಟ್ರೊ ಕ್ಯಾಷ್ ಅಂಡ್ ಕ್ಯಾರಿ ಇಂಡಿಯಾ ವಿರುದ್ಧದ ದಾಖಲಾಗಿರುವ ಕಾರ್ಮಿಕ ಕಾಯ್ದೆ ಉಲ್ಲಂಘನೆ ಪ್ರಕರಣ ಸಂಬಂಧ ಕಂಪೆನಿಯ ಅಧಿಕಾರಿಗಳ ಪರವಾಗಿ ವಾದಮಂಡಿಸಲು ಹಿರಿಯ ವಕೀಲ ಹಾಗೂ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಮಂಗಳವಾರ ಹೈಕೋರ್ಟ್ ಕಲಾಪದಲ್ಲಿ ಪಾಲ್ಗೊಂಡಿದ್ದರು.
ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 116 ಮಂದಿ ಗುತ್ತಿಗೆ ಕಾರ್ಮಿಕರಿಗೆ ವೇತನ ನೀಡುವಾಗ ಪ್ರತಿನಿಧಿ ನೇಮಕಗೊಳಿಸದೆ ಕಾರ್ಮಿಕ ಕಾಯಿದೆ ಉಲ್ಲಂ ಸಿರುವ ಪ್ರಕರಣ ಸಂಬಂಧ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಅರವಿಂದ ಮೇಧಿರತ್ ಮತ್ತು ಆಡಳಿತ ಮಂಡಳಿ ನಿರ್ದೇಶಕ ರವಿ ಗಣೇಶ್ ವೆಂಕಟರಾಮನ್ ವಿರುದ್ಧ ಮೇ 6ರಂದು ಅಧೀನ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿತ್ತು.
ಹೀಗಾಗಿ ಬಂಧನ ವಾರೆಂಟ್ ರದ್ದುಗೊಳಿಸುವಂತೆ ಕೋರಿ ಇಬ್ಬರೂ ಅಧಿಕಾರಿಗಳು ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಕೊಟ್ರವ್ವ ಎಸ್. ಮುದ್ಗಲ್ ಅವರಿದ್ದ ರಜಾಕಾಲದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಈ ಪ್ರಕರಣದಲ್ಲಿ ತಮ್ಮ ಕಕ್ಷಿದಾರರ ಬಂಧನ ವಾರೆಂಟ್ ರದ್ದುಗೊಳಿಸುವಂತೆ ಚಿದಂಬರಂ ನ್ಯಾಯಪೀಠಕ್ಕೆ ಕೋರಿದರು. ಪ್ರಕರಣದ ವಿಚಾರಣೆ ಮುಂದಿನ ವಾರಕ್ಕೆ ಮುಂದೂಡಿಕೆಯಾಗಿದೆ.
ಪ್ರತಿಕ್ರಿಯೆಗೆ ನಕಾರ: ಸಿಬಿಐ ದಾಳಿ ಕುರಿತು ಪ್ರಶ್ನೆಗೆ, “ನಾನು ಪ್ರಕರಣವೊಂದರ ವಾದ ಮಂಡನೆಗೆ ಹೈಕೋರ್ಟ್ ಕಲಾಪಕ್ಕೆ ಹಾಜರಾಗಿದ್ದೇನೆ,’ ಎಂದಷ್ಟೇ ಹೇಳಿದರು.