ಸಿಡಿ ಪ್ರಕರಣದ ಕುರಿತು ಸರ್ಕಾರವನ್ನು ಟೀಕಿಸಲು ಕಾಂಗ್ರೆಸ್ ಅರ್ಹವಲ್ಲ – ಬಸವರಾಜ್ ಬೊಮ್ಮಾಯಿ
Team Udayavani, Mar 31, 2021, 1:26 PM IST
ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ತಮ್ಮ ಸರ್ಕಾರವನ್ನು ಟೀಕಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿರುವ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ್ ಬೊಮ್ಮಾಯಿ, ಅನವಶ್ಯಕವಾಗಿ ಮಾತನಾಡಿ ಪ್ರಕರಣದ ತನಿಖೆಯ ಗಾಂಭೀರ್ಯತೆಯನ್ನು ಹಾಳು ಮಾಡಬೇಡಿ ಎಂದು ಹೇಳಿದರು.
ಬುಧವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಐಟಿ ತನಿಖೆ ಕ್ರಮಬದ್ಧವಾಗಿ ಕಾನೂನು ಪ್ರಕಾರ ನ್ಯಾಯಸಮ್ಮತವಾಗಿ ನಡೆಯುತ್ತಿದೆ. ಇಂತ ಸಂದರ್ಭದಲ್ಲಿ ಪ್ರತಿಭಟನೆ, ಸಾಮಾಜಿಕ ಜಾಲತಾಣಗಳ ಮೂಲಕ ಇಲ್ಲಸಲ್ಲದ ಹೇಳಿಕೆಯನ್ನು ನೀಡಬೇಡಿ. ಅನಾವಶ್ಯಕವಾಗಿ ಮಾತನಾಡಿ ಪ್ರಕರಣದ ಗಾಂಭಿರ್ಯತೆಯನ್ನು ಹಾಳುಮಾಡಬೇಡಿ. ತನಿಖೆಯ ಪ್ರಗತಿಗೆ ಅಡ್ಡ ಪಡಿಸಬೇಡಿ ಎಂದು ಪ್ರತಿ ಪಕ್ಷಗಳಿಗೆ ವಿನಂತಿ ಮಾಡಿದರು.
ಕಾಂಗ್ರೆಸ್ ಗೆ ಎಲ್ಲಿದೆ ನೈತಿಕತೆ?
ಜಾರಕಿಹೊಳಿ ಪ್ರಕರಣದಲ್ಲಿ ನಮ್ಮನ್ನು ಟೀಕಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ನೈತಿಕ ಅಧಿಕಾರ ಎಲ್ಲಿದೆ? ಮಾಜಿ ಸಚಿವ ಹುಲ್ಲಪ್ಪ ಮೇಟಿ ಸಿಡಿ ಪ್ರಕರಣದಲ್ಲಿ ಇವರು ತನಿಖೆ ಮಾಡಿದ್ರಾ? ಯಾರ ವಿರುದ್ಧ ಆದರೂ ಎಫ್ಐಆರ್ ದಾಖಲು ಮಾಡಿದ್ರಾ? ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿ ಆರೋಪಿಗೆ ಕ್ಲೀನ್ ಚಿಟ್ ಕೊಟ್ಟರು. ಒಂದು ಬಾರಿ ಯಾರನ್ನು ಕರೆದು ವಿಚಾರಣೆ ಮಾಡಲಿಲ್ಲ. ಸಿಡಿ ಮಾಡಿದವರನ್ನು ಕೂಡ ಕಂಡುಹಿಡಿಯಲಿಲ್ಲ. ಇದನ್ನೆಲ್ಲಾ ಮರೆತಿರುವ ಕಾಂಗ್ರೆಸ್ ಯಾವ ನೈತಿಕತೆಯಿಂದ ನಮ್ಮ ಎಸ್ಐಟಿ ತನಿಖೆಯನ್ನು ಪ್ರಶ್ನಿಸುತ್ತಿದೆ ಎಂದು ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಪಕ್ಷದ ನಾಯಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ:ನಟ ವಿಷ್ಣು ಓದಿದ ಕನ್ನಡ ಶಾಲೆ ಉಳಿಸುವಂತೆ ಸರ್ಕಾರಕ್ಕೆ ನಟ ರಿಷಭ್ ಶೆಟ್ಟಿ ಮನವಿ
ಎಸ್ಐಟಿ ತನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದೆ. ಕ್ರಿಮಿನಲ್ ಪ್ರೊಸೀಜರ್ ಕೋಡ್ ಪ್ರಕಾರ ತನಿಖೆ ಮಾಡಬೇಕಾಗುತ್ತದೆ. ಎಲ್ಲ ಅಂಶಗಳನ್ನು ಕೋರ್ಟ್ ಆಫ್ ಲಾ ದಲ್ಲಿ ನಾವು ಸಾಬೀತು ಮಾಡಬೇಕಾಗುತ್ತದೆ. ಹೀಗಾಗಿ ಈ ಪ್ರಕರಣದಲ್ಲಿ ಯಾರೂ ಕೂಡಾ ಮಧ್ಯಪ್ರವೇಶ ಮಾಡಬಾರದು. ಆ ಕಾರಣಕ್ಕಾಗಿ ನಾನು ಕೂಡ ತನಿಖೆ ಕುರಿತು ಹೆಚ್ಚು ಮಾತನಾಡಲು ಬಯಸುವುದಿಲ್ಲ ಎಂದು ಬೊಮ್ಮಾಯಿ ಹೇಳಿದರು.
ಎಸ್ ಐ ಟಿ ತನಿಖಾ ತಂಡ ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ಎಂತಹ ಅಡೆತಡೆಗಳಿಗೂ ಮಣೆ ಹಾಕುವುದಿಲ್ಲ. ಸತ್ಯ ಸಂಗತಿ ಹೊರಬರಬೇಕಾದರೆ ಎಸ್ಐಟಿ ತನಿಖೆ ಅಗತ್ಯ. ಅದಕ್ಕಾಗಿಯೇ ತನಿಖೆಗೆ ದಕ್ಷ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು