ಮಕ್ಕಳ ಸಾವು: ಸತ್ಯಶೋಧನಾ ಸಮಿತಿ ರಚಿಸಿದ ರಾಜ್ಯ ಬಿಜೆಪಿ
Team Udayavani, Aug 25, 2017, 7:45 AM IST
ಬೆಂಗಳೂರು: ಕೋಲಾರದ ಎಸ್ಸೆನ್ನಾರ್ ಆಸ್ಪತ್ರೆಯಲ್ಲಿ ನಡೆದ ಮಕ್ಕಳ ಸಾವು ಪ್ರಕರಣದ ಪರಿಶೀಲನೆಗೆ ಸತ್ಯಶೋಧನಾ ತಂಡ
ಕಳುಹಿಸಿಕೊಟ್ಟಿರುವ ರಾಜ್ಯ ಬಿಜೆಪಿ, ಇದೀಗ ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಭವಿಸಿದೆ ಎನ್ನಲಾದ ನವಜಾತ ಶಿಶುಗಳ ಸಾವಿನ ಪ್ರಕರಣಗಳ ಪರಿಶೀಲನೆಗೆ ಪ್ರತ್ಯೇಕ ಸತ್ಯಶೋಧನಾ ತಂಡ ರಚಿಸಿದೆ.
ಬಿಜೆಪಿ ರಾಜ್ಯ ವಕ್ತಾರ, ಶಾಸಕ ಎಸ್.ಸುರೇಶ್ಕುಮಾರ್ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಿ ಪಕ್ಷದ ರಾಜ್ಯಾಧ್ಯಕ್ಷ
ಬಿ.ಎಸ್.ಯಡಿಯೂರಪ್ಪ ಗುರುವಾರ ಆದೇಶ ಹೊರಡಿಸಿದ್ದಾರೆ. ಈ ತಂಡವು ಕೋಲಾರ ಮಾತ್ರವಲ್ಲದೆ, ಕಲಬುರಗಿ, ಬೀದರ್,ರಾಯಚೂರು, ಕೊಪ್ಪಳ ಸೇರಿ ಮಕ್ಕಳ ಸಾವು ಸಂಭವಿಸಿದ ಜಿಲ್ಲೆಗಳಿಗೆ ಭೇಟಿ ನೀಡಿ ವಸ್ತುಸ್ಥಿತಿಯ ಅಧ್ಯಯನ ಮಾಡಲಿದೆ.
ಸುರೇಶ್ಕುಮಾರ್ ಅವರು ಸತ್ಯಶೋಧನಾ ಸಮಿತಿಯ ಸಂಚಾಲಕರಾಗಿದ್ದು, ಸಂಸದರಾದ ಪಿ.ಸಿ.ಮೋಹನ್, ಕರಡಿ ಸಂಗಣ್ಣ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ರಾಜ್ಯ ವಕ್ತಾರ ಅಶ್ವತ್ಥ ನಾರಾಯಣ, ಸಹ ವಕ್ತಾರ ಎಸ್.ಪ್ರಕಾಶ್, ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ್, ಶಾಸಕ ತಿಪ್ಪರಾಜು, ರಾಯಚೂರಿನ ಡಾ.ಬಸವರಾಜ ಸಜ್ಜನ, ಬೆಂಗಳೂರಿನ ಡಾ.ಪದ್ಮಾ ಪ್ರಕಾಶ್, ಕಲಬುರಗಿಯ ಡಾ.ಪ್ರಶಾಂತ್ ಕಮಲಾಪುರ್ಕರ್
ಸಮಿತಿಯಲ್ಲಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸಾ ಸೌಲಭ್ಯ ಇಲ್ಲದ ಕಾರಣ ಇಂತಹ ಘಟನೆ ನಡೆಯುತ್ತಿದ್ದು, ಆರೋಗ್ಯ ಇಲಾಖೆ ಮೇಲೆ ಜನರಿಗೆ ವಿಶ್ವಾಸ ದೂರವಾಗುತ್ತಿದೆ. ಸರ್ಕಾರ ಮತ್ತು ಆರೋಗ್ಯ ಸಚಿವರು ಕೇವಲ ಹೇಳಿಕೆಗಳ ಮೂಲಕ ಇದನ್ನು ನಿಯಂತ್ರಣಕ್ಕೆ ತರಬಹುದು ಎಂಬ ಭ್ರಮೆಯಲ್ಲಿದ್ದಾರೆ. ಇಷ್ಟೊಂದು ಮಕ್ಕಳು ಬಲಿಯಾದರೂ ಸರ್ಕಾರ ಚುರುಕುಗೊಳ್ಳದ ಕಾರಣ ಸತ್ಯಶೋಧನಾ ಸಮಿತಿ ರಚಿಸಲಾಗಿದೆ.
– ಆರ್.ಅಶೋಕ್, ವಿಧಾನಸಭೆ ಪ್ರತಿಪಕ್ಷ ಉಪನಾಯಕ