ಬಯೋಮಿಥನೈಜೇಷನ್ ಘಟಕ ವಿಳಂಬ: ತರಾಟೆ
Team Udayavani, Jan 20, 2017, 11:43 AM IST
ಬೆಂಗಳೂರು: ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಬಯೋಮಿಥನೈಜೇಷನ್ ಘಟಕ ಸ್ಥಾಪನೆ ವಿಳಂಬಕ್ಕೆ ಅಸಮ ಧಾನ ವ್ಯಕ್ತಪಡಿಸಿರುವ ಸಚಿವ ಕೆ.ಜೆ.ಜಾರ್ಜ್, ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಎಂಆರ್ಡಿಎ ಕೇಂದ್ರ ಕಚೇರಿಯಲ್ಲಿ ಕಸ ವಿಲೇವಾರಿ ಮತ್ತು ಸಂಸ್ಕರಣೆ ಕುರಿತು ಬಿಬಿಎಂಪಿ ಅಧಿಕಾರಿಗಳ ಜತೆ ಸಭೆ ನಡೆಸಿದ ಸಚಿವರು, ಬಿಬಿಎಂಪಿ ವ್ಯಾಪ್ತಿಯಲ್ಲಿ 4 ಸಾವಿರ ಟನ್ ಕಸ ಉತ್ಪತ್ತಿಯಾಗುತ್ತಿದ್ದು, ಶೇ. 35 ಮಾತ್ರ ಕಸ ವಿಂಗಡಣೆಯಾಗುತ್ತಿದೆ. ಅದರಿಂದಾಗಿ 1,200 ಟನ್ ಹಸಿ ತ್ಯಾಜ್ಯ ಮತ್ತು 2,800 ಟನ್ನಷ್ಟು ಮಿಶ್ರ ತ್ಯಾಜ್ಯ ದೊರೆಯುತ್ತಿದೆ.
ಮಿಶ್ರ ತ್ಯಾಜ್ಯವನ್ನು ಸಂಸ್ಕರಿಸಿ ವಿದ್ಯುತ್ ಉತ್ಪಾದನೆ ಮಾಡುವ ಕುರಿತು ಈಗಾಗಲೆ ಯೋಜನೆ ರೂಪಿಸಲಾಗಿದೆ. ಆದರೆ, ಅದು ಜಾರಿಗೊಳಿಸುವಲ್ಲಾಗುತ್ತಿರುವ ವಿಳಂಬದಿಂದಾಗಿ ಕಸದ ಸಮಸ್ಯೆ ನಿವಾರಣೆಯಾಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಗುತ್ತಿಗೆ ಕರೆಯಲಾಗಿದೆ.
ಗುತ್ತಿಗೆದಾರರು ದೊರೆಯುತ್ತಿಲ್ಲ ಎಂಬಂತಹ ಕಾರಣ ಹೇಳುತ್ತಿದ್ದೀರಿ. ಇನ್ನು ಈ ರೀತಿಯ ಕಾರಣ ನೀಡಿದರೆ ಒಪ್ಪುವುದಿಲ್ಲ. ಕೂಡಲೇ ಘಟನಗಳನ್ನು ಸ್ಥಾಪಿಸಿ 1,200 ಟನ್ ಹಸಿ ತ್ಯಾಜ್ಯವನ್ನು ಮಾವಳ್ಳಿಪುರ ಮತ್ತು ಕೆಸಿಡಿಸಿ ಘಟಕಗಳಿಗೆ ಹಾಗೂ ಉಳಿದ 2,800 ಟನ್ ಕಸವನ್ನು ವಿದ್ಯುತ್ ಉತ್ಪಾದನಾ ಘಟಕಗಳಿಗೆ ಕಳುಹಿಸುವಂತೆ ಆದೇಶಿಸಿದರು.