ಸಿಲಿಂಡರ್ ಸ್ಫೋಟದಲ್ಲಿ ತಂದೆ, ಮಗನಿಗೆ ಗಾಯ
Team Udayavani, Mar 6, 2017, 11:28 AM IST
ಬೆಂಗಳೂರು: ಅಡುಗೆ ಸಿಲಿಂಡರ್ ಸ್ಫೋಟಗೊಂಡು ತಂದೆ- ಮಗ ಗಾಯಗೊಂಡಿರುವ ಘಟನೆ ಯಲಹಂಕ ಉಪನಗರದ ನಾಗಾರ್ಜುನ ಅಪಾರ್ಟ್ಮೆಂಟ್ ಬಳಿ ಭಾನುವಾರ ಬೆಳಗಿನ ಜಾವ ನಡೆದಿದೆ.
ಯಲಹಂಕ ಉಪನಗರ ನಿವಾಸಿ ಕೃಷ್ಣನಂದಧಿರಾವ್(75), ಇವರ ಪುತ್ರ ಅನಂತರಾವ್(37) ಗಾಯಗೊಂಡವರು. ಇಬ್ಬರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅನಂತರಾವ್ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದು, ತಂದೆ, ಮಗ ಇಬ್ಬರು ಯಲಹಂಕ ಉಪನಗರದ 5ನೇ ಹಂತದಲ್ಲಿರುವ ನಾಗಾರ್ಜುನ ಅಪಾರ್ಟ್ಮೆಂಟ್ನ ಫ್ಲ್ಯಾಟ್ನಲ್ಲಿ ವಾಸವಿದ್ದಾರೆ.
ರಾತ್ರಿ ಮಲಗುವಾಗ ಸಿಲಿಂಡರ್ ಆಫ್ ಮಾಡಿರಲಿಲ್ಲ. ಸಿಲಿಂಡರ್ ಅನಿಲ ಸೋರಿಕೆಯಾಗಿ ಮನೆಯೆಲ್ಲ ಅವರಿಸಿತ್ತು. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕೃಷ್ಣನಂದರಾವ್ ಅವರು ಮೂತ್ರ ಮಾಡಲು ಎದ್ದಿದ್ದು, ಈ ವೇಳೆ ಮನೆಯ ಸ್ವೀಚ್ ಹಾಕಿದ್ದಾರೆ. ಮನೆಯಲ್ಲಿ ಅನಿಲ ಅವರಿಸಿದ್ದರಿಂದ ಸಿಲಿಂಡರ್ ಸ್ಫೋಟಗೊಂಡಿದೆ.
ಪರಿಣಾಮ ಕೃಷ್ಣನಂದ ಹಾಗೂ ಅನಂತರಾವ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮನೆಯ ಕಿಟಕಿ ಗಾಜುಗಳ ಒಡೆದಿವೆ. ಸ್ಫೋಟದ ಶಬ್ದಕ್ಕೆ ನೆರೆಮನೆಯ ನಿವಾಸಿಗಳು ಎಚ್ಚರಗೊಂಡಿದ್ದು, ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಬಳಿಕ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಸಂಬಂಧ ಈ ವರೆಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದರು.
ಸ್ಫೋಟಕ್ಕೆ ಮನೆಗಳು ಜಖಂ
ದೊಡ್ಡಬಳ್ಳಾಪುರ: ಸಿಲಿಂಡರ್ ಸ್ಫೋಟಗೊಂಡು ಮೂರು ಮನೆಗಳ ಚಾವಣಿ ಕುಸಿದು ಬಿದ್ದು, ವಸ್ತುಗಳೆಲ್ಲ ಚಲ್ಲಾಪಿಲ್ಲಿಯಾಗಿರುವ ಘಟನೆ ತಾಲೂಕಿನ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ತಾಲೂಕಿನ ಚಿಕ್ಕಬೆಳವಂಗಲದ ಜೈಶಂಕರ್ ಎಂಬುವವರ ಮನೆಯಲ್ಲಿ ಶನಿವಾರ ರಾತ್ರಿ 9 ಗಂಟೆ ವೇಳೆಗೆ ಅಡುಗೆ ಅನಿಲ ಸ್ಫೋಟಗೊಂಡು ಮನೆಯ ಚಾವಣಿ ಕುಸಿದಿದೆ. ಸಿಲಿಂಡರ್ ಸ್ಫೋಟದಿಂದ ಅಕ್ಕಪಕ್ಕದ ಮನೆಗಳೂ ಜಖಂಗೊಂಡಿದ್ದು, ಗೋಡೆಗಳು ಬಿರುಕುಬಿಟ್ಟಿವೆ.
ಸ್ಫೋಟ ಸಂಭವಿಸಿದಾಗ ಜೈಶಂಕರ್ ಹಾಗೂ ಪಕ್ಕದ ಮೂರು ಮನೆಯ ಕುಟುಂಬದವರು ಬೇಸಿಗೆ ದಗೆಯಿಂದಾಗಿ ಮನೆ ಹೊರಗಡೆ ಮಲಗಿದ್ದರು. ಇದರಿಂದಾಗಿ ಎಲ್ಲರ ಪ್ರಾಣ ಉಳಿದಿದೆ. ಅಡುಗೆ ಅನಿಲ ಸ್ಫೋಟಕ್ಕೆ ಇನ್ನು ನಿಖರವಾದ ಕಾರಣ ತಿಳಿದು ಬಂದಿಲ್ಲ. ದೊಡ್ಡಬೆಳವಂಗಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.