ಡಿಜಿಪಿ ಕಚೇರಿ ಕೂಗಳತೆ ದೂರದಲ್ಲೇ ಕೊಲೆ!
Team Udayavani, May 13, 2019, 3:03 AM IST
ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಕೇಂದ್ರ ಕಚೇರಿಯ ಕೂಗಳತೆ ದೂರದಲ್ಲಿಯೇ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ವ್ಯಕ್ತಿಯೊಬ್ಬರನ್ನು ಕೊಚ್ಚಿ ಕೊಲೆಮಾಡಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ಆಂಧ್ರಪ್ರದೇಶ ಮೂಲದ ಶಿವನಾಯಕ್ (45) ಕೊಲೆಯಾದವರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಹಲಸೂರುಗೇಟ್ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಿಗಳ ಬಂಧನಕ್ಕೆ ಬಲೆಬೀಸಿದ್ದಾರೆ.
ಕುಟುಂಬದ ಜತೆ ಬನಶಂಕರಿಯಲ್ಲಿ ನೆಲೆಸಿದ ಶಿವನಾಯಕ್, ಕಂಪ್ರಷರ್ ಟ್ರ್ಯಾಕ್ಟರ್ ಹೊಂದ್ದಿರು. ಶನಿವಾರ ರಾತ್ರಿ ವೇಣುಗೋಪಾಲ್ ಎಂಬಾತ ನೃಪತುಂಗ ರಸ್ತೆಯಲ್ಲಿರುವ ಫುಟ್ಪಾತ್ ಕಾಮಗಾರಿಗೆ ಟ್ರ್ಯಾಕ್ಟರ್ ತೆಗೆದುಕೊಂಡು ಬರುವಂತೆ ಸೂಚಿಸಿದ್ದಾರೆ.
ಹೀಗಾಗಿ ಶಿವನಾಯಕ್ ಅಲ್ಲಿಗೆ ತೆರಳಿದ್ದರು. ಆದರೆ, ರಾತ್ರಿ 11.45ರ ಸುಮಾರಿಗೆ ಶಿವನಾಯಕ್ ಸ್ಥಳದಲ್ಲಿ ಕಾಣಿಸಿಲ್ಲ. ಎಲ್ಲಿಯೋ ಹೋಗೊರಬಹುದು ಎಂದು ಕೆಲಸಗಾರರು ಸುಮ್ಮನಿದ್ದಾರೆ.
ಕೆಲ ಸಮಯದ ನಂತರ ಕೆಲಸದವರು ಕೆ.ಆರ್.ಸರ್ಕಲ್ ಕಡೆಗೆ ಹೋದಾಗ ಶಿವನಾಯಕ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಇದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಎದೆ ಭಾಗಕ್ಕೆ ಚಾಕು ಇರಿದಿದ್ದರಿಂಧ ಶಿವನಾಯಕ್ ಮೃತಪಟ್ಟಿರುವುದು ಗೊತ್ತಾಗಿದೆ.
ಕೊಲೆಯಾದ ಸ್ಥಳದಲ್ಲಿ ಶಿವನಾಯಕ್ ಮೊಬೈಲ್, ಜೇಬಿನಲ್ಲಿದ್ದ ಸ್ವಲ್ಪ ಹಣ ಹಾಗೇ ಇದೆ. ಶಿವನಾಯಕ್ ಅವರ ಪುತ್ರಿ ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಅಧಿಕಾರಿ ಹೇಳಿದರು.
ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ: ಶಿವನಾಯಕ್ ಕೊಲೆಗೆ ನಿಖರ ಕಾರಣವನ್ನು ಪೊಲೀಸರು ಮುಚ್ಚಿಡುತ್ತಿದ್ದಾರೆ ಎಂದು ಆರೋಪಿಸಿದ ಸಂಬಂಧಿಕರು ಹಲಸೂರು ಗೇಟ್ ಠಾಣೆ ಮುಂದೆ ಕೆಲಕಾಲ ಪ್ರತಿಭಟನೆ ನಡೆಸಿದರು.
ಬಳಿಕ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಶಿವನಾಯಕ್ ಅವರನ್ನು ಗುತ್ತಿಗೆದಾರರ ಕಡೆಯವರೇ ಕೊಲೆಗೈದಿರುವ ಶಂಕೆಯಿದೆ ಎಂದು ಸಂಬಂಧಿಕರು ಮೌಖೀಕವಾಗಿ ಆರೋಪಿಸಿದ್ದು, ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ಹೇಳಿದರು.