ಬಿಜೆಪಿ ಕಾರ್ಪೋರೇಟರ್ ಪತಿ ಕದಿರೇಶ್ ಹತ್ಯೆ
Team Udayavani, Feb 8, 2018, 12:26 PM IST
ಬೆಂಗಳೂರು: ಬಿಬಿಎಂಪಿ ಛಲವಾದಿ ಪಾಳ್ಯ 138ನೇ ವಾರ್ಡ್ನ ಬಿಜೆಪಿ ಕಾರ್ಪೊರೇಟರ್ ರೇಖಾ ಪತಿ, ಮಾಜಿ ಕಾರ್ಪೋರೇಟರ್ ಕದಿರೇಶ್ ರನ್ನು ಆಂಜಿನಪ್ಪ ಗಾರ್ಡನ್ ಬಳಿಯ ಮುನೇಶ್ವರ ದೇವಾಲಯದ ಸಮೀಪ ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈದಿದ್ದಾರೆ.
ಶಿವರಾತ್ರಿ ಪ್ರಯುಕ್ತ ಮನೆಯ ಬಳಿಯ ಮುನೇಶ್ವರ ದೇವಾಲಯ ಕಾರ್ಯದ ಉಸ್ತುವಾರಿ ಹೊತ್ತಿದ್ದ ಕದಿರೇಶ್ ಬುಧವಾರ ಮಧ್ಯಾಹ್ನ 3.30ರ ಸುಮಾರಿಗೆ ದೇವಾಲಯದ ಕಾಮಗಾರಿ ವೀಕ್ಷಣೆ ಮಾಡುತ್ತಿದ್ದರು. ಇದೇ ವೇಳೆ ಆಟೋದಲ್ಲಿ ಬಂದ ಸಹೋದರರಾದ ನವೀನ್ ಮತ್ತು ವಿನಯ್ ಹಾಗೂ ಇತರೆ ಇಬ್ಬರು ಕದಿರೇಶ್ ಕುತ್ತಿಗೆ ಭಾಗಕ್ಕೆ ಚಾಕು ಮತ್ತು ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆಗೈದಿದ್ದಾರೆ. ತೀವ್ರ ಗಾಯಗೊಂಡ ಅವರನ್ನು ಕೂಡಲೇ ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಿದ ರಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ. ಸಹೋದರಿ ಪುತ್ರಿಯ ಪ್ರೇಮ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿದ್ದೇ ಕದಿರೇಶ್ ಕೊಲೆಗೆ ಕಾರಣವಾಗಿದೆ ಎಂದು ಪೋಲಿಸರು ಶಂಕಿಸಿದ್ದಾರೆ.
ಛಲವಾದಿಪಾಳ್ಯ ವಾರ್ಡ್ಗೆ ಈ ಮೊದಲು ಎರಡು ಬಾರಿ ಪಾಲಿಕೆ ಸದಸ್ಯನಾಗಿ ಆಯ್ಕೆಯಾಗಿದ್ದ ಕದಿರೇಶ್, ಈ ಬಾರಿ ಪತ್ನಿ ರೇಖಾ ಅವರನ್ನು ನಿಲ್ಲಿಸಿ ಗೆಲ್ಲಿಸುವುದರಲ್ಲಿ ಯಶಸ್ವಿಯಾಗಿದ್ದರು. ಮುನೇಶ್ವರ ದೇವಾಲಯದ ಕಾರ್ಯಕ್ರಮಗಳ ಬಗ್ಗೆ ಅರ್ಚಕರ ಜತೆ ಚರ್ಚಿಸಲು ದೇವಾಲಯದ ಮುಖ್ಯದ್ವಾರ ದಿಂದ ಕದಿರೇಶ್ ಒಬ್ಬರೇ ಹೋಗಿದ್ದು, ಸಹೋದರ ಸುರೇಶ್ ಗೇಟ್ ಹೊರಗಡೆ ನಿಂತಿದ್ದರು. ಅರ್ಚಕರ ಜತೆ ಚರ್ಚಿಸಿದ ಬಳಿಕ ದೇವಾಲಯ ಹಿಂಭಾಗದಲ್ಲಿರುವ ದೇಹದಾರ್ಢ್ಯ ಶಾಲೆ ಕಟ್ಟಡ ಕಾಮಗಾರಿ ಪರಿಶೀಲಿಸಲು ತೆರಳುವ ವೇಳೆ ಘಟನೆ ಜರುಗಿದೆ.
