ರಾಜಕಾರಣಿಗಳಿಂದ ದೇಶ ಉದ್ದಾರವಾಗಲ್ಲ!
Team Udayavani, Aug 10, 2018, 12:13 PM IST
ಯಲಹಂಕ: “ಅಪ್ಪ-ಅಮ್ಮನ ಆಣೆಯಾಗಿಯೂ ರಾಜಕಾರಣಿಗಳಿಂದ ಈ ದೇಶ ಉದ್ಧಾರ ಆಗುವುದಿಲ್ಲ’ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಹೇಳಿದರು.
ಯಲಹಂಕ ಸಮೀಪದ ರೇವಾ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಗುರುವಾರ ಮಾತನಾಡಿದ ಅವರು, “ದೇಶ ಅಭಿವೃದ್ಧಿ ಆಗಬೇಕಾದರೆ, ನಿಮ್ಮಂತಹ ವಿದ್ಯಾರ್ಥಿಗಳು ಮುಂದೆಬರಬೇಕು. ರಾಜಕಾರಣಿಗಳಿಂದ ಈ ದೇಶ ಮುಂದೆ ಬರಲು ಸಾಧ್ಯವಿಲ್ಲ. ದೇಶವನ್ನು ಅವರು ಉದ್ಧಾರ ಮಾಡುವುದೂ ಇಲ್ಲ’ ಎಂದರು.
ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಭಾಷಣ ಮಾಡುತ್ತಲೇ ಕೊನೆಯುಸಿರೆಳೆದರು. ಇದು ಶಿಕ್ಷಣದ ಮಹತ್ವ. ರಾಜಕಾರಣಿಗಳಿಂದ ಇದು ಸಾಧ್ಯವಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಮತ್ತು ಯುವಕರು ಆವಿಷ್ಕಾರಗಳನ್ನು ಕೈಗೊಳ್ಳುವ ಮೂಲಕ ದೇಶ ಅಭಿವೃದ್ಧಿಗೆ ಶ್ರಮಿಸಬೇಕು. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಮತ ಹಾಕುವ ಹಕ್ಕನ್ನು ಎಲ್ಲರಿಗೂ ನೀಡಿದ್ದಾರೆ. ಜನಪ್ರತಿನಿಧಿಗಳ ಆಯ್ಕೆ ಸಮಯದಲ್ಲಿ ಎಚ್ಚರ ವಹಿಸಬೇಕು ಎಂದು ಕಿವಿಮಾತು ಹೇಳಿದರು.