ಇದ್ದೂ ಇಲ್ಲದಂತಾದ ಜನೌಷಧ ಕೇಂದ್ರ
Team Udayavani, Aug 12, 2019, 3:07 AM IST
ಬೆಂಗಳೂರು: ನಗರದ ಪ್ರಮುಖ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧ ಕೇಂದ್ರಗಳ ಸ್ಥಿತಿ ಅಯೋಮಯವಾಗಿದ್ದು, ಈ ಕೇಂದ್ರಗಳು ಯಾವ ಸಮಯದಲ್ಲಿ ತೆರೆದಿರುತ್ತವೆ, ಯಾರು ನಿರ್ವಹಣೆ ಮಾಡುತ್ತಿದ್ದಾರೆ, ಯಾರ ವ್ಯಾಪ್ತಿಗೆ ಈ ಕೇಂದ್ರಗಳು ಒಳಪಟ್ಟಿರುತ್ತವೆ, ಯಾರಿಗೆ ದೂರು ನೀಡಬೇಕು ಎಂಬ ಗೊಂದಲ ಸಾರ್ವಜನಿಕರಲ್ಲಿ ಮೂಡಿದೆ.
ಬಡರೋಗಿಗಳಿಗೆ ಶೇ.30ರಿಂದ ಶೇ.70ರಷ್ಟು ರಿಯಾಯಿತಿ ದರದಲ್ಲಿ ಔಷಧ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜನೌಷಧ ಕೇಂದ್ರಗಳನ್ನು ಆರಂಭಿಸಿದೆ. ಅಂತೆಯೇ ವಿಕ್ಟೋರಿಯಾ ಸಮುತ್ಛಯ ಆಸ್ಪತ್ರೆಗಳು, ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆ, ಶಿವಾಜಿನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ಸೇರಿದಂತೆ ಬಹುತೇಕ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನೌಷಧ ಕೇಂದ್ರಗಳನ್ನು 2-3 ವರ್ಷಗಳ ಹಿಂದೆಯೇ ಆರಂಭಿಸಲಾಗಿದೆ. ಆದರೆ, ಈ ಕೇಂದ್ರಗಳು ಸದಾ ಬಾಗಿಲು ಮುಚ್ಚಿರುತ್ತವೆ. ಬಾಗಿಲು ತೆರೆದಿದ್ದರೂ ಅಗತ್ಯ ಔಷಧಗಳು ಸಿಗುವುದಿಲ್ಲ. ಹೀಗಾಗಿ, ಕೇಂದ್ರ ಸರ್ಕಾರದ ಮಹಾತ್ವಾಂಕ್ಷಿ ಯೋಜನೆ ಬಡರೋಗಿಗಳಿಗೆ ಮರೀಚಿಕೆಯಾಗಿದ್ದು, ಅವರು ಖಾಸಗಿ ಔಷಧ ಮಳಿಗೆಗಳಿಗೆ ತೆರಳಿ ಹೆಚ್ಚು ಹಣ ವ್ಯಯಿಸುವುದು ತಪ್ಪಿಲ್ಲ.
ದೂರಿಗೆ ಪ್ರತಿಕ್ರಿಯೆ ಇಲ್ಲ: ಈ ಕೇಂದ್ರಗಳು ಖಾಸಗಿ ವ್ಯಕ್ತಿ ಹಾಗೂ ಸಂಸ್ಥೆಗಳು ಸರ್ಕಾರದಿಂದ ಗುತ್ತಿಗೆ ಪಡೆದು ನಡೆಸುತ್ತಿವೆ. ಸರ್ಕಾರದಿಂದ ಔಷಧ ಕೇಂದ್ರ ತೆರೆಯಲು ಉಚಿತ ಸ್ಥಳ, ಔಷಧ ಖರೀದಿಗೆ ಸಬ್ಸಿಡಿ ಮತ್ತು ಕಂಪ್ಯೂಟರ್, ಇತರೆ ಉಪಕರಣಗಳಿಗೆಂದು ಎರಡು ಲಕ್ಷ ರೂ.ವರೆಗೆ ಆರ್ಥಿಕ ನೆರವು ನೀಡುತ್ತದೆ. ನಿಯಮದ ಪ್ರಕಾರ ಈ ಜನೌಷಧ ಮಳಿಗೆಗಳು ದಿನದ 24 ಗಂಟೆಯೂ ಸೇವೆ ಒದಗಿಸುವ ಜತೆಗೆ ನಿಗದಿ ಪಡೆಸಿರುವ ರಿಯಾಯಿತಿ ದರದಲ್ಲಿ ಜನರಿಗೆ ಔಷಧ ನೀಡಬೇಕು. ಆದರೆ ಈ ನಿಯಮಗಳು ಪಾಲನೆಯಾಗುತ್ತಿಲ್ಲ. ಜನೌಷಧ ಕೇಂದ್ರ ಏಕೆ ತೆರೆದಿಲ್ಲ ಎಂದು ಕೇಳಲು ಹೋದರೆ “ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು’ ವೈದ್ಯರು, ನಿವಾಸಿ ವೈದ್ಯಾಧಿಕಾರಿಗಳು, ಆಡಳಿತಾಧಿಕಾರಿಗಳು ಉತ್ತರಿಸುತ್ತಾರೆ ಎಂದು ರೋಗಿಗಳು ಹಾಗೂ ಅವರ ಸಂಬಂಧಿಕರು ತಿಳಿಸುತ್ತಾರೆ.
