ಮುಂದಿನ ವಾರ ಸಂಪುಟ ವಿಸ್ತರಣೆ
Team Udayavani, May 31, 2018, 6:30 AM IST
ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದಲ್ಲಿ ಖಾತೆ ಹಂಚಿಕೆ ಗೊಂದಲಕ್ಕೆ ಬಹುತೇಕ ತೆರೆ ಬಿದ್ದಿದೆಯಾದರೂ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಏಕೋ ಕಾಲ ಕೂಡಿ ಬರುತ್ತಿಲ್ಲ. ಹೀಗಾಗಿ ಸಂಪುಟ ವಿಸ್ತರಣೆ ಮುಂದಿನ ವಾರ ನಡೆಯುವ ಸಾಧ್ಯತೆ ಇದೆ.
ಶನಿವಾರ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುತ್ತದೆ ಎಂದು ಹೇಳಲಾಗುತ್ತಿತ್ತಾದರೂ ವಿದೇಶದಲ್ಲಿರುವ ರಾಹುಲ್ ಗಾಂಧಿ ವಾಪಸಾದ ಬಳಿಕವೇ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು
ಕಾಂಗ್ರೆಸ್ ಮೂಲಗಳು ಹೇಳಿವೆ.
ರಾಹುಲ್ ಗಾಂಧಿ ಅವರು ಸೋಮವಾರ ಹಿಂತಿರುಗಲಿದ್ದಾರೆ. ಹೀಗಾಗಿ, ಬುಧವಾರ ಹೊಸ ಸಚಿವರು ಪದಗ್ರಹಣ
ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಮುಖ ಖಾತೆಗಳ ಹಂಚಿಕೆಗೆ ಸಂಬಂಧಿಸಿದಂತೆ ಈಗಾಗಲೇ ಎರಡೂ
ಪಕ್ಷಗಳು ಹೊಂದಾಣಿಕೆಗೆ ಬಂದಿವೆ. ಹಣಕಾಸು ಇಲಾಖೆಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಉಳಿಸಿಕೊಳ್ಳುತ್ತಿದ್ದಾರೆ. ಇನ್ನುಳಿದ ಖಾತೆಗಳ ಹಂಚಿಕೆಯೂ ಆಗಿದೆ. ಹೀಗಾಗಿ ಶನಿವಾರ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಖಾತೆಗಳ ಹಂಚಿಕೆ ಬಗ್ಗೆ ಸಣ್ಣ ಮಟ್ಟಿನ ಗೊಂದಲ ಇನ್ನೂ ಉಳಿದಿದೆ. ಅಲ್ಲದೆ, ಕಾಂಗ್ರೆಸ್ನಲ್ಲಿ ಪ್ರಮುಖ ಖಾತೆಗಳಿಗಾಗಿ ಲಾಬಿ ತೀವ್ರಗೊಳ್ಳುತ್ತಿದೆ.
ಹೀಗಾಗಿ, ರಾಹುಲ್ ಗಾಂಧಿ ವಿದೇಶದಿಂದ ಮರಳಿದ ಬಳಿಕ ಅವರೊಂದಿಗೆ ಅಂತಿಮವಾಗಿ ಚರ್ಚಿಸಿ ನಂತರ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ಏರ್ಪಡಿಸಲಾಗುವುದು ಎಂದು ಮೂಲಗಳು ಹೇಳಿವೆ.