ರೌಡಿಪಟ್ಟಿ:ಒಂದೆರಡು ತಿಂಗಳ ಹಿಂದೆ ದೇಗುಲದ ಆವರಣದಲ್ಲಿ ಗಾಂಜಾ ಸೇವಿಸು ತ್ತಿದ್ದ ಕೆಲ ಯುವಕರಿಗೆ ಕದಿರೇಶ್ ಹೊಡೆದು ಇನ್ನೊಮ್ಮೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದ್ದರು. ಇದೇ ವಿಚಾರವಾಗಿ ಆ ಯುವಕರು ಮತ್ತು ಕದಿರೇಶ್ ನಡುವೆ ಬಹಳಷ್ಟು ಬಾರಿ ಗಲಾಟೆಯಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿಗಳು ಹತ್ಯೆ ಮಾಡಿರುವ ಶಂಕೆಯಿದೆ. ಜೋಪಡಿ ರಾಜೇಂದ್ರ, ಗಾರ್ಡನ್ ದಾಸ, ಕೊಲೆ ಪ್ರಕರಣದ ಆರೋಪಿ ಯಾಗಿದ್ದ ಕದಿರೇಶ್ ವಿರುದ್ಧ 2002ರಲ್ಲಿ ಕಾಟನ್ ಪೇಟೆಯಲ್ಲಿ ರೌಡಿಪಟ್ಟಿ ತೆರೆಯಲಾಗಿದೆ.
ತಂಡ ರಚನೆ: ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್, ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ಕೆ. ಸಿಂಗ್, ದಕ್ಷಿಣ ವಿಭಾಗ ಡಿಸಿಪಿ ಡಾ ಶರಣಪ್ಪ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಎಸಿಪಿ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ಹೇಳಿದರು. ಘಟನೆ ಸಂಬಂಧ ಬಿಜೆಪಿ ಮುಖಂಡರಾದ ಎಂ.ಆರ್.ರಮೇಶ್ ಇತರರು ಸ್ಥಳಕ್ಕೆ ಭೇಟಿ ನೀಡಿದ್ದು, ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಆರೋಪ ಮಾಡಿದ್ದಾರೆ.
ಕೊಲೆ ಬಗ್ಗೆ ಮೊದಲೇ ಸುಳಿವು
ಕದಿರೇಶ್ ತನ್ನ ರಾಜಕೀಯ ಚಟುವಟಿಕೆಗಳು ಹಾಗೂ ವರ್ಚಸ್ಸು ಹೆಚ್ಚಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಈತನ ಕೊಲೆಗೆ ಮೊದಲೇ ಒಂದು ತಂಡ ಹತ್ಯೆಗೆ ಸಂಚು ರೂಪಿಸಿತ್ತು ಎಂಬ ಮಾಹಿತಿ ಬಹಿರಂಗಗೊಂಡಿದೆ. ಈ ಬಗ್ಗೆ ಖುದ್ದು ಪೊಲೀಸರೇ ಕದಿರೇಶ್ಗೆ ಎಚ್ಚರಿಕೆ ನೀಡಿದ್ದು, ಕಾಟನ್ ಪೇಟೆ ಕಡೆ ಒಂಟಿಯಾಗಿ ಹೆಚ್ಚು ಓಡಾಡದಂತೆ ಸೂಚಿಸಿದ್ದರು. ಹೀಗಾಗಿ ಕದಿರೇಶ್ ಕೆಲ ಯುವಕರನ್ನು ಭದ್ರತೆಗೆ ನೇಮಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದರು.
ಆಟೋದಲ್ಲಿ ಬಂದ ನಾಲ್ವರ ಪೈಕಿ ನವೀನ್, ವಿನಯ್ ಮಚ್ಚಿನಿಂದ ಮಾವನನ್ನು ಕೊಲೆ ಮಾಡಿದ್ದಾರೆ. ನಾವು ಅವರನ್ನು ಓಡಿಸಿಕೊಂಡು ಹೋದೆವು. ಆದರೆ ಹಲ್ಲೆಗೆ ಒಳಗಾಗಿದ್ದ ಮಾವ ಕದಿರೇಶ್ ಕೆಳಗೆ ಬಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಲು ವಾಪಸ್ ಆದ ಕಾರಣ ಆರೋಪಿಗಳನ್ನು ಹಿಡಿಯಲು ಸಾಧ್ಯವಾಗಲಿಲ್ಲ.
