ಬಿಜೆಪಿ ಪ್ರಯತ್ನಕ್ಕೆ ಮಾನ್ಯತೆ ಸಿಗಲ್ಲ: ದಿನೇಶ್
Team Udayavani, Sep 21, 2018, 6:50 AM IST
ಬೆಂಗಳೂರು: ಸಮ್ಮಿಶ್ರ ಸರ್ಕಾರ ಬೀಳಿಸಲು ಬಿಜೆಪಿ ತನ್ನ ಪ್ರಯತ್ನ ಮುಂದುವರಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಸರ್ಕಾರ ರಚನೆಯ ಹಗಲು ಗನಸು ಕಾಣುತ್ತಿದ್ದು ಅವರ ಪ್ರಯತ್ನಕ್ಕೆ ಮಾನ್ಯತೆ ಸಿಗುವುದಿಲ್ಲ ಎಂದು ಹೇಳಿದರು.
ಇದೇ ವೇಳೆ ದಂಗೆ ಹೇಳುವ ಹೇಳಿಕೆ ವಿಚಾರ ಸಮರ್ಥಿಸಿಕೊಂಡ ದಿನೇಶ್ ಗುಂಡೂರಾವ್, ಮುಖ್ಯಮಂತ್ರಿಯವರಿಗೆ ಎಲ್ಲ ಕಡೆಯಿಂದ ಟಾರ್ಚರ್ ನೀಡಲಾಗುತ್ತಿದೆ. ಪ್ರತಿದಿನ ಸರ್ಕಾರ ಬೀಳಿಸುವ ಯತ್ನ ನಡೆಯುತ್ತಿದೆ. ಇದರಿಂದ ಬೇಸರಗೊಂಡು ಮುಖ್ಯಮಂತ್ರಿಯವರು ಭಾವನಾತ್ಮಕವಾಗಿ ಹೇಳಿಕೆ ಕೊಟ್ಟಿರಬಹುದು ಎಂದು ತಿಳಿಸಿದರು.
ಸಮ್ಮಿಶ್ರ ಸರ್ಕಾರ ಪತನಗೊಳಿಸುವ ಹುನ್ನಾರ ಪ್ರಧಾನಿ ನರೇಂದ್ರಮೋದಿ ಹಾಗೂ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಅವರಿಂದ ನಡೆಯುತ್ತಿದೆ ಎಂದು ದೂರಿದರು.
ರಮೇಶ್ ಜಾರಕಿಹೊಳಿ ಸೇರಿದಂತೆ ಕಾಂಗ್ರೆಸ್ನ ಯಾರೂ ಬಿಜೆಪಿಗೆ ಹೋಗುವುದಿಲ್ಲ. ಇದ್ದ ಸಣ್ಣಪುಟ್ಟ ಸಮಸ್ಯೆ ಎಲ್ಲವೂ ಬಗೆಹರಿದಿದೆ ಎಂದು ಹೇಳಿದರು.
ಶಾಸಕರು ಸಹ ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡಬಾರದು ಎಂದು ಸೂಚಿಸಲಾಗಿದೆ. ಪಕ್ಷದ ಶಿಸ್ತು ಉಲ್ಲಂ ಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಸಂಫುಟ ವಿಸ್ತರಣೆ ಅ.4 ರ ವಿಧಾನಪರಿಷತ್ ಚುನಾವಣೆ ನಂತರ ಆಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಹೈಕಮಾಂಡ್ ಜತೆ ಚರ್ಚಿಸಿದ್ದು ಶುಕ್ರವಾರ ಅಂತಿಮಗೊಳ್ಳಲಿದೆ ಎಂದರು.
ಕಾಂಗ್ರೆಸ್-ಜೆಡಿಎಸ್ ಶಾಸಕರು ರೆಸಾರ್ಟ್ಗೆ ಹೋಗ್ತಾರೆ, ಮಹಾರಾಷ್ಟ್ರ ಹೋಗ್ತಾರೆ ಎಂಬೆಲ್ಲಾ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. ಮಾಧ್ಯಮಗಳಿಗೂ ದೊಡ್ಡ ಜವಾಬ್ದಾರಿ ಇದೆ.ಅನಾವಶ್ಯಕವಾಗಿ ಯಾವುದೇ ದಾಖಲೆ ಇಲ್ಲದೆ ಇಂಥದ್ದನ್ನು ಯಾಕೆ ಹಾಕ್ತಾರೆ? ಕೆಲ ಮಾಧ್ಯಮಗಳನ್ನು ಪ್ರಶ್ನೆ ಮಾಡಬೇಕಾಗುತ್ತದೆ.ರಾಜ್ಯದ ಆಡಳಿತ ಕುಸಿತಕ್ಕೆ ನೀವು ಭಾಗಿದಾರರ ಅಂತ ಪ್ರಶ್ನೆ ಮಾಡಬೇಕಾಗುತ್ತದೆ ಎಂದರು. ಇದಕ್ಕೆ ಗೋಷ್ಠಿಯಲ್ಲಿ ಹಾಜರಿದ್ದ ವರದಿಗಾರರು ಆಕ್ಷೇಪ ವ್ಯಕ್ತಪಡಿಸಿ ನಿಮ್ಮದೇ ಪಕ್ಷದ ಶಾಸಕರು-ನಾಯಕರು ಗೊಂದಲ ಸೃಷ್ಟಿಸುತ್ತಿದ್ದಾರೆ. ನೀವೇಕೆ ಮಾಧ್ಯಮಗಳ ಮೇಲೆ ಆರೋಪ ಮಾಡ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.