ವಿಕ್ಟೋರಿಯಾ ಸಮುತ್ಛಯದಲ್ಲಿ ವಾಣಿವಿಲಾಸ, ಮಿಂಟೊ, ನೆಫೊ ಹಾಗೂ ಯುರಾಲಜಿ ವಿಭಾಗ, ದಂತ ವೈದ್ಯಕೀಯ ಆಸ್ಪತ್ರೆಗಳಿದ್ದು, ನಿತ್ಯ ಒಂದು ಸಾವಿರಕ್ಕೂ ಹೆಚ್ಚು ರೋಗಿಗಳು ಭೇಟಿ ನೀಡುತ್ತಾರೆ. ಇಲ್ಲಿ ಒಂದೇ ಒಂದು ಜನೌಷಧ ಕೇಂದ್ರ ಸ್ಥಾಪಿಸಲಾಗಿದೆ. ಈ ಕೇಂದ್ರ ಬೆಳಗ್ಗೆಯಿಂದ ಸಂಜೆವರೆಗೆ ಮಾತ್ರ ತೆರೆದಿರುತ್ತದೆ. ಸರ್ಕಾರಿ ರಜಾ ದಿನಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಇದರಿಂದ ವಿಕ್ಟೋರಿಯ ಸಮುತ್ಛಯ ಆಸ್ಪತ್ರೆಗಳಿಗೆ ಬರುವ ಬಹುತೇಕ ರೋಗಿಗಳು ಖಾಸಗಿ ಔಷಧ ಮಳಿಗೆಗಳಲ್ಲಿ ಎಂಆರ್ಪಿ ದರ ನೀಡಿ ಔಷಧ ಖರೀದಿ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ.
ಮಾಹಿತಿ ಇಲ್ಲ: ಔಷಧ ಕೇಂದ್ರ ತೆರಿದಿರುವ ಸಮಯ ಹಾಗೂ ಲಭ್ಯವಿರುವ ಔಷಧಗಳ ಕುರಿತು ವಿಚಾರಣೆ ನಡೆಸಲು ಗುತ್ತಿಗೆ ಪಡೆದವರ ಹೆಸರು, ದೂರವಾಣಿ ಅಥವಾ ಸಹಾಯವಾಣಿ ಸಂಖ್ಯೆ ಸಿಗುವುದಿಲ್ಲ. ದೂರು ನೀಡಲು, ಕೇಂದ್ರ ಯಾರ ವ್ಯಾಪ್ತಿಗೆ ಬರುತ್ತದೆ ಎಂಬುದೂ ತಿಳಿದಿಲ್ಲ ಎನ್ನುತ್ತಾರೆ ರೋಗಿಗಳ ಸಂಬಂಧಿಕರು.
ಮಳಿಗೆ ಮುಚ್ಚಿ ಒಂದೂವರೆ ವರ್ಷವಾಯ್ತು!: ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಲ್ಲಿದ್ದ ಜನೌಷಧ ಮಳಿಗೆಯಲ್ಲಿ ಖಾಸಗಿ ಕಂಪನಿ ಔಷಧಗಳನ್ನು ಮಾರಾಟ ಮಾಡಲಾಗುತ್ತಿದೆ ಹಾಗೂ ಹೆಚ್ಚು ದರಕ್ಕೆ ಔಷಧ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಒಂದೂವರೆ ವರ್ಷದ ಹಿಂದೆ ಮಳಿಗೆಯನ್ನು ಮುಚ್ಚಲಾಗಿದೆ. ಆದರೆ, ಈವರೆಗೂ ಈ ಜನೌಷಧ ಕೇಂದ್ರ ಪುನರಾರಂಭವಾಗಿಲ್ಲ. ಮಲ್ಲೇಶ್ವರ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿಯೂ ಜನೌಷಧ ಮಳಿಗೆಯಲ್ಲಿ ಸಿಬ್ಬಂದಿ ಕೊರತೆಯಿಂದ ನಿಗದಿತ ಸಮಯದಲ್ಲಿ ಮಾತ್ರ ತೆರೆದಿರುತ್ತದೆ. ಜನರು ಪಡಿತರಕ್ಕೆ ಕಾದಂತೆ ಇಲ್ಲಿ ಔಷಧ ಖರೀದಿಗೆ ಕಾಯಬೇಕಾದ ಸ್ಥಿತಿ ಇದೆ. ಇನ್ನು ಕೇಂದ್ರ ಸರ್ಕಾರ ಹಾಗೂ ರಾಜ್ಯಸ ರ್ಕಾರದ ನೆರವಿನೊಂದಿಗೆ ನಗರದ ವಿವಿಧೆಡೆ ಸರ್ಕಾರಿ ಸಂಸ್ಥೆಗಳ ಆವರಣದಲ್ಲಿ 122 ಜನೌಷಧ ಮಳಿಗೆಗಳಿದ್ದು, ಬಹುತೇಕ ಮಳಿಗೆಗಳ ಸ್ಥಿತಿ ಹೀಗೇ ಇದೆ.
