ವಿಮರ್ಶಕರ ಹಂಗಿಲ್ಲದೆ ಓದುಗರ ತಲುಪಿದ ಚಿತ್ತಾಲ
Team Udayavani, Aug 12, 2018, 12:11 PM IST
ಬೆಂಗಳೂರು: ವಿಮರ್ಶಕರ ಹಂಗಿಲ್ಲದೆ ಓದುಗರನ್ನು ತಲುಪಿದ ಕಾದಂಬರಿಕಾರ ಅಂದರೆ ಅದು ಯಶವಂತ ಚಿತ್ತಾಲ ಎಂದು ಸಾಹಿತಿ ಜಯಂತ ಕಾಯ್ಕಿಣಿ ಬಣ್ಣಿಸಿದ್ದಾರೆ. ಕೆಪಿಟಿಸಿಎಲ್ ಲೆಕ್ಕಾಧಿಕಾರಿಗಳ ಸಂಘದ ವತಿಯಿಂದ ಆಯೋಜಿಸಿದ್ದ “ಯಶವಂತ ಚಿತ್ತಾಲರ ಬದುಕು ಬರಹ’ ಕುರಿತ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು.
ಚಿತ್ತಾಲರು ವಿಮರ್ಶಕರ ಹಂಗಿಲ್ಲದೆ ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದರು. ಇವರ ಶಿಕಾರಿ ಕಾದಂಬರಿ ಸಾಕಷ್ಟು ಜನಪ್ರಿಯವಾಯಿತು. ಈ ವೇಳೆ ಅವರ ವಿರುದ್ಧ ಪತ್ರಿಕೆಯೊಂದರಲ್ಲಿ ವಿಮರ್ಶೆ ಬರೆಸಲಾಯಿತು. ಈ ಸತ್ಯವನ್ನು ಇತ್ತೀಚೆಗಷ್ಟೇ ಆ ವಿಮರ್ಶೆ ಬರೆದವರು ತಮ್ಮ ಬಳಿ ನೋವಿನಿಂದ ಹೇಳಿಕೊಂಡಿದ್ದರು ಎಂದು ತಿಳಿಸಿದರು.
ಬಾಂಬೆಯಲ್ಲಿ ಚಿತ್ತಾಲರೊಂದಿಗೆ ಕಳೆದ ದಿನಗಳನ್ನು ಮೆಲುಕು ಹಾಕಿದ ಅವರು, ಚಿತ್ತಾಲರು ಭಾವ ಜೀವಿಯಾಗಿದ್ದರು. ಹಿರಿಯರು, ಕಿರಿಯರು ಎನ್ನದೇ ಎಲ್ಲರನ್ನೂ ಒಂದೆ ಸಮನಾಗಿ ಕಾಣುವ ಮನುಷ್ಯತ್ವದ ದೊಡ್ಡಗುಣ ಅವರಲ್ಲಿ ಅಡಕವಾಗಿತ್ತು ಎಂದು ಹೇಳಿದರು.
ನಾವು ಮನುಷ್ಯರಾಗಿ ಹುಟ್ಟಿಲ್ಲ, ಮನುಷ್ಯರಾಗಲು ಹುಟ್ಟಿದ್ದೇವೆ ಎಂದು ಚಿತ್ತಾಲರು ಆಗಾಗ ಹೇಳುತ್ತಿದ್ದರು. ಅವರ ಈ ಮಾತಿನಲ್ಲಿ ಒಳಾರ್ಥವಿದೆ. ನಾವು ಮನುಷ್ಯರು ಎಂದು ಹೇಳುವುದೇ ದೊಡ್ಡ ತಪ್ಪು, ಬದುಕನ್ನು ಪ್ರೀತಿಸುವುದರ ಮೂಲಕ ನಾವು ಮನುಷ್ಯರಾಗಬೇಕು ಎಂದರು.
ಚಿತ್ತಾಲರ ಮನೆ ಸಾಹಿತ್ಯದ ತಾಣ: ಚಿತ್ತಾಲರ ಬಾಂಬೆ ಮನೆ ಸಾಹಿತ್ಯದ ತಾಣವಾಗಿತ್ತು. ನಮ್ಮ ಸ್ನೇಹತರ ತಂಡ ವಾರದ ಕೊನೆಯಲ್ಲಿ ಅಲ್ಲಿ ಸೇರುತ್ತಿತ್ತು. ಸಾಹಿತ್ಯದ ಕುರಿತಾದ ವಿಚಾರಗಳನ್ನೇ ಮಾತನಾಡುತ್ತಿದ್ದೆವು. ಚಿತ್ತಾಲರು ತಮ್ಮ ಶಿಕಾರಿ, ಕೇಂದ್ರವೃತ್ತಾಂತ ಕಾದಂಬರಿ ಸೇರಿದಂತೆ ಹಲವು ಕಾದಂಬರಿಗಳನ್ನು ನಮಗೆ ಹೇಳುತ್ತಿದ್ದರು.
ಗೋಪಾಲಕೃಷ್ಣ ಅಡಿಗರು ಸೇರಿದಂತೆ ಹಲವು ಹೆಸರಾಂತ ಕನ್ನಡ ಸಾಹಿತಿಗಳು ಇಲ್ಲಿ ಸೇರುತ್ತಿದ್ದರು. ಹೀಗಾಗಿ ಕನ್ನಡ ಹೆಸರಾಂತ ಸಾಹಿತಿಗಳನ್ನು ಹತ್ತಿರದಿಂದ ನೋಡುವ ಸೌಭಾಗ್ಯ ನನಗೆ ಒದಗಿತ್ತು ಎಂದರು. ಇತ್ತೀಚಿನ ದಿನಗಳಲ್ಲಿ ಫಲಾಪೇಕ್ಷೆಯನ್ನಷ್ಟೇ ಬಯಸುವ ಪ್ರಕಾಶಕರು ಹುಟ್ಟಿಕೊಂಡಿದ್ದಾರೆ. ಇಂತವರಿಂದ ಉತ್ತಮ ಪುಸ್ತಕಗಳು ಮರು ಮುದ್ರಣ ಕಾಣುವುದು ಅಸಾಧ್ಯ.
ಒಳ್ಳೇಯ ಪ್ರಕಾಶಕರು ಸಾಹಿತಿಯೊಬ್ಬರ ಕೃತಿಗಳು ಖರ್ಚಾದ ತಕ್ಷಣವೆ ಮತ್ತೆ ಮರು ಮುದ್ರಣ ಮಾಡುತ್ತಾರೆ. ಕೃತಿಕಾರ ನಿಧನದ ನಂತರವೂ ಅದನ್ನು ಮುಂದುವರಿಸುತ್ತಾರೆ. ಆದರೆ ಈ ಮನೋಭಾವನೆ ಕಡಿಮೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕೆಪಿಟಿಸಿಎಲ್ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಎಚ್.ಸಿ.ಮುಕುಂದ್, ಮಾಜಿ ಅಧ್ಯಕ್ಷ ರಾಮನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