ಸಂಪುಟ ಇಲ್ಲದ ಸರ್ಕಾರ ವಜಾಗೊಳಿಸಿ: ಉಗ್ರಪ್ಪ
Team Udayavani, Aug 14, 2019, 3:06 AM IST
ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿ 17 ದಿನ ಕಳೆದರೂ ಸಂಪುಟ ರಚನೆ ಮಾಡದಿರುವುದು ಸಂವಿಧಾನದ 163ನೇ ವಿಧಿ ಪ್ರಕಾರ ಕಾನೂನು ಉಲ್ಲಂಘನೆ. ರಾಜ್ಯಪಾಲರು ಸರ್ಕಾರವನ್ನು ವಜಾಗೊಳಿಸಬೇಕು ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಾಮಮಾರ್ಗದಲ್ಲಿ ಸರ್ಕಾರ ರಚನೆ ಮಾಡಲಾಗಿದೆ. ಸರ್ಕಾರ ರಚನೆಯಾಗಿ 17 ದಿನಗಳೂ ಕಳೆದರೂ ಇನ್ನೂ ಮಂತ್ರಿಮಂಡಲ ರಚನೆ ಆಗಿಲ್ಲದೇ ಇರುವುದು ರಾಜ್ಯದ ಇತಿಹಾಸದಲ್ಲಿಯೇ ಮೊದಲು. ರಾಜ್ಯಪಾಲರು ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಿಂದ 26 ಬಿಜೆಪಿಯ ಸಂಸದರು ಆಯ್ಕೆಯಾಗಿದ್ದು, ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ, ಪ್ರವಾಹಕ್ಕೆ ಹೆಚ್ಚಿನ ಪರಿಹಾರ ದೊರಕಿಸಿಕೊಡಬೇಕು. ಕೇಂದ್ರ ಸರ್ಕಾರ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಹಾಗೂ ಕೇರಳಕ್ಕೆ ಹೆಚ್ಚಿನ ಪರಿಹಾರ ನೀಡಿದೆ. ಕರ್ನಾಟಕಕ್ಕೆ ಮಾತ್ರ ತಾರತಮ್ಯ ಮಾಡಲಾಗುತ್ತಿದೆ ಎಂದರು.
2009 ರಲ್ಲಿ ಯಡಿಯೂರಪ್ಪಮುಖ್ಯಮಂತ್ರಿಯಾಗಿದ್ದಾಗಲೂ ರಾಜ್ಯದಲ್ಲಿ ನೆರೆ ಬಂದಿತ್ತು. ಆಗಲೂ ಜನರಿಂದ ದೇಣಿಗೆ ಸಂಗ್ರಹಿಸಲಾಗಿತ್ತು. ಆಗ ಸಂಗ್ರಹಿಸಿದ ಹಣ ಎಲ್ಲಿ ಹೋಯ್ತು? ಎಷ್ಟು ಮನೆಗಳನ್ನು ನಿರ್ಮಾಣ ಮಾಡಿದ್ದೀರಿ ಎಂದು ಯಡಿಯೂರಪ್ಪ ಅವರನ್ನು ಉಗ್ರಪ್ಪ ಪ್ರಶ್ನಿಸಿದರು.
ಬಕ್ರೀದ್ ಭೋಜನಕ್ಕೆ ಸಮರ್ಥನೆ: ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಮಾಜಿ ಸಚಿವ ನಜೀರ್ ಅಹಮದ್ ಅವರು ಏರ್ಪಡಿಸಿದ್ದ ಔತಣಕೂಟದಲ್ಲಿ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದನ್ನು ದೊಡ್ಡ ವಿಚಾರವೆನ್ನುವಂತೆ ಬಿಂಬಿಸಲಾಗಿದೆ. ಊಟಕ್ಕೆ ಕರೆದಾಗ ಹೋಗುವುದು ವಾಡಿಕೆ. ಹಬ್ಬಕ್ಕೆ ಹೋಗಿದ್ದು ಬಿಟ್ಟರೆ, ಬಿರಿಯಾನಿ ಬಡಿಸುತ್ತಾರೆ ಎಂದು ಯಾರೂ ಹೋಗಿರಲಿಲ್ಲ. ಕೆಲವರು ಬಿರಿಯಾನಿ ತಿಂದಿದ್ದಾರೆ. ಇದನ್ನೇ ದೊಡ್ಡದಾಗಿ ಬಿಂಬಿಸಿರುವುದು ಸರಿಯಲ್ಲ ಎಂದು ಉಗ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ವಿಶೇಷ ಘೋಷಣೆಗೆ ಒತ್ತಾಯ: ಮುಖ್ಯಮಂತ್ರಿ ಯಡಿಯೂರಪ್ಪಅವರಿಗೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಕಂಡರೆ ಭಯ. ಹೀಗಾಗಿ ಅವರು ನೆರೆ ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರುತ್ತಿಲ್ಲ. ಕೇಂದ್ರ ನಾಯಕರ ಬಗ್ಗೆ ಭಯವಿದೆ ಎನ್ನುವುದನ್ನು ಯಡಿಯೂರಪ್ಪಸಾರ್ವಜನಿಕರ ಮುಂದೆ ಬಹಿರಂಗಪಡಿಸಬೇಕು. ನೆರೆ ಸಂತ್ರಸ್ಥರ ಸಹಾಯಕ್ಕೆ ಸರ್ಕಾರದ ಜೊತೆ ನಾವು ಇದ್ದೇವೆ. ಮುಖ್ಯಮಂತ್ರಿ ಶೀಘ್ರವೇ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಿ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಉಗ್ರಪ್ಪ ಆಗ್ರಹಿಸಿದರು.
ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಲಿ: ಪ್ರವಾಹದಿಂದಾಗಿರುವ ನಷ್ಟದ ಬಗ್ಗೆ ಸರ್ಕಾರಕ್ಕೆ ಸರಿಯಾದ ಮಾಹಿತಿಯಿಲ್ಲ. ಕೇಂದ್ರ ಸರ್ಕಾರಕ್ಕೆ ಸಮಗ್ರ ಮಾಹಿತಿಯನ್ನೂ ನೀಡಿಲ್ಲ. ಪ್ರಧಾನಿ ಮೋದಿ ಕಾಡಿಗೆ ಯಾರಾದರೂ ಕರೆದರೆ ಹೋಗುತ್ತಾರೆ. ಆದರೆ, ರಾಜ್ಯಕ್ಕೆ ಭೇಟಿ ನೀಡುತ್ತಿಲ್ಲ. ಕರ್ನಾಟಕದ ಬಗ್ಗೆ ಪ್ರಧಾನಿ ಮೋದಿ ಅವರಿಗೆ ನಿಜವಾಗಿಯೂ ಕಳಕಳಿ ಇದ್ದರೆ ಅವರು ಕೂಡಲೇ ರಾಜ್ಯಕ್ಕೆ ಭೇಟಿ ಕೊಡಬೇಕು. ರಾಜ್ಯದಲ್ಲಿ ಒಂದು ಕಡೆ ಅತೀವೃಷ್ಟಿ ಕೆಲವು ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಇರುವುದರಿಂದ ಕೂಡಲೇ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿ ತಕ್ಷಣವೇ ಕನಿಷ್ಠ 5 ಸಾವಿರ ಕೋಟಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