ಪಾಲನೆ ಆಗದ ಇಲಾಖೆ ಆದೇಶ: “ಆಯಾ ಆಸ್ಪತ್ರೆಗಳ ಆವರಣದಲ್ಲಿ ಪ್ರಾರಂಭಿಸಿರುವ ಜನೌಷಧ ಕೇಂದ್ರಗಳ ಸಂಪೂರ್ಣ ಮೇಲ್ವಿಚಾರಣೆ ಹೊಣೆ ಆಡಳಿತ ವೈದ್ಯಾಧಿಕಾರಿಗಳದ್ದಾಗಿದೆ’ ಎಂದು ಆರೋಗ್ಯ ಇಲಾಖೆ ಕಳೆದ ತಿಂಗಳು ಸುತ್ತೋಲೆ ಹೊರಡಿಸಿದೆ. ಜತೆಗೆ ವಾರಕ್ಕೊಮ್ಮೆ ಕೇಂದ್ರಗಳು ನಿಯಮ ಪಾಲಿಸುತ್ತಿವೆಯೇ ಎಂಬ ಕುರಿತು ತಪಾಸಣೆ ನಡೆಸಿ ಆಯುಕ್ತರ ಕಚೇರಿಗೆ ವರದಿ ನೀಡಲು ಆದೇಶಿಸಿದೆ. ಈ ನಿಯಮ ವಿಕ್ಟೋರಿಯಾ, ಬೌರಿಂಗ್ ಆಸ್ಪತ್ರೆ ಸೇರಿದಂತೆ ನಗರದ ಬಹುತೇಕ ಆಸ್ಪತ್ರೆಗಳಲ್ಲಿ ಪಾಲನೆ ಆಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
“24*7 ಸೇವೆ’ ಎಂದು ಬೋರ್ಡ್ ಇದ್ದರೂ ವಿಕ್ಟೋರಿಯಾ ಆಸ್ಪತ್ರೆ ಜನೌಷಧ ಕೇಂದ್ರ ಬೆಳಗ್ಗೆಯಿಂದ ಸಂಜೆವರೆಗೆ ಮಾತ್ರ ತೆರೆದಿರುತ್ತದೆ. ಕಡಿಮೆ ಬೆಲೆ ಎಂದು ಔಷಧ ಖರೀದಿಸಲು ಹೋದರೆ, ಪ್ರತಿ ಬಾರಿಯೂ “ನಮ್ಮಲ್ಲಿ ಈ ಔಷಧ ಇಲ್ಲ’ ಎನುತ್ತಾರೆ.
-ಆನಂದಪ್ಪ, ರೋಗಿ ಸಂಬಂಧಿ
ಆಸ್ಪತ್ರೆ ಆವರಣದ ಜನೌಷಧ ಕೇಂದ್ರಗಳ ನಿರ್ವಹಣೆ ಆಯಾ ಆಸ್ಪತ್ರೆ ಆಡಳಿತಾಧಿಕಾರಿಗಳದ್ದು. ಗುತ್ತಿಗೆ ಪಡೆದಿರುವ ಸಂಸ್ಥೆ, ವ್ಯಕ್ತಿಗಳು ಸಿಬ್ಬಂದಿ ಕೊರತೆಯಿಂದ ನಿರ್ವಹಣೆ ಕಷ್ಟ ಎನ್ನುತ್ತಿದ್ದಾರೆ. ಶೀಘ್ರವೇ ಅಗತ್ಯ ಕ್ರಮ ಕೈಗೊಳ್ಳುತ್ತೇವೆ.
-ವಿವೇಕ್ ದೊರೈ, ಆರೋಗ್ಯ ಇಲಾಖೆ ಉಪನಿರ್ದೇಶಕ
* ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಸೆರೆ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ
MUST WATCH
ಹೊಸ ಸೇರ್ಪಡೆ
O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