ಅಪ್ಪು, ಕದಿರೇಶ್ ಭಾಮೈದ, ಪ್ರತ್ಯಕ್ಷ ದರ್ಶಿ
ಕೊಲೆ ಹಿಂದೆ ಪ್ರೇಮ ಪ್ರಕರಣ?
ಕದಿರೇಶ್ ಸಹೋದರಿಯ ಪುತ್ರಿ ಹಾಗೂ ಆರೋಪಿ ನವೀನ್ ಪ್ರೀತಿಸುತ್ತಿದ್ದರು. ವರ್ಷದ ಹಿಂದೆ ಸಹೋದರಿಯ ಪುತ್ರಿ
ನವೀನ್ ಜತೆ ಓಡಿ ಹೋಗಿದ್ದರು. ಬಳಿಕ ಕದಿರೇಶ್ ನವೀನ್ಗೆ ಕರೆ ಮಾಡಿ ಮದುವೆ ಮಾಡುವುದಾಗಿ ವಾಪಸ್ ಕರೆಸಿಕೊಂಡಿದ್ದರು. ಆದರೆ, ಮದುವೆ ಮಾಡಿಸದ ಕದಿರೇಶ್ ಕೆಲ ಯುವಕರನ್ನು ಬಿಟ್ಟು ನವೀನ್ಗೆ ಹೊಡೆಸಿದ್ದಾರೆ ಎನ್ನಲಾಗಿದೆ. ಇದೇ ವೈಷಮ್ಯದಿಂದ ಕದಿರೇಶ್ನನ್ನು ನವೀನ್ ಮತ್ತು ಸಹೋದರ ವಿನಯ್ ಹಾಗೂ ಇತರರರು ಸೇರಿ ಕೊಲೆಗೈದಿರುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಛಲವಾದಿ ಪಾಳ್ಯದಲ್ಲಿ ಆತಂಕದ ವಾತಾವರಣ ಹತ್ತಾರು ಮಂದಿ ಎದುರಲ್ಲೇ ದಾರುಣವಾಗಿ ಹತ್ಯೆಯಾದ ಕದಿರೇಶ್ ಪ್ರಕರಣದಿಂದ ಛಲವಾದಿಪಾಳ್ಯ ಹಾಗೂ ಕಾಟನ್ಪೇಟೆ ಸುತ್ತ ಮುತ್ತ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಇದರಿಂದ ರೊಚ್ಚಿಗೆದ್ದ ನೂರಾರು ಮಂದಿ ರೇಖಾ ಬೆಂಬಲಿಗರು ಕೊಲೆ ಆರೋಪಿಗಳ ಮನೆಗೆ ನುಗ್ಗಲು ಯತ್ನಿಸಿದರಾದರೂ ಅಷ್ಟರಲ್ಲಿ ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ಎಲ್ಲರನ್ನು ಸಮಾಧಾನ ಪಡಿಸಿ ಭಾರೀ ಅನಾಹುತ ತಪ್ಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಛಲವಾದಿ ಪಾಳ್ಯ, ಕಾಟನ್ಪೇಟೆ, ವಿಕ್ಟೋರಿಯಾ ಆಸ್ಪತ್ರೆ ಬಳಿ ಸಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ.
ಸಂತೋಷದ ವಿಷಯಕ್ಕಿಂತ ದುಃಖಕರ ವಿಷಯಗಳಿಗೆ ಮತ್ತೆ ಟ್ವಿಟ್ ಮಾಡಬೇಕಾಗುವುದು ಖೇದಕರ. ಬಿಜೆಪಿಯ ಬಿಬಿಎಂಪಿ ಸದಸ್ಯೆ ರೇಖಾ ಪತಿ ಕದಿರೇಶ್ ಇಂದು ಹತ್ಯೆಗೀಡಾಗಿದ್ದಾರೆ. ಕೆಟ್ಟ ಆಡಳಿತ, ಹದಗೆಟ್ಟ ಕಾನೂನು, ನೈತಿಕವಾಗಿ ಕುಗ್ಗಿರುವ ಪೊಲೀಸ್ ಇಲಾಖೆ. ಗೃಹ ಮಂತ್ರಿಗಳೇ ಮಾತಾಡಿ.
ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ
ಬಿಜೆಪಿ ಕಾರ್ಪೊರೇಟರ್ ರೇಖಾ ಅವರ ಪತಿ ಕದಿರೇಶ್ರನ್ನು ಹತ್ಯೆಗೈದಿರುವುದು ದುರದೃಷ್ಟಕರ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವು ದನ್ನು ಈ ಘಟನೆ ಸಾರಿ ಹೇಳುತ್ತಿದೆ. ಬೆಂಗಳೂರಿನಲ್ಲಿ 3 ದಿನದಲ್ಲಿ ಹಾಡ ಹಗಲೇ ನಡೆದ 2ನೇ ಕೊಲೆ ಇದಾಗಿದೆ.
ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ
ಕದಿರೇಶ್ ಬಹಳ ವರ್ಷಗಳಿಂದ ಪರಿಚಯ. ಈ ಮೊದಲು ಪಾಲಿಕೆ ಸದಸ್ಯರಾಗಿದ್ದರು. ಈಗ ಅವರ ಪತ್ನಿ ಆಯ್ಕೆಯಾಗಿದ್ದಾರೆ. ತನಗೆ ಜೀವ ಭಯ ಇದೆ ಎಂದು ಅವರು ನನ್ನ ಬಳಿ ಹೇಳಿಕೊಂಡಿದ್ದರೆ ರಕ್ಷಣೆ ಕೊಡುತ್ತಿದ್ದೆವು. ಕದಿರೇಶ್ಗೆ ಚೆನ್ನಾಗಿ ಗೊತ್ತಿದ್ದವರೇ ಕೊಲೆ ಮಾಡಿದ್ದಾರೆ. ನವೀನ್ ಮತ್ತು ವಿನಯ್ ಅವರ ಏರಿಯಾದವರೇ. ಯಾವ ಕಾರಣಕ್ಕೆ ಕೊಲೆ ಮಾಡಿದ್ದಾರೆ ಎನ್ನುವುದು ತನಿಖೆ ಬಳಿಕ ಗೊತ್ತಾಗಲಿದೆ.
ರಾಮಲಿಂಗಾರೆಡ್ಡಿ,ಗೃಹ ಸಚಿವರು.
ಕದಿರೇಶ್ ಹತ್ಯೆಗೆ ಆಶೋಕ್ ಖಂಡನೆ
ಕಾರ್ಪೋರೇಟರ್ ಪತಿ ಕದಿರೇಶ್ ಹತ್ಯೆ ಖಂಡಿಸಿರುವ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಕಾಂಗ್ರೆಸ್ ಸರ್ಕಾರದಲ್ಲಿ ಈಸ್ ಆಫ್ ಡೂಯಿಂಗ್ ಮರ್ಡರ್ ಬಗ್ಗೆ ಚರ್ಚೆ ನಡೆಯುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಆರೋಪ ಸಾಬೀತಾಗಿದೆ ಎಂದು ಹೇಳಿದ್ದಾರೆ. ಕಳೆದ ಒಂದು ವಾರದಲ್ಲಿ ನಗರದಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರ ಹತ್ಯೆಯಾಗಿದೆ. ಕೆಲ ದಿನಗಳ ಹಿಂದೆ ಸಂತೋಷ್ನನ್ನು ಕೊಲೆ ಮಾಡಿದ್ದರೆ, ಈ ಬಾರಿ ದಲಿತ ಮುಖಂಡ, ಕದಿರೇಶ್ ಅವರನ್ನು ಹಾಡ ಹಗಲೇ ಹತ್ಯೆ ಮಾಡಲಾಗಿದೆ. ಆದರೆ, ಇದನ್ನು ನಿಯಂತ್ರಿಸಬೇಕಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಪ್ರಧಾನಿ ನರೇಂದ್ರ ಮೋದಿ ಮಾಡಿದ ಆರೋಪಗಳಿಗೆ ಸುಳ್ಳು ಮಾಹಿತಿಗಳೊಂದಿಗೆ ಸಾಧನೆಗಳನ್ನು ಹೇಳಿಕೊಳ್ಳುವ ಟ್ವೀಟ್ನಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