ಯಶಸ್ವಿನಿಗೆ ಸಿಎಂ ಗ್ರೀನ್ಸಿಗ್ನಲ್
Team Udayavani, May 31, 2018, 6:00 AM IST
ಬೆಂಗಳೂರು: ಯಶಸ್ವಿನಿ ಯೋಜನೆ ಮುಂದುವರಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ, ಮೇ 31ಕ್ಕೆ ಯಶಸ್ವಿನಿ ಯೋಜನೆ ಮುಗಿಯಲಿದೆ ಎಂದು ರೈತ ಮುಖಂಡರು ಪ್ರಸ್ತಾಪಿಸಿದಾಗ ಮಧ್ಯಪ್ರವೇಶಿಸಿದ ಸಿಎಂ ಕುಮಾರಸ್ವಾಮಿ, ಮಂಗಳವಾರ ಆರೋಗ್ಯ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ಯಶಸ್ವಿನಿ ಯೋಜನೆ ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಸಹಕಾರ ಸಂಘಗಳ ಸದಸ್ಯರು ಹಾಗೂ ಸ್ತ್ರೀಶಕ್ತಿ ಗುಂಪುಗಳ ಸದಸ್ಯರ ಪಾಲಿಗೆ ಸಂಜೀವಿನಿಯಾಗಿದ್ದ ಯಶಸ್ವಿನಿ ಆರೋಗ್ಯ ವಿಮೆ ಮೇ 31ಕ್ಕೆ ಅಂತ್ಯವಾಗಲಿದ್ದು, ಸಾರ್ವತ್ರಿಕ ಆರೋಗ್ಯ ಯೋಜನೆಯಡಿ ಅದನ್ನು ವಿಲೀನಗೊಳಿಸಿ ಜಾರಿಯಾ ಗಲಿದೆ ಎಂದು ಹೇಳಲಾಗಿತ್ತು.
ನೂತನ ಆರೋಗ್ಯ ವಿಮಾ ಯೋಜನೆಗೆ ನೆಟ್ವರ್ಕ್ ಆಸ್ಪತ್ರೆಗಳ ಗುರುತಿಸುವಿಕೆಗೆ 2018ರ ಡಿ.31ರ ವರೆಗೆ ಸಮಯ ನಿಗದಿ ಮಾಡಲಾಗಿತ್ತು. ಹೀಗಾಗಿ, ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಆಗುವವರೆಗೆ ಚಿಕಿತ್ಸೆಗೆ ಪರ್ಯಾಯ ವ್ಯವಸ್ಥೆ ಏನು? ಎಂದು ಗ್ರಾಮೀಣ ಪ್ರದೇಶದ ರೈತಾಪಿ ಸಮುದಾಯ ಆತಂಕಗೊಂಡಿತ್ತು. ಜತೆಗೆ ಹೊಸ ಆರೋಗ್ಯ ಸೇವೆ ಯೋಜನೆಯಡಿ ಕಿಸೆಯಿಂದ ಹಣ ಪಾವತಿಸಬೇಕಾಗಬಹುದು ಎಂಬ ಅನುಮಾನವಿತ್ತು. ಆದರೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಯಶಸ್ವಿನಿ ಮುಂದುವರಿಯಲಿದೆ ಎಂದು ಹೇಳಿರುವುದರಿಂದ ನಿಟ್ಟುಸಿರು ಬಿಟ್ಟಂತಾಗಿದೆ.
ಏನಿದು ಯಶಸ್ವಿನಿ?:
ಯಶಸ್ವಿನಿ ಗ್ರಾಮೀಣ, ನಗರ ಸಹಕಾರಿಗಳ ಆರೋಗ್ಯ ರಕ್ಷಕ ಯೋಜನೆ. ಗ್ರಾಮೀಣ ಸ್ತ್ರೀಶಕ್ತಿ ಗುಂಪು, ಸ್ವ ಸಹಾಯ ಗುಂಪಿನ ಸದಸ್ಯ, ಸಹಕಾರ ಸಂಘದಸದಸ್ಯ ಹಾಗೂ ಅವರ ಕುಟುಂಬದ ಎಲ್ಲ ಸದಸ್ಯರು ಯೋಜನೆಯ ಫಲಾನುಭವಿಗಳಾಗಬಹುದು.
ಯೋಜನೆಯಡಿ 525 ನೆಟ್ವರ್ಕ್ ಆಸ್ಪತ್ರೆಗ ಳಲ್ಲಿ 823 ಶಸ್ತ್ರಚಿಕಿತ್ಸೆ ಸೌಲಭ್ಯ ಪಡೆಯಬಹುದಾ ಗಿತ್ತು. ಸರ್ಕಾರವೇ ಆಸ್ಪತ್ರೆಗಳಿಗೆ ಹಣ ಪಾವತಿ ಸುತ್ತಿತ್ತು. 2003ರಿಂದ ಜಾರಿಗೆ ಬಂದ ಯಶಸ್ವಿ ನಿಯಲ್ಲಿ ಗ್ರಾಮೀಣ ಭಾಗದಲ್ಲಿ ವಾರ್ಷಿಕ 250ರೂ. ವಂತಿಗೆ ಪಾವತಿಸಿ ವರ್ಷದಲ್ಲಿ ಒಂದು ಬಾರಿ ಗರಿಷ್ಠ ಮಿತಿ 1.25 ಲಕ್ಷ ರೂ.ವರೆಗಿನ ನಗದು ರಹಿತ ಚಿಕಿತ್ಸೆ ಪಡೆದುಕೊಳ್ಳಬಹುದು. ವರ್ಷದಲ್ಲಿ 2 ಬಾರಿ ಚಿಕಿತ್ಸೆಗೆ ದಾಖಲಾಗುವ ಪ್ರಸಂಗ ಬಂದರೆ ನಗದು ರಹಿತ ಮಿತಿ 2 ಲಕ್ಷ ರೂ.ವರೆಗೆ ಇದೆ.